ಕನ್ನಡಪ್ರಭ ವಾರ್ತೆ ಮೈಸೂರುಭವಿಷ್ಯದ ಉತ್ತಮವಾದ ಆದರ್ಶ ಪ್ರಜೆಗಳ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.ಮೈಸೂರು ತಾಲೂಕು ಜಯಪುರ ಶ್ರೀ.ರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1994-95ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ''''''''ಗುರುವಂದನಾ ಹಾಗೂ ಸ್ನೇಹ ಭಾವಯಾನ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.ಶಾಲೆಯ ಹಳೆಯ ವಿದ್ಯಾರ್ಥಿಗಳು ಮೂರು ದಶಕಗಳ ನಂತರ ಒಟ್ಟುಗುಡಿ ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಶಾಲೆಯ ವೇದಿಕೆಯಲ್ಲಿ ಕರೆತಂದು ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವಿಸಿರುವುದು ಹೃದಯಸ್ಪರ್ಶಿಯಾಗಿದೆ.ಹಳೆಯ ವಿದ್ಯಾರ್ಥಿಗಳ ಶಾಲೆಗೆ ಬಂದು ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ನಿಂತು ಬಿಳಿ ವಸ್ತ್ರ ಧರಿಸಿ ಶಿಸ್ತಿನಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನೋಡಿದರೆ,ಈ ಶಾಲೆಯ ಶಿಕ್ಷಕರು ಕಲಿಸಿದ ಸಂಸ್ಕೃತಿ ಯಾಗಿದೆ ಎಂದು ಅವರು ಶ್ಲಾಘಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಸಭೆ. ಸಮಾರಂಭಗಳಲ್ಲಿ ತಮ್ಮ ಬಾಲ್ಯದ ಶಿಕ್ಷಕರಾದ ರಾಜಪ್ಪ ಮೇಷ್ಟ್ರು ಬಗ್ಗೆ ಅಪಾರವಾದ ಪ್ರೀತಿ ವ್ಯಕ್ತಪಡಿಸುತ್ತಾರೆ. ರಾಷ್ಟ್ರಪತಿ, ಪ್ರಧಾನಿಯಾದವರು ಶಿಕ್ಷಕರಿಗೆ ಶಿರಭಾಗಿ ನಮಸ್ಕರಿಸುತ್ತಾರೆ ಎಂದು ಅವರು ಹೇಳಿದರು.ಆದರ್ಶ ಶಿಕ್ಷಕರಿಂದ ಮಾತ್ರ ದೇಶದಲ್ಲಿ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ರಅವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ,ಮೈಸೂರಿಂದ ತೆರಳುವಾಗ ತಮ್ಮ ಮೆಚ್ಚಿನ ವಿದ್ಯಾರ್ಥಿಗಳು ಸಾರೋಟಿನಲ್ಲಿ ಮೆರವಣಿಗೆ ಮಾಡಿಕೊಂಡು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬೀಳ್ಕೊಟ್ಟರು.ಶಿಕ್ಷಕರಾದವರಿಗೆ ಇವೆಲ್ಲವು ಅವಿಸ್ಮರಣೀಯ ಕ್ಷಣಗಳು ಎಂದರು.ಯಾವುದೇ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ವಿಯಾಗುತ್ತಾರೆ.