ಮಳೆಗಾಲ ಮುಗಿದ ಮೇಲೆ ಡಾಂಬರೀಕರಣ ಕಾಮಗಾರಿ ಆರಂಭ: ಪೌರಾಯುಕ್ತ ಬಸವರಾಜ್‌

KannadaprabhaNewsNetwork |  
Published : Aug 15, 2025, 01:00 AM IST
ಚಿಕ್ಕಮಗಳೂರು ನಗರಸಭೆ. | Kannada Prabha

ಸಾರಾಂಶ

ಚಿಕ್ಕಮಗಳೂರು, ನಗರಸಭೆ ವ್ಯಾಪ್ತಿಯಲ್ಲಿರುವ ರಸ್ತೆಗಳ ಡಾಂಬರೀಕರಣಕ್ಕೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಕೋಟ್ಯಂತರ ರು. ಬಿಡುಗಡೆ ಮಾಡಿದೆ. ಹಾಗಾಗಿ ಟೆಂಡರ್‌ ಪ್ರಕ್ರಿಯೆ ಕೂಡ ಮುಗಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌ ತಿಳಿಸಿದ್ದಾರೆ.

- ಹಲವು ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣ । ನೀಡಲಾಗಿದೆ ಕಾರ್ಯಾದೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರಸಭೆ ವ್ಯಾಪ್ತಿಯಲ್ಲಿರುವ ರಸ್ತೆಗಳ ಡಾಂಬರೀಕರಣಕ್ಕೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಕೋಟ್ಯಂತರ ರು. ಬಿಡುಗಡೆ ಮಾಡಿದೆ. ಹಾಗಾಗಿ ಟೆಂಡರ್‌ ಪ್ರಕ್ರಿಯೆ ಕೂಡ ಮುಗಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಕ್ಷೇತ್ರದ ಶಾಸಕರು ತಮ್ಮ ಶಾಸಕರ ನಿಧಿಯಲ್ಲಿ ₹10 ಕೋಟಿ ರು. ನಗರಸಭೆಗೆ ರಸ್ತೆಗಳ ಡಾಂಬರೀಕರಣಕ್ಕೆ ನೀಡಿದ್ದಾರೆ. ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ಮುಗಿಸಿ, ಗುತ್ತಿಗೆ ದಾರರಿಗೆ ಕಾರ್ಯಾದೇಶ ನೀಡಲಾಗಿದೆ ಎಂದರು.

ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಬಡಾವಣೆಗಳಲ್ಲಿನ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಚಿಕ್ಕಮಗಳೂರು ನಗರಸಭೆಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಿದೆ. 15ನೇ ಹಣಕಾಸು ಯೋಜನೆಯಡಿ ₹6.59 ಕೋಟಿ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ₹2.63 ಕೋಟಿಯನ್ನು ರಸ್ತೆ ಮತ್ತು ಚರಂಡಿಗೆ ಬಳಸಿಕೊಳ್ಳಲಾಗುವುದು. ಕುಡಿಯುವ ನೀರಿನ ಸಂಪರ್ಕಕ್ಕೆ ಪೈಪ್‌ ಲೈನ್‌ ಅಳವಡಿಕೆಗೆ ₹2 ಕೋಟಿ ಹಾಗೂ ಕಸ ವಿಂಗಡಣೆ ಘಟಕದಲ್ಲಿ ಶೆಡ್‌ ನಿರ್ಮಾಣ, ಮಳೆ ನೀರು ಕೊಯ್ಲು, ಇಂದಾವರದಲ್ಲಿರುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ರಸ್ತೆ ನಿರ್ಮಾಣಕ್ಕೆ ₹2 ಕೋಟಿ ಬಳಸಿಕೊಳ್ಳಲಾಗುತ್ತಿದ್ದು, ಈ ಕಾಮಗಾರಿಗಳಿಗೂ ಕೂಡ ಟೆಂಡರ್‌ ಪ್ರಕ್ರಿಯೆ ಮುಗಿಸಲಾಗಿದೆ. ರಾಜ್ಯ ಸಭಾ ಸದಸ್ಯರಾದ ಜೈರಾಮ್ ರಮೇಶ್‌ ಚಿಕ್ಕಮಗಳೂರು ನಗರದ ರಸ್ತೆಗಳ ಅಭಿವೃದ್ಧಿಗೆ ₹2 ಕೋಟಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಬೇಲೂರಿನ ಯಗಚಿ ಜಲಾಶಯದಲ್ಲಿ ಜಾಕ್‌ವೆಲ್‌ ಅಳವಡಿಸಲು ₹60 ಲಕ್ಷ ಹಾಗೂ ಮುಗುಳವಳ್ಳಿಯ ಪಂಪ್‌ಹೌಸ್‌ನಲ್ಲಿ ಮೋಟಾರ್‌ ಅಳವಡಿಸಲು ₹65 ಲಕ್ಷ ರು. ಕಾಯ್ದಿರಿಸಲಾಗಿದೆ. ಸ್ವಚ್ಛ ಭಾರತ್‌ ಮಿಷನ್‌ - 2.4 ಚಿಕ್ಕಮಗಳೂರು ನಗರಸಭೆಗೆ ₹4 ಕೋಟಿ ರು. ಬಿಡುಗಡೆಯಾಗಿದ್ದು, ಇಂದಾವರದ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಶೆಡ್‌ ನಿರ್ಮಾಣ ಹಾಗೂ ಹೊಸ ಘಟಕ ನಿರ್ಮಾಣ, ಸಿವಿಲ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಎಸ್ಸಿ/ಎಸ್ಟಿ. ವೈಯಕ್ತಿಕ ಮತ್ತು ಸಮುದಾಯ ಕಾರ್ಯಕ್ರಮಗಳಿಗೆ ₹9.60 ಲಕ್ಷ ಬಳಸಿಕೊಳ್ಳಲಾಗುವುದು ಎಂದರು.

