ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಗುತ್ತಿಗೆದಾರ ಶಿವಾನಂದ ಕುನ್ನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.ಆರೋಪಿಗಳನ್ನು ಬಂಧಿಸಿ ಕರೆತರುವಾಗ ಹಾನಗಲ್ಲ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಶಿಗ್ಗಾಂವಿ ಸಿಪಿಐ ಸತ್ಯಪ್ಪ ಮಾಳಗೊಂಡ ಹಾಗೂ ಹಾನಗಲ್ಲ ಪಿಎಸ್ಐ ಸಂಪತ್ ಆನಿಕಿವಿ ಆತ್ಮರಕ್ಷಣೆಗಾಗಿ ಪ್ರಮುಖ ಆರೋಪಿಗಳಾದ ನಾಗರಾಜ ಸವದತ್ತಿ ಎಡಗಾಲಿಗೆ ಹಾಗೂ ಅಶ್ರಫ್ಖಾನ್ ಪಠಾಣ ಬಲಗಾಲಿಗೆ ಗುಂಡು ಹೊಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾವೇರಿ: ಮನೆ ಪರಿಹಾರ ಮಂಜೂರಿಗೆ ತಹಸಿಲ್ದಾರ್ ಕಚೇರಿ ಸಿಬ್ಬಂದಿಗೆ ಮಾಂಗಲ್ಯ ಒತ್ತೆ ಇಟ್ಟು 20 ಸಾವಿರ ಲಂಚ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಉಲ್ಟಾ ಹೊಡೆದಿದ್ದು, ನಾನು ಮನೆ ಪರಿಹಾರ ಪಡೆಯಲು ಚಿನ್ನದ ಸರ ಒತ್ತೆ ಇಟ್ಟಿಲ್ಲ ಎಂದು ತಾಲೂಕಿನ ಬೆಳವಿಗಿ ಗ್ರಾಮದ ಮಹಾಂತೇಶ ಬಡಿಗೇರ ತಿಳಿಸಿದ್ದಾರೆ.ಮನೆ ಪರಿಹಾರ ಮಂಜೂರಿಗಾಗಿ ಮಾಂಗಲ್ಯ ಒತ್ತೆ ಇಟ್ಟ ಲಂಚ ಪ್ರಕರಣ ಭಾರಿ ಸಂಚಲನ ಮೂಡಿಸಿತ್ತು. ಘಟನೆ ಹಿನ್ನೆಲೆ ಬೆಳವಿಗಿ ಗ್ರಾಮದ ಮಹಾಂತೇಶ್ ದಂಪತಿ ವಿಚಾರಣೆಗಾಗಿ ತಹಸೀಲ್ದಾರ್ ಶರಣಮ್ಮ ಹಾಗೂ ಎಸಿ ಚೆನ್ನಪ್ಪ ಅವರು ಆಗಮಿಸಿದ್ದರು. ತಹಸೀಲ್ದಾರ್ ಹಾಗೂ ಎಸಿ ಭೇಟಿ ಬಳಿಕ ಸಂತ್ರಸ್ತ ಉಲ್ಟಾ ಹೊಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.ಆದರೆ ಖಾಸಗಿ ಫೈನಾನ್ಸ್ ಸಂಸ್ಥೆಯವರು ಹೇಳುವ ಪ್ರಕಾರ ಮಹಾಂತೇಶ ಬಡಿಗೇರ ಅವರು ಮಾಂಗಲ್ಯ ಒತ್ತೆ ಇಟ್ಟು ಸಾಲ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.