ಉಡುಪಿ: ಇಲ್ಲಿನ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಧಿಕ ಮಾಸದ ಪರ್ವ ಕಾಲದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ನೇತೃತ್ವದಲ್ಲಿ ಕೊರಂಗ್ರಪಾಡಿ ರಾಘವೇಂದ್ರ ಭಟ್ಟರ ಪೌರೋಹಿತ್ಯದಲ್ಲಿ ಅಥರ್ವಶೀರ್ಷ ಗಣಯಾಗ ನೆರವೇರಿತು. ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದಲ್ಲಿ ಪೂಜೆ, ಜಪ, ದಾನ ಮಾಡುವುದರಿಂದ ಅಕ್ಷಯ ಫಲ ಲಭಿಸುತ್ತದೆ. ಲೌಕಿಕ ಶುಭ ಕಾರ್ಯಗಳನ್ನು ಹೊರತುಪಡಿಸಿ ಆಧ್ಯಾತ್ಮಿಕ ಸಾಧನೆಗೆ ಈ ಮಾಸ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ವಿಷ್ಣುವಿನ ಆರಾಧನೆ, ವಿಷ್ಣು ಸಹಸ್ರನಾಮ ಪಠನ, ಭಾಗವತ ಪುರಾಣ ಶ್ರವಣ ಮಾಡುವುದರಿಂದ ಸಕಲ ಪಾಪಗಳು ನಾಶವಾಗಿ ಮನೋಕಾಮನೆಗಳು ಈಡೇರಲಿವೆ ಎಂದು ನಂಬಲಾಗಿದೆ. ಬಲು ಅಪರೂಪವಾಗಿ ನಡೆಯುವ ಈ ಯಾಗದಲ್ಲಿ 10 ಮಂದಿ ಪುರೋಹಿತರು ಏಕ ಕಾಲದಲ್ಲಿ ಗಣಪತಿಗೆ ನಾನಾ ವಿಧದ ಹವಿಸ್ಸನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಹುತಿ ನೀಡಿ ನೆರವೇರಿಸಿದರು. ಬ್ರಾಹ್ಮಣ, ಮುತ್ತೈದೆ, ಬ್ರಹ್ಮಚಾರಿ ಆರಾಧನೆ ಮಾಡಿ ಗಣಪತಿಗೆ ವಿಶೇಷ ಪೂಜೆ ನಡೆಸಲಾಯಿತು.
ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ ಅವರ ಸೇವಾರ್ಥವಾಗಿ ಯಾಗ ಸಮರ್ಪಣೆಗೊಂಡಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.