ರಾಮನಗರ: ಕೃತಕ ಬಣ್ಣ ಹಾಗೂ ಗುಣಮಟ್ಟವಲ್ಲದ ಪದಾರ್ಥ ಮಾರಾಟ ದೂರಿನ ಹಿನ್ನೆಲೆಯಲ್ಲಿ ಹೋಟೆಲ್, ಕೆಫೆ, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿದರು.
ಸರ್ಕಾರ ಕಲರ್ ಮತ್ತು ಟೇಸ್ಟಿಂಗ್ ಪೌಡರ್ ಬಳಕೆಗೆ ನಿಷೇಧ ಹೇರಿದೆ. ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಆದೇಶದ ಮೇರೆಗೆ ಕೆಲವೊಂದು ಹೋಟೆಲ್, ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಅವುಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.
ರಾಮಘಡ್ ಹೋಟೆಲ್ನಲ್ಲಿ ಗೋಬಿ ಮಂಚೂರಿ, ರಾಸ್ತಾ ಕೆಫೆಯಲ್ಲಿ ಕೇಕ್ , ಅಮ್ಮುರ್ ಬಿರಿಯಾನಿಯಲ್ಲಿ ಕಬಾಬ್, ಕೇಕ್ ಹಾಗೂ ಇತರೆ ಹೋಟೆಲ್, ಕೆಫೆಗಳಲ್ಲಿ ಆಹಾರ ಪದಾರ್ಥ, ಚೀಜ್ ಕೇಕ್, ವೆಲ್ವೆಟ್ ಕೇಕ್ ಮಾದರಿಯನ್ನು ಅಧಿಕಾರಿಗಳ ತಂಡ ಸಂಗ್ರಹಿಸಿದೆ. ದಾಳಿ ಸಂದರ್ಭದಲ್ಲಿ ಕೆಲ ಹೋಟೆಲ್ ಗಳಲ್ಲಿ ಅವಧಿ ಮೀರಿದ ಆಹೋರಾತ್ಪನ್ನಗಳು ಪತ್ತೆಯಾದರೆ, ಹಲವೆಡೆ ಅಡುಗೆ ಮನೆ ಮತ್ತು ಸ್ಟೋರ್ ರೂಂನೊಳಗಿನ ಆಹಾರ ಪದಾರ್ಥಗಳಲ್ಲಿ ಜಿರಳೆ, ಶುಚಿತ್ವ ಕೊರತೆಯೂ ಕಂಡು ಬಂದಿದೆ.ಹೋಟೆಲ್, ಕೆಫೆಗಳಲ್ಲಿನ ಆಹಾರ ಪದಾರ್ಥಗಳ ಮಾದರಿಯನ್ನು ಬೆಂಗಳೂರು ಪಿಎಚ್ ಐ ಲ್ಯಾಬ್ಗೆ ಕಳುಹಿಸಿದ್ದು, 10 ದಿನದೊಳಗೆ ವರದಿ ಬರಲಿದೆ, ಆಹಾರ ಪದಾರ್ಥಗಳಲ್ಲಿ ಕಲರ್ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡಿರುವುದು ದೃಢಪಟ್ಟಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಅಧಿಕಾರಿ ಚಂದ್ರಶೇಖರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.