ಎಸ್‌ಎಫ್‌ಸಿಯಡಿಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಬೆಡ್‌, ಕಾಟ್‌, ಕುಡಿಯುವ ನೀರಿನ ಕಾಮಗಾರಿಗಳಿಗೆ ₹20 ಲಕ್ಷ, 2021-22ನೇ ಸಾಲಿನಿಂದ ಈವರೆಗೆ ಉಳಿದಿರುವ ವಿವಿಧ ಅನುದಾನಗಳಲ್ಲಿ ₹ 12 ಲಕ್ಷ ರು.ಗಳನ್ನು ಪಾರ್ಕ್‌ಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಅಮೃತ್‌ - 2 ಯೋಜನೆಯಡಿ ಕೋಟೆ ಕೆರೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ₹3.20 ಕೋಟಿ ರು. ಮೀಸಲಿಡಲಾಗಿದೆ. ಡಿಪಿಆರ್‌ ಕೂಡ ಅಂತಿಮ ಹಂತದಲ್ಲಿದೆ. ಟೆಂಡರ್‌ ಪ್ರಕ್ರಿಯೆ ಸದ್ಯದಲ್ಲೇ ಆರಂಭಿಸಲಾಗುವುದು. ನಗರದ ಹೌಸ್‌ ಬೋರ್ಡ್‌ನಲ್ಲಿರುವ ನಾಗದೇವತೆ ಪಾರ್ಕ್‌ ಅವರಿಗೆ ₹80 ಲಕ್ಷ ರು. ಮೀಸಲಿಡಲಾಗಿದೆ. ಈ ಕಾಮಗಾರಿಯ ಡಿಪಿಆರ್‌ ಅಂತಿಮ ಹಂತದಲ್ಲಿದೆ.

---- ಬಾಕ್ಸ್‌ ----ಸ್ವಚ್ಛತೆ ಕುರಿತು ಅರಿವುಸ್ವಚ್ಛ ಭಾರತ ಮಿಷನ್ ೨.೦ ಯೋಜನೆಯಡಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ನಗರಸಭೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀದಿ ನಾಟಕ, ಗೋಡೆ ಬರಹ, ಮ್ಯಾರಥಾನ್‌, ಎಲ್‌ಇಡಿ ಬೋರ್ಡ್‌, ಮೊಬೈಲ್‌ ಆಫ್‌ ಮೂಲಕ ಅರಿವು ಮೂಡಿಸಲಾಗುವುದು. ಶನಿವಾರ ಬೆಳಿಗ್ಗೆ 7 ಗಂಟೆಗೆ ನಗರದ ತಾಲೂಕು ಕಚೇರಿಯಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ಮೂಲಕ ನಗರಸಭಾ ಕಚೇರಿವರೆಗೆ ವಾಕಥಾನ್-ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೌರಾಯುಕ್ತ ಬಸವರಾಜ್‌ ತಿಳಿಸಿದರು.

--- ಕೋಟ್‌--

ಚಿಕ್ಕಮಗಳೂರು ನಗರದ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ನೀಡಲು 5 ಬಾರಿ ಟೆಂಡರ್‌ ಕರೆದರೂ ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ.

- ಬಸವರಾಜ್‌

ಪೌರಾಯುಕ್ತ 14 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ.

14 ಕೆಸಿಕೆಎಂ 3ಬಿ.ಸಿ. ಬಸವರಾಜ್‌

ಪೌರಾಯುಕ್ತರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