ಕಾರಟಗಿ:
ಇಲ್ಲಿನ ವಿಶೇಷ ಎಪಿಎಂಸಿ ಗೇಟ್ನಿಂದ ಆರಂಭವಾದ ಮೌನ ಪ್ರತಿಭಟನೆ ಮೆರವಣಿಗೆ ತಹಸೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿತು. ಬಳಿಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮೂಲಕ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಪರಶುರಾಮ ನಾಯಕ, ಏ. ೧೬ರಂದು ವಕೀಲರ ಪರಿಷತ್ ಅಧ್ಯಕ್ಷ ಸದಾಶಿವರೆಡ್ಡಿ ಅವರ ಮೇಲೆ ಅಪರಿಚಿತರಿಂದ ಹಲ್ಲೆ ನಡೆದಿದೆ. ಈ ಹಲ್ಲೆ ಖಂಡಿಸಿ ಏ. ೨೧ರಂದು ಕೋರ್ಟ್ ಕಲಾಪದಿಂದ ದೂರವುಳಿದು ಕೈಗೆ ಕೆಂಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಗಿದೆ ಎಂದರು.ಹಲ್ಲೆ ನಡೆಸಿರುವ ಅಪರಿಚಿತರು, ಕೇಸ್ ಕೊಡುವ ನೆಪದಲ್ಲಿ ಕಚೇರಿಗೆ ಆಗಮಿಸಿ ಅವರಲ್ಲೊಬ್ಬ ವಕೀಲರ ಮೇಲೆ ಫೈಬರ್ ಪೈಪ್ನಿಂದ ಹೊಡೆದು ಗಾಯಗೊಳಿಸಿದ್ದಾನೆ. ಇನ್ನೊಬ್ಬ ಹೊಡೆಯುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ. ಇವರಿಬ್ಬರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆಹಚ್ಚಬೇಕು. ದಾಳಿ ನಡೆಸಿದ ಅಪರಿಚಿತ ವ್ಯಕ್ತಿಗಳು ಸದಾಶಿವರೆಡ್ಡಿ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತ್ವರಿತವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.