ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಎರಡು ಕಡೆ ಸ್ಥಳ ಮಹಜರು

KannadaprabhaNewsNetwork | Published : Jun 15, 2024 1:03 AM

ಸಾರಾಂಶ

ದರ್ಶನ್ ಗ್ಯಾಂಗ್‌ನ ರಘುನನ್ನು ಬೆಂಗಳೂರು ಪೊಲೀಸರು ಚಿತ್ರದುರ್ಗಕ್ಕೆ ಕರೆ ತಂದು ಎರಡು ಕಡೆ ಸ್ಪಾಟ್ ಮಹಜರ್ ಮಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಗುರುವಾರ ಮಧ್ಯರಾತ್ರಿ ಚಿತ್ರದುರ್ಗದ ಎರಡು ಕಡೆ ಸ್ಪಾಟ್ ಮಹಜರ್ ಮಾಡಿದ್ದಾರೆ. ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಬೆಂಗಳೂರು ರಸ್ತೆಯಲ್ಲಿ ಬರುವ ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ ಸ್ಪಾಟ್ ಮಹಜರ್ ನಡೆಸಲಾಯಿತು.

ಗುರುವಾರ ಸಂಜೆ ಸ್ಥಳ ಮಹಜರ್‌ಗೆ ಬರುತ್ತಾರೆ, ದರ್ಶನ್ ಕೂಡಾ ಆಗಮಿಸುತ್ತಾರೆಂಬ ವದಂತಿಗಳ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಾಲಾಜಿ ಬಾರ್ ಬಳಿ ಕಾದಿದ್ದರು. ರಾತ್ರಿ ಎಂಟುವರೆ ನಂತರ ಎಲ್ಲರೂ ನಿರ್ಗಮಿಸಿದ್ದರು. ಜನಸಂದಣಿ, ಮೀಡಿಯಾ ಕಣ್ತಪ್ಪಿಸಿ ಮಹಜರ್ ಮಾಡುವುದು ಪೊಲೀಸರಿಗೆ ಕಷ್ಟ ಸಾಧ್ಯವಾಗಿತ್ತು. ಹಾಗಾಗಿ ಇಡೀ ದಿನ ಡಿಲೇ ಮಾಡಿದ್ದ ಪೊಲೀಸರು ಮಧ್ಯರಾತ್ರಿ ಒಂದು ಗಂಟೆಗೆ ಆಗಮಿಸಿ ಸ್ಥಳ ಮಹಜರು ಮಾಡಿದ್ದಾರೆ.

ಸಿಪಿಐ ಸಂಜೀವ್ ಗೌಡ ನೇತೃದಲ್ಲಿ ಆರೋಪಿ ರಘು ಕರೆತಂದು ಸ್ಪಾಟ್ ಮಹಜರ್ ಮಾಡಲಾಗಿದೆ. ಈ ವೇಳೆ ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಅಧ್ಯಕ್ಷ ರಾಘವೇಂದ್ರ ಪೊಲೀಸರ ಮುಂದೆ ರೇಣುಕಾಸ್ವಾಮಿ ಕಿಡ್ನಾಪ್ ಹೇಗೆ ಮಾಡಿದೆ ಎಂಬುದ ವಿವರಿಸಿದ್ದಾನೆ. ಸಂಚುಮಾಡಿ ಅಡ್ಡಗಟ್ಟಿ ಕಿಡ್ನಾಪ್ ಮಾಡಿ ಕರೆದೊಯ್ದ ಬಗೆ ಬಿಡಿ ಬಿಡಿಯಾಗಿ ಬಿಚ್ಚಿಟ್ಟಿದ್ದಾನೆ.

ಬಾಲಾಜಿ ಬಾರ್ ಬಳಿ ಜೂ.8ರ ಬೆಳಗ್ಗೆ 9.48ರ ವೇಳೆಗೆ ಬೇಕ್ ಅಡ್ಡಗಟ್ಟಿ ಕಿಡ್ನಾಪ್ ಮಾಡಲಾಯಿತು. ನಂತರ ಆಟೋವೊಂದರಲ್ಲಿ ಚಳ್ಳಕೆರೆ ಗೇಟಿನಿಂದ ಬೆಂಗಳೂರು ರಸ್ತೆಯಲ್ಲಿ ಬರುವ ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್ ವರೆಗೆ ತೆರಳಲಾಯಿತು. ಬಳಿಕ ಟ್ಯಾಕ್ಸಿ ಚಾಲಕ ರವಿಶಂಕರ್‌ಗೆ ಹೇಳಿ ಅಲ್ಲಿಗೆ ಕಾರು ತರಿಸಿಕೊಂಡು ರೇಣುಕಾಸ್ವಾಮಿ ಬೆಂಗಳೂರಿಗೆ ಕರೆದೊಯ್ದ ಬಗೆಯ ವಿವರಿಸಿದ್ದಾನೆ.

ಪ್ರಕರಣದ ಇಂಚಿಂಚು ಮಾಹಿತಿ, ಸ್ಥಳದಲ್ಲಿ ಅಳತೆ ಮಾಡಿ ಸಾಕ್ಷಿ ಸಂಗ್ರಹ ಮಾಡಲಾಯಿತು. ಎರಡೂ ಜಾಗದಲ್ಲಿ ಪೋಲೀಸ್ ಬಿಗಿ ಭದ್ರತೆಯಲ್ಲೇ ಸ್ಪಾಟ್ ಮಹಜರ್ ಮಧ್ಯರಾತ್ರಿ 1.30ರಿಂದ 2.30 ವರೆಗೆ ಎರಡೂ ಜಾಗದಲ್ಲಿ ಮಹಜರ್ ನಡೆಯಿತು.

Share this article