ಬೆಂಗಳೂರು : ರಾಜ್ಯದಲ್ಲಿ ಅಗತ್ಯ ಇರುವ ಹೋಮಿಯೋಪಥಿ ರಿಸರ್ಚ್ ಸೆಂಟರ್ ಸ್ಥಾಪನೆ ಸಲುವಾಗಿ ಪ್ರಯತ್ನಿಸುವುದಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಹಾಗೂ ತಜ್ಞ ವೈದ್ಯ ಡಾ.ಸಿ.ಎನ್.ಮಂಜುನಾಥ್ ಭರವಸೆ ನೀಡಿದ್ದಾರೆ.
ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಶನ್ (ಕೆಎಚ್ಎಂಎ) ವತಿಯಿಂದ ಇಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಭಾನುವಾರ ನಡೆದ ‘ವಿಶ್ವ ಹೋಮಿಯೋಪಥಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿ, ಹೋಮಿಯೋಪಥಿ ರಿಸರ್ಚ್ ಸೆಂಟರ್ನಿಂದ ಸಂಶೋಧನೆ, ಸಮಸ್ಯೆಗಳಿಗೆ ಪರಿಹಾರ ಸೇರಿ ಸಾಕಷ್ಟು ಅನುಕೂಲವಿದೆ. ರಾಜ್ಯ ಹೋಮಿಯೋಪಥಿಕ್ ಸಂಘದ ಬೇಡಿಕೆ ಅನುಸಾರ ಕೇಂದ್ರ ಆಯುಷ್ ಇಲಾಖೆ ಜತೆಗೆ ಈ ಕುರಿತು ಸಮಾಲೋಚನೆ ನಡೆಸುತ್ತೇವೆ ಎಂದು ಹೇಳಿದರು.ಅಲೋಪತಿ, ನ್ಯಾಚುರೋಪತಿ, ಹೋಮಿಯೋಪತಿ ನಡುವೆ ಸಾಕಷ್ಟು ಸ್ಪರ್ಧೆ ಹೆಚ್ಚಾಗಿದೆ. ಆದರೆ ವೈದ್ಯಕೀಯ ಸೇವೆಯಲ್ಲಿನ ಗುಣಮಟ್ಟ ಕುಸಿಯುತ್ತಿದೆ. ವೈದ್ಯರು ರೋಗಿಗಳ ಜೊತೆಗೆ ಸಮಯ ಕಳೆದು ಸಮಸ್ಯೆ ಅರಿಯುತ್ತಿಲ್ಲ. ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಗುಣಮಟ್ಟವೂ ಕಡಿಮೆ ಆಗುತ್ತಿದ್ದು, ಇದರ ಬಗ್ಗೆ ಗಮನಹರಿಸಬೇಕು ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಕಟ್ಟುವ ಜೊತೆಗೆ ಅಗತ್ಯ ಸಿಬ್ಬಂದಿ ಕೊಡಬೇಕು. ಸಿಬ್ಬಂದಿ ಇಲ್ಲದೆ ಕೇವಲ ಕಟ್ಟಡ ಕಟ್ಟುವುದು ವ್ಯರ್ಥ. ತಾಲೂಕು, ಜಿಲ್ಲೆ ಮಟ್ಟದ ಆಸ್ಪತ್ರೆ, ಮಲ್ಟಿ ಸ್ಪೆಷಾಲಿಟಿ ಸೇರಿ ರಾಜ್ಯದಲ್ಲಿ ಕೊರತೆಯಿರುವ ಶೇ. 40 ರಷ್ಟು ಸಿಬ್ಬಂದಿಯನ್ನು ಭರ್ತಿ ಮಾಡುವತ್ತ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಆಸ್ಪತ್ರೆ ಜೊತೆಗೆ ರೋಗಿಗಳಿಗೆ ರಿಹ್ಯಾಬಲಿಟೇಶನ್ ಸೆಂಟರ್ ನಿರ್ಮಾಣ ಹೆಚ್ಚಾಗಬೇಕು ಎಂದು ಹೇಳಿದರು.ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಪ್ರತಿವರ್ಷ 1500 ಹೋಮಿಯೋಪತಿ ವೈದ್ಯಕೀಯ ವಿದ್ಯಾರ್ಥಿಗಳು ಪಾಸಾಗಿ ಹೊರಬರುತ್ತಿದ್ದಾರೆ. ಆದರೆ ಉದ್ಯೋಗದ ಸಮಸ್ಯೆ ಅವರನ್ನು ಕಾಡುತ್ತಿದೆ. ಸರ್ಕಾರ ಇಚ್ಛಾಶಕ್ತಿ ತೋರಿ ರಾಜ್ಯದಲ್ಲಿ ಪ್ರಾದೇಶಿಕವಾರು ಹೋಮಿಯೋಪಥಿ ಆಸ್ಪತ್ರೆ, ಕಾಲೇಜು ತೆರೆಯಬೇಕು. ಉದ್ಯೋಗ ಸೃಷ್ಟಿ ಮಾಡಬೇಕು. ಪಿಎಚ್ಸಿ ಕೇಂದ್ರದಲ್ಲಿ ಒಬ್ಬ ಹೋಮಿಯೋಪತಿ ವೈದ್ಯರು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೆಎಚ್ಎಂಎ ವತಿಯಿಂದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ಅವರನ್ನು ವತಿಯಿಂದ ಸನ್ಮಾನಿಸಲಾಯಿತು. ಕೆಎಚ್ಎಂಎ ಉಪಾಧ್ಯಕ್ಷ ಡಾ.ಜಯಂತ್ ಎ.ಬಿ. ಮಾತನಾಡಿದರು. ಕೆಎಚ್ಎಂಎ ರಾಜ್ಯಾಧ್ಯಕ್ಷ ಡಾ. ವೀರಬ್ರಹ್ಮಾಚಾರಿ, ಕಾರ್ಯಾಧ್ಯಕ್ಷ ಡಾ. ರಾಜೇಶ್ ಎ., ಡಾ. ನಿರಂಜನ್ ಕುರ್ಕಿಮಠ ಇದ್ದರು.