ತಾಳಿಕೋಟೆ: ಖಾಸ್ಗತೇಶ್ವರ ಜಾತ್ರೆ ಹಾಗೂ ಮೊಹರಂ ಹಬ್ಬ ಎರಡೂ ಒಂದೇ ವಾರದಲ್ಲಿ ಬಂದಿದ್ದು, ಯಾವುದೇ ತರಹದ ಅಹಿತಕರ ಘಟನೆ ನಡೆಯಲಾರದಂತೆ ಆಯಾ ಉತ್ಸವ ಸಮಿತಿಯವರು ಎಚ್ಚರ ವಹಿಸಿ ಈ ಹಬ್ಬಗಳನ್ನು ಆಚರಿಸಬೇಕು ಎಂದು ಸಿಪಿಐ ಮಹ್ಮದ ಪಶುಉದ್ದೀನ ತಿಳಿಸಿದರು.
ಪಿಎಸ್ಐ ರಾಮನಗೌಡ ಸಂಕನಾಳ ಮಾತನಾಡಿ, ಪಟ್ಟಣದಲ್ಲಿ ಒಂದೇ ದಿನ ಎರಡೂ ಉತ್ಸವಗಳು ಜರುಗುವದರಿಂದ ಪಟ್ಟಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರಬೇಕಾಗುತ್ತದೆ. ಜಾತ್ರೋತ್ಸವ ಕಮಿಟಿ ಎಂದಿನಂತೆ ತಮ್ಮ ಕಾರ್ಯವನ್ನು ಮುಂದುವರೆಸಲಿ, ಆದರೆ ಮೊಹರಂ ಉತ್ಸವವನ್ನು ರಾತ್ರಿ ೮ ಗಂಟೆಯೊಳಗೆ ಮುಗಿಸುವಂತೆ ಸುಚಿಸಿದರು.ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಮಾತನಾಡಿ, ಹಬ್ಬ ಹರಿದಿನಗಳಾಗಲಿ ಜಾತ್ರೆ ಉತ್ಸವಗಳಾಗಲಿ ತಾಳಿಕೋಟೆ ಪಟ್ಟಣದಲ್ಲಿ ಎಲ್ಲವೂ ಸೌಹಾರ್ದತೆ ಭಾವನೆಯಿಂದ ನಡೆದಿವೆ. ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಈ ಎರಡೂ ಹಬ್ಬಗಳನ್ನು ಪೊಲೀಸ್ ಅಧಿಕಾರಿಗಳು ತಿಳಿಸಿದಂತೆ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿ ಎಂದಿನಂತೆ ಸೌಹಾರ್ದ ಭಾವನೆಯೊಂದಿಗೆ ನಡೆಯಲು ಮುಂದಾಗುವಂತೆ ವಿನಂತಿಸಿದರು.ಮುಸ್ಲಿಂ ಮುಖಂಡ ಇಮಾಮಸಾಬ ಕಾಳಗಿ ಮಾತನಾಡಿ, ಈ ಎರಡೂ ಹಬ್ಬಗಳನ್ನು ಎಲ್ಲರೂ ಒಂದಾಗಿ ಆಚರಿಸೋಣ. ಭಕ್ತಿಭಾವದಿಂದ ಹಬ್ಬ ಮಾಡುವುದರೊಂದಿಗೆ ಭಗವಂತನನ್ನು ಪ್ರಾರ್ಥಿಸಬೇಕು. ಖಾಸ್ಗತೇಶ್ವರ ಜಾತ್ರೋತ್ಸವ ಅಂಗವಾಗಿ ಅಸಂಖ್ಯಾತ ಭಕ್ತರು ದೀಡ ನಮಸ್ಕಾರ ಹಾಕುತ್ತಾರೆ. ನಮ್ಮ ಜನತೆಯೂ ಸಹಕರಿಸಿ ಎರಡೂ ಹಬ್ಬಗಳಲ್ಲಿ ಯಾವುದೇ ಆತಂಕ ಅಡ್ಡಿಯಾಗದಂತೆ ನೋಡಿಕೊಳ್ಳಬೇಕೆಂದರು.ಈ ವೇಳೆ ಜೈಭೀಮ ಮುತ್ತಗಿ, ಮುಸ್ಲಿಂ ಮುಖಂಡರಾದ ಸಿಕಂದರ ವಠಾರ, ಕಾಶಿನಾಥ ಮುರಾಳ, ಮೋದಿನಸಾಬ ನಗಾರ್ಚಿ, ನಜೀರ ಮುಲ್ಲಾ, ಸಿದ್ದನಗೌಡ ಪಾಟೀಲ(ನಾವದಗಿ), ಫಯಾಜ ಉತ್ನಾಳ, ಎಂ.ಕೆ.ಚೋರಗಸ್ತಿ, ಎಂ.ಜಿ.ಪಾಟೀಲ, ಶಶಿಧರ ಡಿಸಲೆ, ಸಂಭಾಜಿ ವಾಡಕರ, ಶಫೀಕ ಇನಾಮದಾರ, ಬಸ್ಸು ಮಾಲಿಪಾಟೀಲ, ಸಂತೋಷ ಘಾವಡೆ, ಸಂಗಯ್ಯ ದುರ್ಗದಮಠ ಇತರರು ಇದ್ದರು.
ಅಪರಾದ ವಿಭಾಗ ಪಿಎಸ್ಐ ಆರ್.ಎಸ್.ಭಂಗಿ ಸ್ವಾಗತಿಸಿ, ನಿರೂಪಿಸಿದರು.