ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
2023 ಮೇ.30 ರಂದು ಕನ್ನಡಪ್ರಭ ಪತ್ರಿಕೆ ಕಾಗೇಹಳ್ಳಿ ಒತ್ತುವರಿಯಾಗಿದೆ. ಮಳೆ ಬಂದಾಗಲೆಲ್ಲ ಮಳೆಯ ನೀರು ಕಾಗೇಹಳ್ಳದಲ್ಲಿ ಬರಲು ಜಾಗವಿಲ್ಲದೆ ಪೊಲೀಸ್ ಠಾಣೆಯೊಳಗೆ ಹರಿದು ಬಂದು ಮಡಹಳ್ಳಿ ಸರ್ಕಲ್ನಲ್ಲಿ ನಿಂತು ವಾಹನಗಳ ಸವಾರರು, ಪಾದಚಾರಿಗಳಿಗೆ ತುಂಬಾ ಅನಾಕೂಲವಾಗುತ್ತಿದೆ ಎಂದು ಸೊಲ್ಲೆತ್ತಿತ್ತು.
ಕನ್ನಡಪ್ರಭ ವರದಿ ಬಳಿಕ ಎಚ್ಚೆತ್ತ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ 2023 ರ ಜೂ.1 ರಂದು ಕನ್ನಡಪ್ರಭದಲ್ಲಿ ಮಡಹಳ್ಳಿ ವೃತ್ತದಲ್ಲಿ ನೀರು ನಿಲ್ಲದಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಕಾಗೇಹಳ್ಳಕ್ಕೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಜಾಗದಲ್ಲಿ 80 ಲಕ್ಷ ವೆಚ್ಚದಲ್ಲಿ ಡೆಕ್ ಸ್ಲ್ಯಾಬ್ ಕಾಮಗಾರಿಗೆ ಬೇಗ ಶುರು ಮಾಡಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮತ್ತೊಂದು ಸೂಚನೆ ನೀಡಿದರು. ಕಾಮಗಾರಿ ಮುಗಿದ ಬಳಿಕವೂ ಪೊಲೀಸರು ಒತ್ತುವರಿ ಮಾಡಿಕೊಂಡಿದ್ದ ಕಾಗೇಹಳ್ಳ ಬಿಡಲು ಮೀನಮೇಷ ಎಣಿಸುತ್ತಿದ್ದಾಗ ಮತ್ತೆ ಕನ್ನಡಪ್ರಭದಲ್ಲಿ ಮಳೆ ನೀರು ಮಡಹಳ್ಳಿ ಸರ್ಕಲ್ನಲ್ಲಿ ನಿಂತಾಗಲೆಲ್ಲ ವರದಿ ಪ್ರಕಟಿಸಿ ಎಚ್ಚರಿಸುವ ಕೆಲಸ ಮಾಡಿತ್ತು.
ತಹಸೀಲ್ದಾರ್ ಟಿ.ರಮೇಶ್ ಬಾಬು, ಕಸಬಾ ರೆವಿನ್ಯೂ ಇನ್ಸ್ಪೆಕ್ಟರ್ ಮನೋಹರ್, ಗ್ರಾಮ ಲೆಕ್ಕಿಗ ಅಧಿಕಾರಿ ಜವರೇಗೌಡ ತೆರವುಗೊಳಿಸುವ ಸಮಯದಲ್ಲಿ ಹಾಜರಿದ್ದರು. ಪೊಲೀಸರು ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿ ಸುಮಾರು 6 ಅಡಿ ಆಳ, 20 ಅಡಿ ಅಗಲ ಒತ್ತುವರಿಯನ್ನು ಬಿಡಿಸುವ ಕೆಲಸ ನಡೆಯುತ್ತಿದೆ ಇದು ಕನ್ನಡಪ್ರಭದ ವರದಿ ಫಲಶ್ರುತಿ ಎಂದು ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್(ಶೈಲೇಶ್) ಹೇಳಿದ್ದಾರೆ.
ಕನ್ನಡಪ್ರಭ ಕಳೆದ ಒಂದೂವರೆ ವರ್ಷಗಳಲ್ಲಿ ಹಲವು ವರದಿ ಪ್ರಕಟಿಸಿ ಒತ್ತುವರಿ ತೆರವಿಗೆ ಕಾರಣವಾಗಿದೆ. ಒತ್ತುವರಿ ತೆರವುಗೊಳಿಸಿದ ತಹಸೀಲ್ದಾರ್ ಟಿ.ರಮೇಶ್ ಬಾಬು ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕನ್ನಡಪ್ರಭ ವರದಿ ಪ್ರಕಟಿಸಿ ಎಚ್ಚರಿಸುತ್ತಲೇ ಇತ್ತು. ಪೊಲೀಸರಿಗೂ ಒತ್ತುವರಿ ತೆರವುಗೊಳಿಸಿ ಎಂದು ಹೇಳುತ್ತಲೇ ಇದ್ದೇವು. ಈಗ ಒತ್ತುವರಿ ತೆರವುಗೊಳಿಸುವ ಕೆಲಸ ನಡೆದಿದೆ ಇಂದು ಸಂಜೆ ಅಥವಾ ಬೆಳಗ್ಗೆ ವೇಳೆಗೆ ಒತ್ತುವರಿ ತೆರವು ಕೆಲಸ ಮುಗಿಯಲಿದೆ.-ಟಿ.ರಮೇಶ್ ಬಾಬು, ತಹಸೀಲ್ದಾರ್
ಕಾಗೇಹಳ್ಳಿ ಒತ್ತುವರಿ ಕೊನೆಗೂ ತೆರವುಗೊಳಿಸಲು ತಾಲೂಕು ಆಡಳಿತ ಮುಂದಾಗಿದೆ ಇದು ಖುಷಿಯ ವಿಚಾರ. ಶಾಸಕರು ಹಾಗೂ ತಹಸೀಲ್ದಾರ್ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ್ದೇ ಒತ್ತುವರಿ ತೆರವಿಗೆ ಕಾರಣ.-ಎಂ.ಶೈಲಕುಮಾರ್ (ಶೈಲೇಶ್), ಕಸಾಪ ಜಿಲ್ಲಾಧ್ಯಕ್ಷ