ಶಿಕ್ಷಕರನ್ನು ಗೌರವಿಸಿದಾಗ ಮಾತ್ರ ಗುರು ದೇವೋಭವ ಕ್ಕೆ ಅರ್ಥ ಬರುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಜೀವನದ ಪಾಠ ಚನ್ನಾಗಿ ತಿಳಿದಿರುತ್ತಾರೆ. ಬಹು ಹಿಂದಿನಿಂದಲೂ ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿರುವ ಗಣ್ಯರೆಲ್ಲರೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿದವರಾಗಿದ್ದಾರೆ.ಗುರು ಪರಂಪರೆಯು ಗತಕಾಲದಿಂದ ಬಳುವಳಿಯಾಗಿ ಬಂದಿದೆ.ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು.ಮಕ್ಕಳಿಗೆ ಶಿಕ್ಷಕರ ಬಗ್ಗೆ ಪೂಜ್ಯನಿಯ ಭಾವನೆ ಬರಬೇಕು. ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಶಿಸ್ತು,ಏಕಾಗ್ರತೆ, ವಿಧೇಯತೆ, ಸಂಯಮ,ಬದ್ಧತೆ ಇರಬೇಕು. ರಾಷ್ಟ್ರೀಯತೆ ಮೈಗೂಡಿಸಿಕೊಳ್ಳಬೇಕು.ವಿಷಯ ಜ್ಞಾನ, ತಾಳ್ಮೆ, ಶುದ್ಧ ನಡತೆ, ಆತ್ಮವಿಸ್ವಾಸ,ಆಸಕ್ತಿ, ಕಠಿಣ ಪರಿಶ್ರಮ ಇರಬೇಕು.ಗುರಿ ಉದ್ದೇಶಗಳು ಸ್ಪಷ್ಟವಾಗಿರಬೇಕು. ಮೊಬೈಲ್ ಮತ್ತು ಟಿವಿ ಗೀಳು ಬಿಡಬೇಕು.ಪತ್ರಿಕೆಗಳನ್ನು ಓದಬೇಕು.ಗ್ರಂಥಾಲಯ ಬಳಕೆ ಹೆಚ್ಚುಮಾಡಿ ಜ್ಞಾನ ಸಂಪಾದಿಸಬೇಕು.ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು,ಮಾನವೀಯ ಮೌಲ್ಯ ಹೆಚ್ಚಿಸಿಕೊಂಡು,ಸುತ್ತಮುತ್ತಲ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.ತಂದೆ. ತಾಯಿ,ಸಂಬಂದಿಕರು ಮತ್ತು ನೆರೆಹೊರೆ ಯವರ ಬಗ್ಗೆ ಒಳ್ಳೆಯ ಭಾವನೆ ಹೊಂದಬೇಕು.ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮೂಲಕ ಐಎಎಸ್, ಐಪಿಎಸ್,ಕೆಎಎಸ್ ಉನ್ನತ ಹುದ್ದೆಗಳನ್ನು ಕಷ್ಟಪಟ್ಟು ಓದಿ ಪಡೆಯಬೇಕು.ಭಾರತದ ಮಕ್ಕಳ ಬುದ್ಧಿಮತ್ತೆ ಯು ಪ್ರಸ್ತುತ ಚಾಲ್ತಿಯಲ್ಲಿರುವ ''''''''ಎಐ'''''''' ತಂತ್ರಜ್ಞಾನಕ್ಕಿಂತಲೂ ಹೆಚ್ಚಿದೆ ಎಂದರು.
ರಾಘವೇಂದ್ರ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಎಚ್. ಕೆ ಪ್ರಭಾಕರ್ ಮೂರ್ತಿ ಮಾತನಾಡಿ,1976 ರಲ್ಲಿ ಸ್ಥಾಪನೆಯಾದ ಶಾಲೆಯ ಬೆಳವಣಿಗೆ ವಿವರಿಸಿದರು. 32ವರ್ಷಗಳ ಶಿಕ್ಷಕ ವೃತ್ತಿ ಸೇವೆಯು ತೃಪ್ತಿ ನೀಡಿದೆ. ನನ್ನ ವಿದ್ಯಾರ್ಥಿಗಳು ಇಂದು ರಾಜ್ಯ ಹಾಗೂ ದೇಶದ ವಿವಿಡೆದೆ ಐಎಎಸ್, ಕೆಎಎಸ್ ಸೇರಿದಂತೆ ನ್ಯಾಯಾಧಿಶರಾಗಿ,ವೈದ್ಯರಾಗಿ,ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಗಳಲ್ಲಿ ಪ್ರೊಫೆಸರ್ ಗಳಾಗಿ, ಪ್ರತಿಯೊಂದು ಇಲಾಖೆಯಲ್ಲೂ ನನ್ನ ವಿದ್ಯಾರ್ಥಿಗಳಿದ್ದಾರೆ.ಹಲವರು ರಾಜಕೀಯ ದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ,ಉದ್ಯಮಿಗಳಾಗಿದ್ದಾರೆ.