ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಬಳಿಕ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಮಾ.6 ರಂದು ಬಜೆಟ್ ಮಂಡನೆ ಮೂಲಕ ಆರಂಭಗೊಂಡ ಅಧಿವೇಶನವು 13 ದಿನ 80 ಗಂಟೆ 12 ನಿಮಿಷಗಳ ಕಾಲ ವಿಧಾನಸಭೆ ಕಲಾಪ ನಡೆದಿದೆ. ಈ ಪೈಕಿ ಬಜೆಟ್ ಮೇಲಿನ ಚರ್ಚೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ 50 ಸದಸ್ಯರು 24 ಗಂಟೆ 45 ನಿಮಿಷಗಳ ಚರ್ಚಿಸಿದ್ದು ಒಂದು ದಾಖಲೆಯಾದರೆ, ಮಾ.24 ರಂದು ಬೆಳಗ್ಗೆ 11.35 ರಿಂದ ಆರಂಭವಾದ ವಿಧಾನಸಭೆ ಕಲಾಪವು ಮಧ್ಯರಾತ್ರಿ 1.42 ರವರೆಗೆ ಅಂದರೆ, 12 ಗಂಟೆ 41 ನಿಮಿಷಗಳ ಕಾಲ ನಡೆದಿದ್ದು ಮತ್ತೊಂದು ದಾಖಲೆಯಾಗಿದೆ. ಸದಸ್ಯರು ಆಸಕ್ತಿಯಿಂದ ಚರ್ಚೆಗಳಲ್ಲಿ ಭಾಗವಹಿಸಿದ್ದು ವಿಶೇಷ. ಬಜೆಟ್ ಚರ್ಚೆ ಮೇಲೆ ಮುಖ್ಯಮಂತ್ರಿಯವರು 6 ಗಂಟೆಗಳ ಉತ್ತರ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ವಿಧಾನಸಭೆ ಅವಧಿ ಪೂರ್ಣಗೊಳ್ಳುವ ಮೊದಲೇ ಶಾಸಕರ ಗ್ರೂಪ್ ಫೊಟೋ ತೆಗೆಸಿದ್ದು, ಹಲವು ಚರ್ಚೆಗೆ ಕಾರಣವಾಗಿದೆಯಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಆ ಸ್ಥಾನ, ಈ ಹುದ್ದೆ ಅಂತ ಏನೂ ಇಲ್ಲ. ಯಾವ ಕೆಲಸ ಕೊಟ್ಟರೂ ಪ್ರಾಮಾಣಿಕವಾಗಿ ಮಾಡಿಕೊಂಡು ಹೊಗುತ್ತೇನೆ. ಈಗ ಸ್ಪೀಕರ್ ಸ್ಥಾನವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ತೃಪ್ತಿ ಇದೆ ಎಂದರು.