ಬೆಳಗನಹಳ್ಳಿಯಲ್ಲಿ ವಿಜೃಂಭಣೆಯ ಕಾಳಮ್ಮದೇವಿಯ ರಥೋತ್ಸವ, ತಂಪೋತ್ಸವ

KannadaprabhaNewsNetwork | Published : May 17, 2024 12:38 AM
56 | Kannada Prabha

ಜಾವ 4ರ ವೇಳೆಗೆ ಗ್ರಾಮದ ಸಮೀಪವೇ ಹರಿಯುವ ಹೆಬ್ಬಳ್ಳ ನದಿಗೆ ಸತ್ತಿಗೆ ಸೂರಪಾನಿ, ಮಂಗಳವಾದ್ಯದೊಡನೆ ಹೊಸತೊರವಳ್ಳಿ ಗ್ರಾಮದ ಮಾರ್ಗವಾಗಿ ಮಕ್ಕಳು ಮತ್ತು ಮಹಿಳೆಯರು, ಗ್ರಾಮಸ್ಥರು ತೆರಳಿ ಕಳಸಗಳನ್ನು ತಂದು ಬೆಳಗನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆ

ತಾಲೂಕಿನ ಬೆಳಗನಹಳ್ಳಿಯಲ್ಲಿ ಗುರುವಾರ ಕಾಳಮ್ಮನವರ ರಥೋತ್ಸವ ಮತ್ತು ತಂಪೋತ್ಸವವನ್ನು ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು.

ಬೆಳಗಿನ ಜಾವ 4ರ ವೇಳೆಗೆ ಗ್ರಾಮದ ಸಮೀಪವೇ ಹರಿಯುವ ಹೆಬ್ಬಳ್ಳ ನದಿಗೆ ಸತ್ತಿಗೆ ಸೂರಪಾನಿ, ಮಂಗಳವಾದ್ಯದೊಡನೆ ಹೊಸತೊರವಳ್ಳಿ ಗ್ರಾಮದ ಮಾರ್ಗವಾಗಿ ಮಕ್ಕಳು ಮತ್ತು ಮಹಿಳೆಯರು, ಗ್ರಾಮಸ್ಥರು ತೆರಳಿ ಕಳಸಗಳನ್ನು ತಂದು ಬೆಳಗನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

3 ಕಿ.ಮೀ. ಗೂ ಹೆಚ್ಚು ದೂರ ಸಾಗಿದ ಮೆರವಣಿಗೆಯಲ್ಲಿ ಬಾಲಕಿಯರು ಕಳಸಗಳನ್ನು ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಮಂಗಳ ವಾದ್ಯದ ಮೇಳಕ್ಕೆ ತಕ್ಕಂತೆ ವೀರಭದ್ರ ಕುಣಿತದವರು ಹೆಜ್ಜೆ ಹಾಕಿದರು. ಮಹಿಳೆಯರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರು, ಯುವಕರು ಹೋಳಿಯಾಡಿದರು.

ಬೆಳಗ್ಗೆ ಮೆರವಣಿಗೆ ಮುಗಿಯಿತು, ಕಾಳಮ್ಮ ದೇವಿಯ ರಥೋತ್ಸವದ ನಂತರ ತಂಪಿನ ಪೂಜೆ ನಡೆಯಿತು.

ತಂಪಿನ ಪೂಜೆಯೇ ವಿಶೇಷ

ಮಹಿಳೆಯರು ಅಕ್ಕಿ ತಂಬಿಟ್ಟು, ಎಳ್ಳು ತಂಬಿಟ್ಟು, ಗಣಗಲೆ ಹೂವಿನಿಂದ ಮಾಡಿದ ಹಾರ ತಂದು ವಿಶೇಷವಾಗಿ ಪೂಜೆ ಸಲ್ಲಿಸಿದರು. ನಂತರ ಕಾಳಮ್ಮನವರ ರಥದ ಬಳಿ ಪೂಜೆ ಸಲ್ಲಿಸಿ, ಆ ಬಳಿಕ ತಂಬಿಟ್ಟನ್ನು ನೆರೆಯೊರೆಯವರಿಗೆ ಹಂಚಿ ಸಂಭ್ರಮಿಸಿದರು.

ರಥೋತ್ಸವದ ಅಂಗವಾಗಿ ಗ್ರಾಮದ ಎಲ್ಲ ದೇವಾಲಯಗಳನ್ನು ವಿದ್ಯುತ್‌ದೀಪಗಳಿಂದ ಆಲಂಕರಿಸಲಾಗಿತ್ತು. ಅಲ್ಲದೇ ಎಲ್ಲ ಮನೆಗಳ ಮುಂದೆ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ವಿಶೇಷ ಎಡೆ - ರಥೋತ್ಸವದ ಅಂಗವಾಗಿ ಕಾಳಮ್ಮ ದೇವಿಗೆ ಹಲಸಿನ ಹಣ್ಣು ಹಾಗೂ ಬಾಳೆ ಹಣ್ಣಿನ ಎಡೆಯನ್ನು ನೀಡಲಾಯಿತು. ಗ್ರಾಮಸ್ಥರು ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

ಬಿದಿರಿನ ರಥ - ಕಾಳಮ್ಮ ದೇವಿಯನ್ನು ಗ್ರಾಮದಲ್ಲಿ ಬಿದಿರಿನ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸ್ವತಃ ಗ್ರಾಮಸ್ಥರೇ ಕೃತಕವಾಗಿ ನೂತನವಾಗಿ ನಿರ್ಮಿಸಿದ್ದರು, ಪ್ರತಿ ಬಾರಿಯು ನೂತನವಾಗಿ ನಿರ್ಮಿಸುವುದು ಈ ಗ್ರಾಮದಲ್ಲಿನ ರಥೋತ್ಸವದ ವಿಶೇಷ.