ಇಂತಹ ಸಾವಿರಾರು ವಿದ್ಯಾರ್ಥಿಗಳಿಗೆ ನಾನು ಪಾಠ ಹೇಳಿಕೊಟ್ಟಿದ್ದು ನನ್ನ ಜೀವನ ಸಾರ್ಥಕತೆ ಎನಿಸಿದೆ.ಮುಂದಿನ ಜನ್ಮವಿದ್ದರೆ ನಾನು ಮತ್ತೆ ಶಿಕ್ಷಕನಾಗಿ ಹುಟ್ಟುವೆ.ವಿದ್ಯಾರ್ಥಿಗಳು ಮೊಬೈಲ್ ಪಕ್ಕಕ್ಕಿಟ್ಟು ಪುಸ್ತಕ ಹಿಡಿಯಬೇಕು.ಕನ್ನಡ ಭಾಷೆಯನ್ನು ಉಳಿಸಬೇಕು ಬೆಳೆಸಬೇಕು.ಭಾಷೆಯ ಅಭಿವೃದ್ಧಿಗೆ ವ್ಯಾಕರಣವೆ ಮುಖ್ಯವೆಂದರು.ಪ್ರೀತಿಯ ವಿದ್ಯಾರ್ಥಿಗಳು ನೀಡಿದ ಗುರುವಂದನೆಗೆ ನಾವು ಅಭಾರಿಯಾಗಿದ್ದೇವೆ.ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವು ಉಜ್ವಲವಾಗಲಿ, ಆದರ್ಶ ವ್ಯಕ್ತಿಗಳಾಗಿ ಬಹುಎತ್ತರಕ್ಕೆ ಬೆಳೆಯಲಿ ಎಂದು ಆಶೀಸಿದರು.ನಿವೃತ್ತ ವಿಜ್ಞಾನ ಶಿಕ್ಷಕರಾದ ಬಿ.ವಿ ನಂಜುಂಡಸ್ವಾಮಿ ಮಾತನಾಡಿ, ಪ್ರೀತಿಪಾತ್ರ ಹಳೆಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಹೆಸರಲ್ಲಿ ನಮಗೆ ಸನ್ಮಾನಿಸಿ ನೀಡಿರುವ ಗೌರವವು ಭಾರತ ರತ್ನ ಪ್ರಶಸ್ತಿ ಪಡೆದಷ್ಟೇ ಖುಷಿಯಾಗುತ್ತಿದೆ ಎಂದರು.
1994-95ನೇ ಸಾಲಿನ ವಿದ್ಯಾರ್ಥಿಗಳಾದ ಮೋಹಿದ್ಧಿನ್, ದೊರೆಸ್ವಾಮಿ ,ಲಕ್ಷ್ಮಿ, ಬಸಪ್ಪ ಅವರು ತಮ್ಮ ಶಾಲಾ ದಿನಗಳ ವ್ಯಾಸಂಗದ ಬಗ್ಗೆ ಮಾತನಾಡಿದರು.ಎಚ್.ಎಂ.ಐ ಮಾಲೀಕರದ ಮೋಹಿದ್ಧಿನ್ ಅವರು ಪ್ರಸ್ತುತ ಸಾಲಿನಿಂದ ಅತಿಹೆಚ್ಚು ಅಂಕ ಪಡೆವ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿವರ್ಷ ₹ಹತ್ತು ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.ಕಾರ್ಯಕ್ರಮ ದಲ್ಲಿ ನಿವೃತ್ತ ಸಹಶಿಕ್ಷಕರಾದ ಎಸ್.ಎಸ್ ವಾಗೀಶನ್, ಸಿ.ಎನ್ ಬಾಲಕೃಷ್ಣ, ವೈ.ಜೆ ದೇವರಾಜೆಗೌಡ,ಮಾದಪ್ಪ ಸ್ವಾಮಿ,ಆರ್. ಜಯಶೇಖರ್, ಪ್ರವೀಣ್ ಕುಮಾರ್,ಎ.ಎನ್. ಸುನಂದಾ, ಸವಿತಾ, ನಿರ್ಮಲಾ, ನಿವೃತ್ತ ಭೋಧಕೇತರ ಸಿಬ್ಬಂದಿಗಳಾದ ನಂಜಯ್ಯ, ರೇಣುಕಾ,ಶಿವರಾಜು ನಾಯಕ ಹಾಗೂ ರಾಘವೇಂದ್ರ ಶಾಲೆ ಮುಖ್ಯಶಿಕ್ಷಕ ಬಿ.ಸಿದ್ದರಾಮು ಸಹಶಿಕ್ಷಕರಾದ ಎಂ.ಕೆ ಭಾಗ್ಯ,ಮಹಾಲಕ್ಷ್ಮಿ,ಕೆ.ಎನ್ ಸಿದ್ದೇಗೌಡ,ಹೇಮಂತ್ ಮತ್ತು ಅಡುಗೆ ಸಿಬ್ಬಂದಿಗಳನ್ನು 1994-95ನೇ ಸಾಲಿನ ವಿದ್ಯಾರ್ಥಿಗಳು ಫಲಪುಷ್ಪ ನೀಡಿ ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಸಿಹಿಖಾದ್ಯದ ಊಟ ಬಡಿಸಿದರು.ಕಾರ್ಯಕ್ರಮದಲ್ಲಿ 60ಕ್ಕು ಹೆಚ್ಚು ಹಳೆಯ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.