ಪ್ರಾಕೃತಿಕ ವೈಪರೀತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ಸರ್ಕಾರ ಈ ಬಾರಿ ಉದಾರವಾಗಿ ‘ಆರ್ಥಿಕ’ ಸಹಕಾರ ನೀಡಿದೆ. ಅದರಂತೆ ಈ ಹಣಕಾಸು ವರ್ಷದಲ್ಲಿ ಸಹಕಾರ ಇಲಾಖೆಗೆ 38 ಲಕ್ಷ ಕೃಷಿಕರಿಗೆ 30 ಸಾವಿರ ಕೋಟಿ ರು. ಶೂನ್ಯ ಬಡ್ಡಿಯಲ್ಲಿ ಕೃಷಿ ಸಾಲ ವಿತರಿಸುವ ಗುರಿ ವಹಿಸಿದೆ. ಇದರ ಜತೆಗೆ ಮೆಕ್ಕಜೋಳ ಬೆಲೆ ಕುಸಿತದಿಂದ ಕಂಗಲಾದ ಬೆಳಗಾರರ ನೋವಿಗೆ ಮಿಡಿದ ಸರ್ಕಾರವು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು 100 ಕೋಟಿ ರು. ನೆರವು ಘೋಷಿಸಿದೆ. 

ಉಗ್ರಾಣ ನಿಗಮಕ್ಕೆ ಆರ್ಥಿಕವಾಗಿ ಚೈತನ್ಯ

ಉಗ್ರಾಣ ನಿಗಮಕ್ಕೆ ಆರ್ಥಿಕವಾಗಿ ಚೈತನ್ಯ ನೀಡಲು ಆ ನಿಗಮದ ಅನುಪಯುಕ್ತ ಆಸ್ತಿಗಳನ್ನು ನಗದೀಕರಣಗೊಳಿಸಲು ಉದ್ದೇಶಿಸಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ ಮೈಸೂರು (ಬಂಬೂ ಬಜಾರ್‌) ಮತ್ತು ಹುಬ್ಬಳ್ಳಿ (ಕಾಟನ್‌ ಮಾರ್ಕೆಟ್‌) ಕೇಂದ್ರಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಘೋಷಣೆ ಮಾಡಿದೆ.

ಸಹಕಾರ ಆಡಳಿತಕ್ಕೆ ಈ ಬಾರಿಯ ಆಯವ್ಯಯದಲ್ಲಿ ತಾಂತ್ರಿಕ ಸ್ಪರ್ಶ ನೀಡಲಾಗಿದೆ. ಈ ವರ್ಷ 1,628 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಎಸಿಎಸ್‌) ಗಳನ್ನು ಸಂಪೂರ್ಣ ಗಣಕೀಕರಣಕ್ಕೆ ಉದ್ದೇಶಿಸಿದೆ. ಹಾಗೆಯೇ ಎಪಿಎಂಸಿಗಳ ಕಾರ್ಯಚಟುವಟಿಕೆಗಳ ಡಿಜಿಟಲೀಕರಣಕ್ಕೆ 10 ಕೋಟಿ ರು. ವೆಚ್ಚದ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇನ್ನು ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿ ವಿವಿಧ ಸೇವೆಗಳನ್ನು ಸುಲಭವಾಗಿ ಒದಗಿಸಲು ದತ್ತಾಂಶವನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಸರ್ಕಾರ ತೀರ್ಮಾನಿಸಿದೆ.


ರೈತರಿಗೆ ಶೂನ್ಯ ಬಡ್ಡಿದರಲ್ಲಿ ಕೃಷಿ ಸಾಲ ವಿತರಣೆ ಶ್ಲಾಘನೀಯ. ನ್ಯಾಯಯುತ ಬೆಲೆ ಸಿಗದೆ ತೊಂದರೆಗೆ ಸಿಲುಕಿರುವ ಮೆಕ್ಕಜೋಳ ಬೆಳಗಾರರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಆದರೆ ಉಗ್ರಾಣ ನಿಗಮದ ಆಸ್ತಿ ನಗದೀಕರಣಕ್ಕೆ ಖಾಸಗಿ ಸಹಭಾಗಿತ್ವ ಉತ್ತಮ ತೀರ್ಮಾನವಲ್ಲ. ಸರ್ಕಾರದ ಆಸ್ತಿ ಖಾಸಗಿಯವರ ಪಾಲಾಗುವ ಅಪಾಯವಿದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡುವುದು ಹಾಗೂ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿ ಕೊಡುವುದು ಸರ್ಕಾರದ ಕರ್ತವ್ಯ.

--ಕೊತ್ತಲವಾಡಿ ಶಿವಕುಮಾರ್‌

ಆರ್ಥಿಕ ತಜ್ಞರು, ಮೈಸೂರು