ದಲಿತರ ಮೇಲೆ ಹಲ್ಲೆ: ಡಿಕೆಶಿ ಹೆಸರು ಬಳಕೆಗೆ ವಿರೋಧ

KannadaprabhaNewsNetwork |  
Published : Jul 26, 2024, 01:33 AM IST
 ಕೆ ಕೆ ಪಿ ಸುದ್ದಿ 01:ದಲಿತರ ಮೇಲೆ ಹಲ್ಲೆಯ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್. ರವಿ ಸುದ್ದಿಗೋಷ್ಠಿ ನಡೆಸಿದರು.        | Kannada Prabha

ಸಾರಾಂಶ

ಗಡಿಪಾರು ಆಗಿದ್ದ ರೌಡಿಶೀಟರ್ ಮತ್ತು ಆತನ ಸಹಚರರು ದಲಿತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಿಕರು ಕಾರಣ ಎಂಬುದು ಸತ್ಯಕ್ಕೆ ದೂರವಾದುದು ಎಂದು ವಿಧಾನಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಗಡಿಪಾರು ಆಗಿದ್ದ ರೌಡಿಶೀಟರ್ ಮತ್ತು ಆತನ ಸಹಚರರು ದಲಿತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಿಕರು ಕಾರಣ ಎಂಬುದು ಸತ್ಯಕ್ಕೆ ದೂರವಾದುದು ಎಂದು ವಿಧಾನಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳ ಹಿಂದೆ ನಗರದ ಮಳಗಾಳು ವಾರ್ಡ್ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಘಟನೆ ಅತ್ಯಂತ ಖಂಡನೀಯವಾಗಿದ್ದು, ಯಾರೋ ಪೋಕರಿಗಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡು ಆರೋಪಿಗಳನ್ನು ಈಗಾಗಲೇ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದರು.

ನಮ್ಮ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ದಲಿತರು ಸೇರಿ ಎಲ್ಲಾ ವರ್ಗದ ಜನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ, ಹಲ್ಲೆಗೊಳಗಾದ ಅನೀಶ್ ಎಂಬ ಯುವಕನ ತಂದೆ ವೈರಮುಡಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ರಾಮನಗರ ಜಿಲ್ಲಾ ಪಂಚಾಯಿತಿಯ ಪ್ರಥಮ ಅಧ್ಯಕ್ಷರನ್ನಾಗಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನದಿಂದ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ನೇಮಿಸಿದ್ದು, ಅವರಿಗೆ ಪರಿಶಿಷ್ಟ ವರ್ಗದ ಮೇಲೆ ಇರುವ ಅಪಾರ ಪ್ರೀತಿ, ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.

ಕೆಲವು ಸ್ವಯಂ ಘೋಷಿತ ನಾಯಕರು ಪ್ರಚಾರಕ್ಕಾಗಿ ವಿನಾಕಾರಣ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಕುಟುಂಬದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಅವರ ಈ ಮನಸ್ಥಿತಿಗೆ ತಾಲೂಕಿನ ಪರಿಶಿಷ್ಟ ಸಮುದಾಯ ಸೊಪ್ಪು ಹಾಕುವುದಿಲ್ಲ, ಕ್ಷುಲ್ಲಕ ಆರೋಪಗಳನ್ನು ಮಾಡುವುದನ್ನು ಬಿಟ್ಟು ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಎಲ್ಲಾ ಜನಾಂಗದ ಮುಖಂಡರು, ರಾಜಕೀಯ ನಾಯಕರು ಮುಂದಾಗಬೇಕಾಗಿದೆ ಎಂದರು.

ಆರೋಪಿ ಹರ್ಷ ಕನಕಪುರ ನಗರದ ಮೇಗಳಬೀದಿ, ಬೆಂಗಳೂರು, ಪಕ್ಕದ ತಮಿಳುನಾಡು ರಾಜ್ಯದ ಡೆಂಕಣಿಕೋಟೆ ಗ್ರಾಮದಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ತುಮಕೂರು ವ್ಯಾಪ್ತಿ ಮೀರಿ ಬರದಂತೆ ಗಡಿಪಾರು ಮಾಡಲಾಗಿತ್ತು.

ಈಗಾಗಲೇ ಡಿಕೆಶಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಅನೀಶ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹಾಗೂ ಧೈರ್ಯ ಹೇಳಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಳಗಾಳು ನಗರಸಭಾ ಸದಸ್ಯ ಕಾಂತರಾಜು, ಪರಿಶಿಷ್ಟ ವರ್ಗದ ತಾಲೂಕು ಅಧ್ಯಕ್ಷ ಮಾರುತಿ, ಅನೀಶ್ ಕುಟುಂಬಸ್ಥರಾದ ಚಲುವರಾಜು, ಗೋವಿಂದರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