ಕುಂದಾಪುರ : ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಲಂಚದ ಪ್ರಕರಣದ ಕುರಿತಾಗಿ ವರದಿ ಮಾಡಿದ ಕನ್ನಡಪ್ರಭ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ನಡೆಸಿದ ಹಲ್ಲೆ ಖಂಡಿಸಿ ಹಾಗೂ ಆತನನ್ನು ಬಂಧಿಸಿ, ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ (ಡಿವೈಎಫ್ಐ) ವತಿಯಿಂದ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಸುರೇಶ್ ಕಲ್ಲಾಗರ ಅವರು, ಇಂತವರು ವೈದ್ಯ ವೃತ್ತಿಗೆ ಕಳಂಕ. ಕೂಡಲೇ ಆರೋಗ್ಯ ಸಚಿವರು ಇವರನ್ನು ವಜಾಗೊಳಿಸಿ, ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಹೆಚ್. ನರಸಿಂಹ, ಡಿವೈಎಫ್ಐ ಮಾಜಿ ಕಾರ್ಯದರ್ಶಿ ಚಂದ್ರಶೇಖರ್ ಆರೋಪಿಯ ಬಂಧನಕ್ಕೆ ಆಗ್ರಹಿಸಿದರು. ಡಿವೈಎಫ್ ಐ ಮುಖಂಡರಾದ ಗಣೇಶ್ ದಾಸ್, ರಾಜ ಬಿ.ಟಿ.ಆರ್, ರವಿ ವಿ.ಎಂ, ಮಂಜುನಾಥ್ ಶೋಗನ್, ಉದಯ ಟೈಲರ್, ಸಂಪತ್ ಕುಮಾರ್, ಚಂದ್ರ ಬಿ.ಟಿ.ಆರ್, ಗಣೇಶ ಕಲ್ಲಾಗರ, ರಾಜೀವ ಪಡುಕೋಣೆ, ಸಂತೋಷ್ ಹೆಮ್ಮಾಡಿ, ರಾಘವೇಂದ್ರ ದೋಣಿಮನೆ ಮತ್ತಿತರರು ಉಪಸ್ಥಿತರಿದ್ದರು.