90 ಸಾವಿರ ಸಂಗ್ರಹಿಸಿ ವಿದ್ಯಾರ್ಥಿ ಸಾಯಿಕುಮಾರ್ ತಾಯಿಗೆ ವಿತರಣೆ
ಕನ್ನಡಪ್ರಭ ವಾರ್ತೆ ಬೀದರ್
ನಗರದ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿಸಿಎ ವಿದ್ಯಾರ್ಥಿಯು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀಕಾಂತ ದೊಡ್ಡಮನಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯಿಂದ ಒಂದು ದಿನದಲ್ಲಿ 90,060 ರು. ಸಂಗ್ರಹಿಸಿ ವಿದ್ಯಾರ್ಥಿ ಸಾಯಿಕುಮಾರ್ ಅವರ ತಾಯಿಗೆ ನೀಡಿದ್ದಾರೆ.ಕಾಲೇಜಿನ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆತ ತ್ರೀವವಾಗಿ ಗಾಯಗೊಂಡು ನಗರದ ಗುರುನಾನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿದ್ಯಾರ್ಥಿ ಕುಟುಂಬದವರು ಬಡವರಾಗಿದ್ದು ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೇ ಪರದಾಡುತ್ತಿರುವಾಗ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ವಿಭಾಗದ ವಿದ್ಯಾರ್ಥಿಗಳು ಸೇರಿ ಮಾನವೀಯತೆ ದೃಷ್ಟಿಯಿಂದಾಗಿ ಹಣ ಸಂಗ್ರಹಿಸಿ ಬಿಸಿಎ ವಿದ್ಯಾರ್ಥಿ ಸಾಯಿಕುಮಾರ್ಗೆ ಸಹಾಯ ಮಾಡಲಾಗಿದೆ ಎಂದು ಪ್ರಾಚಾರ್ಯ ಪ್ರೋ.ಮಲ್ಲಿಕಾರ್ಜುನ ಹಂಗರಗೆ ತಿಳಿಸಿ, ವಿದ್ಯಾರ್ಥಿ ಸಾಯಿಕುಮಾರ್ ಶೀಘ್ರ ಗುಣಮುಖನಾಗಲಿ ಎಂದು ಹಾರೈಸಿದರು.ಗಣಕಯಂತ್ರ ವಿಜ್ಞಾನ ವಿಭಾಗದ ಈ ಮಾನವೀಯ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಉಪಾಧ್ಯಕ್ಷ ಬಿ.ಜಿ.ಶಟಕಾರ, ಕಾರ್ಯದರ್ಶಿಗಳಾದ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿಗಳಾದ ಸತೀಶ ಪಾಟೀಲ ಸೇರಿ ಸಂಸ್ಥೆಯ ಎಲ್ಲ ನಿರ್ದೇಶಕರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.