ಅಕ್ರಮವಾಗಿ ನೀಲಗಿರಿ ಮರ ಕಡಿದು ಸಾಗಾಟಕ್ಕೆ ಯತ್ನ

KannadaprabhaNewsNetwork | Published : Sep 30, 2024 1:18 AM

ಸಾರಾಂಶ

ಮದ್ದೂರು ತಾಲೂಕಿನ ಬೆಸಗರಹಳ್ಳಿ ಸಮೀಪದ ಶಿವಾರಗುಡ್ಡ ವಿದ್ಯಾಪೀಠದ ಆವರಣದಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ರು. ಮೌಲ್ಯದ ನೀಲಗಿರಿ ಮರಗಳನ್ನು ಕಡಿದು ಸಾಗಿಸುತ್ತಿದ್ದವರನ್ನು ತಡೆಯಲು ಹೋದ ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಕಾರ್ಯಕರ್ತರ ಮೇಲೆ ಮರಗಳ್ಳರು ಹಲ್ಲೆಗೆ ವಿಫಲ ಯತ್ನ ನಡೆಸಿರುವ ಘಟನೆ ಭಾನುವಾರ ಜರುಗಿದೆ.

ಕನ್ನಡ ಪ್ರಭ ವಾರ್ತೆ ಮದ್ದೂರು

ತಾಲೂಕಿನ ಬೆಸಗರಹಳ್ಳಿ ಸಮೀಪದ ಶಿವಾರಗುಡ್ಡ ವಿದ್ಯಾಪೀಠದ ಆವರಣದಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ರು. ಮೌಲ್ಯದ ನೀಲಗಿರಿ ಮರಗಳನ್ನು ಕಡಿದು ಸಾಗಿಸುತ್ತಿದ್ದವರನ್ನು ತಡೆಯಲು ಹೋದ ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಕಾರ್ಯಕರ್ತರ ಮೇಲೆ ಮರಗಳ್ಳರು ಹಲ್ಲೆಗೆ ವಿಫಲ ಯತ್ನ ನಡೆಸಿರುವ ಘಟನೆ ಭಾನುವಾರ ಜರುಗಿದೆ.

ಹಲ್ಲೆಗೆ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮರಗಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ವಿದ್ಯಾ ಪೀಠದ ಮುಖ್ಯಸ್ಥರು ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೆಸಗರಹಳ್ಳಿ ಸಮೀಪದ ಶಿವಾರಗುಡ್ಡ ವಿದ್ಯಾಪೀಠದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತಾ ಮತ್ತು ಜೀವನೋಪಾಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಕೆಲವು ವಿವಿಧ ಜಾತಿಯಮರಗಳ ಜೊತೆ ನೀಲಗಿರಿ ಮರಗಳನ್ನು ಬೆಳೆಯಲಾಗಿತ್ತು.

ಭಾನುವಾರ ಬೆಳಗ್ಗೆ ಕೆಲವು ಅನಾಮಧೇಯ ವ್ಯಕ್ತಿಗಳು ಇಲಾಖೆ ಮುಖ್ಯಸ್ಥರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಶಾಮೀಲಾಗಿ ನೀಲಗಿರಿ ಮರಗಳನ್ನು ಕಟರ್‌ಗಳ ಸಹಾಯದಿಂದ ಕಡಿದು ಹಾಕುತ್ತಿದ್ದರು.

ಈ ಬಗ್ಗೆ ಮಾಹಿತಿ ಗ್ರಾಪಂ ಮಾಜಿ ಅಧ್ಯಕ್ಷ ಎ.ಶೇಖರ್, ರೈತ ಸಂಘದ ಕೆ.ವಿ.ಸುನಿಲ್ ಕುಮಾರ್, ವಾಸು, ತಿಮ್ಮೇಗೌಡ ಸೇರಿದಂತೆ ಹಲವು ಗ್ರಾಮಸ್ಥರು ಮರ ಕಡಿಯುತ್ತಿದ್ದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್ ಹಾಗೂ ಸೆಕ್ಯೂರಿಟಿ ಗಾರ್ಡ್ ಈರಯ್ಯ ಅವರುಗಳ ಅನುಮತಿ ಮೇರೆಗೆ ನೀಲಗಿರಿ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎಂದು ಮರಗಳರು ಉತ್ತರ ನೀಡಿದ್ದಾರೆ.

ಈ ವೇಳೆ ಉಭಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮರಗಳರ ಗುಂಪು ಪ್ರಶ್ನಿಸಲುಹೋದ ಗುಂಪಿನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ಆಗಮಿಸುವಷ್ಟರಲ್ಲಿ ಮರಗಳ್ಳರು ಟ್ರ್ಯಾಕ್ಟರ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ.

ಮರಗಳತನಕ್ಕೆ ಬಂದಿದ್ದ ಎಂಟು ಮಂದಿ ವ್ಯಕ್ತಿಗಳು ಬನ್ನೂರು ಮೂಲದವರೆಂದು ತಿಳಿದುಬಂದಿದೆ. ಈ ಸಂಬಂಧ ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಗವಿಯಪ್ಪ ಇಲಾಖೆ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.

Share this article