ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕ್ರಮ ಖಂಡಿಸಿ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕ್ರಮ ಖಂಡಿಸಿ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದರು.ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಲು ಶ್ರಮಿಸಿದ ಪ್ರಭಾವಿ ನಾಯಕನನ್ನು ಏಕಾಏಕಿ ಸಚಿವ ಸಂಪುಟದಿಂದ ತೆಗೆದು ಅಪಮಾನ ಮಾಡಲಾಗಿದೆ.ರಾಜಣ್ಣ ಅವರು ಸತ್ಯ ಹೇಳಿದಕ್ಕೆ ವಜಾ ಮಾಡಲಾಗಿದೆ.ರಾಜಣ್ಣ ಅವರನ್ನ ವಜಾ ಮಾಡಿರುವುದು ಇಡೀ ರಾಜ್ಯದ ನಾಯಕ ಜನಾಂಗಕ್ಕೆ ತುಂಬಾ ನೋವಾಗಿದೆ. ನೇರವಾಗಿ ಮಾತನಾಡುವುದು ರಾಜಣ್ಣ ನವರ ಗುಣ. ಇದರ ಹಿಂದೆ ಕೆಲವರ ಪಿತೂರಿ ಇದೆ. ವಾಲ್ಮೀಕಿ ಸಮಾಜವನ್ನು ತುಳಿಯುವ ಹುನ್ನಾರ ನಡೆದಿದೆ. ಈ ಹಿಂದೆ ಬಳ್ಳಾರಿ ನಾಗೇಂದ್ರ, ಈಗ ಕೆ.ಎನ್.ರಾಜಣ್ಣನವರನ್ನು ರಾಜಕೀಯವಾಗಿ ತುಳಿಯಲಾಗಿದೆ ಎಂದು ಆರೋಪಿಸಿದರು. ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳದೆ ಹೋದರೆ ಮುಂದಿನ ದಿನಗಳಲ್ಲಿ ಗುಬ್ಬಿಯಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ವಾಲ್ಮೀಕಿ ಸಮಾಜದ ಮುಖಂಡ ಸಾಗಸಂದ್ರ ದೇವರಾಜು ಮಾತನಾಡಿ ಪಿತೂರಿ ಮಾಡಿ ಸಚಿವ ಸ್ಥಾನದಿಂದ ತೆಗೆದಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ನೋವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಮತ್ತೆ ಸ್ಥಾನಮಾನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗಳಿಸಲು ಕೆ.ಎನ್.ಆರ್ ಕೊಡುಗೆ ಇದೆ. ಮತ್ತೆ ಗೌರವದ ಸ್ಥಾನಮಾನ ನೀಡಬೇಕು. ಇಲ್ಲವಾದಲ್ಲಿ ಗುಬ್ಬಿ ಬಂದ್ ಮಾಡಿ, ನಿರಂತರ ಹೋರಾಟ ನಡೆಸುವುದಾಗಿ ಹೇಳಿದರು. ಮಾಜಿ ಎಪಿಎಂಸಿ ಅಧ್ಯಕ್ಷ ಲಕ್ಷ್ಮೀರಂಗಯ್ಯ ಮಾತನಾಡಿ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿರುವುದು ಇಡಿ ನಾಯಕ ಜನಾಂಗಕ್ಕೆ ತುಂಬ ಲಕ್ಷಾಂತರ ಅಭಿಮಾನಿಗಳಿಗೆ ನೋವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಮತ್ತೆ ಸ್ಥಾನಮಾನ ನೀಡಿ ಗೌರವಿಸಬೇಕು. ಜಿಲ್ಲೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ರಾಜಣ್ಣ ಅವರು ಹೊಂದಿದ್ದಾರೆ. ಚುನಾವಣೆಯಲ್ಲಿ ಯಾರನ್ನು ಬೇಕಾದರೂ ಗೆಲ್ಲಿಸಲು ಹಾಗೂ ಸೋಲಿಸಬಲ್ಲ ಸಾಮರ್ಥ್ಯವನ್ನು ರಾಜಣ್ಣ ಅವರಲ್ಲಿ ಇದೆ.
ಜಿಲ್ಲೆಯ ಬಡ ಜನರ ಪಾಲಿಗೆ ದೇವರಾಜ ಅರಸು ಆಗಿ ಸೇವೆ ಮಾಡುತ್ತಿರುವ ಕೆ.ಎನ್.ರಾಜಣ್ಣನವರಿಗೆ ಈ ರೀತಿ ಅಪಮಾನ ಮಾಡಿರುವುದನ್ನು ಸಹಿಸಲಾಗುವುದಿಲ್ಲ. ಪುನ: ಸಚಿವ ಸ್ಥಾನ ನೀಡದಿದ್ದರೆ ಅಭಿಮಾನಿಗಳನ್ನು ಕಾಂಗ್ರೆಸ್ ಪಕ್ಷ ಕಳೆದುಕೊಳ್ಳಬೇಕಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ , ಮುಖಂಡರಾದ ವಿಶ್ವ ಯಕ್ಕಲ್ಲಕಟ್ಟೆ , ಹಾಗಲವಾಡಿ ಶಂಕರ್ , ಎಚ್. ಡಿ.ಎಲ್ಲಪ್ಪ ,ನಾಗೇಶ್ , ಚೇತನ್ , ಮಂಜುನಾಥ್ ,ವಿದ್ಯಾಸಾಗರ್, ಕಂಚೊರಾಯಪ್ಪ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.