ಕನ್ನಡಪ್ರಭ ವಾರ್ತೆ ಜಮಖಂಡಿ
ಪರಿಸರ ರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ, ಉತ್ತಮ ಆರೋಗ್ಯ, ದೇಶದ ಆರ್ಥಿಕತೆಗೆ ಹೊಡೆತ ಕೊಡುತ್ತಿರುವ ಇಂಧನ ಬಳಕೆಯ ನಿಯಂತ್ರಣಕ್ಕೆ ಸೈಕಲ್ ಸವಾರಿ ಮಾಡುತ್ತೇನೆ ಎಂದು ಘೋಷಿಸಿದ್ದ ಶಾಸಕ ಜಗದೀಶ ಗುಡಗುಂಟಿ 80ನೇ ಸ್ವತಂತ್ರೋತ್ಸವ ದಿನಾಚರಣೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ನಗರದಾದ್ಯಂತ ಸೈಕಲ್ ಸವಾರಿ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.ಶಾಸಕರ ವಾಹನ ದೊಂದಿಗೆ ಬರುತ್ತಿದ್ದ 3-4 ಬೆಂಬಲಿಗರ ವಾಹನಗಳು ಇಂದಿನ ಕಾರ್ಯಕ್ರಮಗಳಲ್ಲಿ ಕಾಣಿಸಲಿಲ್ಲ. ಹಲವು ಇಲಾಖೆಯ ಅಧಿಕಾರಿಗಳು ಶಾಸಕರನ್ನು ಅನುಸರಿಸಿ ಸೈಕಲ್ನಲ್ಲೇ ಸ್ವತಂತ್ರೋತ್ಸವ ಕಾರ್ಯಕ್ರಮದಕ್ಕೆ ಆಗಮಿಸಿದ್ದರು.
ಶಾಸಕರ ಸೈಕಲ್ ಸವಾರಿ ಅಚ್ಚರಿ ಮೂಡಿಸಿದ್ದು ಇನ್ನು ಮುಂದೆ ನಗರ ಪ್ರದೇಶದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಸೈಕಲ್ನಲ್ಲೇ ಬರುತ್ತೇನೆ ಎಂದು ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಪರಿಸರ ರಕ್ಷಣೆ ಸಸಿ ಮರಗಳನ್ನು ನೆಡುವುದು, ಪೋಷಿಸುವುದು ಸೇರಿ ಪರಿಸರ ಮಾಲಿನ್ಯ ನಿಯಂತ್ರಿಸಲು ದೇಶದ ಹೆಚ್ಚಿನ ಹಣ ಇಂಧನ ಖರೀದಿಗೆ ಬಳಕೆ ಆಗುತ್ತಿರುವುದನ್ನು ತಡೆಯಲು ನನ್ನದೊಂದು ಚಿಕ್ಕ ಪ್ರಯತ್ನ ಎನ್ನುವ ಶಾಸಕರ ನಡೆ - ನುಡಿಗಳು ಕ್ಷೇತ್ರದ ಜನರಲ್ಲಿ ಅಚ್ಚರಿ ಮೂಡಿಸಿವೆ. ಸಕ್ಕರೆ ಕಾರ್ಖಾನೆಯ ಮಾಲೀಕ, ಶ್ರೀಮಂತ ಶಾಸಕ ಎಂಬ ಖ್ಯಾತಿಯ ನಡುವೆ ಅವರ ಸರಳತನ ಹೆಚ್ಚು ಸುದ್ದಿ ಮಾಡಿದೆ.