ಅಂಶಿ ಪ್ರಸನ್ನಕುಮಾರ್
ಟಿ.ನರಸೀಪುರ ತಾಲೂಕು ಯಾಚೇನಹಳ್ಳಿಯ ವೈ.ಕೆ. ಚಂದ್ರು ಅವರು ಒಂದೂವರೆ ಎಕರೆಯಲ್ಲಿ ಸಾವಯವ ತೋಟಗಾರಿಕೆ ಮಾಡುತ್ತಿದ್ದು, ವಾರ್ಷಿಕ 9 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.
ಅವರಿಗೆ ಜಮೀನಿಗೆ ನೀರಾವರಿ ಸೌಲಭ್ಯವೂ ಇದೆ. ಒಂದು ಕೊಳವೆ ಬಾವಿಯನ್ನು ಕೂಡ ಕೊರೆಸಿದ್ದಾರೆ. 900 ಅಡಿಕೆ ಮರಗಳಿವೆ. ಅರ್ಧ ಎಕರೆಯಲ್ಲಿ 30 ವರ್ಷಗಳ ಹಿಂದೆ ನೆಟ್ಟಿರುವ ಮರಗಳಿವೆ. ಒಂದು ಎಕರೆಯಲ್ಲಿ 17 ವರ್ಷಗಳ ಹಿಂದೆ ನೆಟ್ಟಿರುವ ಮರಗಳಿವೆ. ಜಮೀನಿನನ ಬಳಿಯೇ ಬಂದು ತೆಂಗು ಖರೀದಿಸುತ್ತಿದ್ದು, ವಾರ್ಷಿಕ 6 ಲಕ್ಷ ರು. ಆದಾಯವಿದೆ.40 ತೆಂಗಿನ ಮರಗಳಿವೆ. ವಾರ್ಷಿಕ 1.80 ಲಕ್ಷ ರು.ವರೆಗೆ ಆದಾಯವಿದೆ. ಇವರ ಮನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಏಲಕ್ಕಿ 30-40 ಗಿಡಗಳಿವೆ. 12 ಕೆಜಿ ಇಳುವರಿ ಬಂದಿತ್ತು. ಪ್ರತಿ ಕೆಜಿಗೆ 2,200 ರು.ಗೆ ಮಾರಾಟ ಮಾಡಿದ್ದಾರೆ. ಕಾಳಮೆಣಸು-15 ಗಿಡಗಳಿವೆ, ಹೊಸದಾಗಿ 300 ಗಿಡಗಳನ್ನು ಹಾಕಿದ್ದಾರೆ. ಜುಲೈನಲ್ಲಿ ಇನ್ನೂ 300 ಗಿಡಗಳನ್ನು ಹಾಕುವ ಉದ್ದೇಶವಿದೆ. ಹಳೆಯ ಗಿಡಗಳಿಂದ 60 ಕೆಜಿ ಇಳುವರಿ ಬಂದಿತ್ತು. ಪ್ರತಿ ಕೆಜಿಗೆ 700 ರು.ಗಳಂತೆ ಮಾರಾಟ ಮಾಡಿದ್ದಾರೆ.
ಮೊಸಂಬಿ, ಸಪೋಟ, ಸೇಬು, ಜಾಯ್ಕಾಯ್, ಫ್ಯಾಷನ್ ಫ್ರೂಟ್, ಸೀಬೆ ಮತ್ತಿತರ ಹಣ್ಣುಗಳುಂಟು. ಇದಲ್ಲದೇ ತಾವರೆ, ಕಣಗಲೆ, ನಂದಿಬಟ್ಟಲು, ಮೂರು ಬಗೆಯ ದಾಸವಾಳ ಇವೆ. ಇದಲ್ಲದೇ ಮೆಣಸಿನಕಾಯಿ, ಬೀನ್ಸ್ ಕೂಡ ಬೆಳೆಯುತ್ತಾರೆ.
ತೋಟಗಾರಿಕೆ ಇಲಾಖೆಯಿಂದ ಹತ್ತು ಸಾವಿರ ರು. ನಗದು ಹಾಗೂ ಪ್ರಮಾಣಪತ್ರ, 2010 ರಲ್ಲಿ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ದೊರೆತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇಬ್ಬರು ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ವೈ.ಕೆ. ಚಂದ್ರು ಬಿನ್ ಮಿಶಿನ್ ಕೆಂಪೇಗೌಡ
ಬನ್ನೂರು ಹೋಬಳಿ
ಮೈಸೂರು ಜಿಲ್ಲೆ
- ವೈ.ಕೆ. ಚಂದ್ರು, ಯಾಚೇನಹಳ್ಳಿಮನೆಯ ಹೆಸರು ‘ಭೂಮಿಯ ಋಣ’
ವೈ.ಕೆ. ಚಂದ್ರು ಅವರ ‘ಮನೆಯ ಹೆಸರು ಭೂಮಿಯ ಋಣ’. ಎಲ್ಲರೂ ಭೂಮಿಯನ್ನು ಭೂಮಿ ತಾಯಿ ಎನ್ನುತ್ತಾರೆ. ಭೂಮಿ ತಾಯಿ ನಮಗೆ ಅನ್ನ ನೀಡುತ್ತಾಳೆ. ಪ್ರಕೃತಿಯ ಮುಂದೆ ನಾವೇನು ಮಾಡಲಾಗದು. ನಾವೆಲ್ಲಾ ಕೊನೆಗೆ ಮಣ್ಣಿಗೆ ಹೋಗುತ್ತೇವೆ. ಹೀಗಾಗಿ ಆ ತಾಯಿಯ ಋಣ ನಮ್ಮ ಮೇಲಿರುತ್ತದೆ. ಆದ್ದರಿಂದಲೇ ಈ ಹೆಸರು ಇಟ್ಟಿದ್ದೇನೆ ಎನ್ನುತ್ತಾರೆ ವೈ.ಕೆ. ಚಂದ್ರು.