ಸೈಜುಗಲ್ಲು ಎತ್ತಿ ಹಾಕಿ ಹಣ ಕದಿಯಲು ಪ್ರಯತ್ನ
ನಗರದ ಖೂಬಾ ಮಸೀದಿಯೊಂದರಲ್ಲಿ ಇಡಲಾಗಿದ್ದ ಹುಂಡಿಯ ಹಣ ಕದಿಯಲು ಕಳ್ಳನೊಬ್ಬ ಸೈಜುಗಲ್ಲನ್ನು ಡಬ್ಬಿ ಮೇಲೆ ಹಾಕಿ ಹಾಗೂ ಕಬ್ಬಿಣದಿಂದ ಮೀಟಿ ವಿಫಲ ಪ್ರಯತ್ನ ನಡೆಸಿದ ಘಟನೆ ನಗರದ ಶರೀಫ್ ಕಾಲೋನಿಯಲ್ಲಿ ನಡೆದಿದೆ. ಒಂದೇ ವರ್ಷದೊಳಗೆ ಒಂದೇ ಮಸೀದಿಯಲ್ಲಿ ನಾಲ್ಕು ಬಾರಿ ಕಳ್ಳತನ ಮಾಡಲು ಮುಂದಾಗಿರುವುದು ಕೆಲ ಅನುಮಾನಗಳಿಗೆ ಕಾರಣವಾಗಿದೆ.
ಖೂಬಾ ಮಸೀದಿಯಲ್ಲಿದ್ದ ಹುಂಡಿ ಮೇಲೆ ಸೈಜುಗಲ್ಲು ಎತ್ತಿಹಾಕಿ ಹಣ ದೋಚಲು ಯತ್ನಸಿದ್ದು, ಮುಖಕ್ಕೆ ಪಂಚೆ ಕಟ್ಟಿಕೊಂಡು ಬಂದು ವ್ಯಕ್ತಿ ಒಬ್ಬ ತಡರಾತ್ರಿ ೧.೩೦ರ ಸಮಯದಲ್ಲಿ ಮಸೀದಿಗೆ ನುಗ್ಗಿದ್ದು, ಮಸೀದಿಯಲ್ಲಿಟ್ಟಿದ್ದ ಹುಂಡಿ ಮೇಲೆ ಐದಾರು ಬಾರಿ ಸೈಜುಗಲ್ಲು ಎತ್ತಿಹಾಕಿ ಹಣ ಕದಿಯಲು ಯತ್ನಿಸಿದ್ದಾನೆ. ಹುಂಡಿ ಮೇಲೆ ಕಲ್ಲು ಎತ್ತಿಹಾಕುವ ಶಬ್ದಕ್ಕೆ ಮಸೀದಿಯಲ್ಲಿ ಮಲಗಿದ್ದ ಎರಡನೇ ಗುರುಗಳು ಓಡಿ ಬಂದಾಗ ರಾಡ್ನಿಂದ ಗುರುಗಳ ಮೇಲೆ ಹಲ್ಲೆಗೆ ಕಳ್ಳ ಮುಂದಾಗಿದ್ದಾನೆ. ನಂತರ ಭಯದಲ್ಲಿದ್ದ ಕಳ್ಳ ಮಸೀದಿಯ ಕಾಂಪೌಂಡ್ ಹಾರಿ ಕ್ಷಣಾರ್ಧದಲ್ಲಿ ಪರಾರಿ ಆಗಿದ್ದಾನೆ.ಒಂದೂ ಕಾಲು ವರ್ಷದಲ್ಲಿ ನಾಲ್ಕನೇ ಬಾರಿಗೆ ಇದೇ ಮಸೀದಿಯಲ್ಲಿ ಕಳ್ಳತನ ಮಾಡಲು ಚೋರರು ಮುಂದಾಗಿದ್ದಾರೆ. ವಿಷಯ ತಿಳಿದ ನಗರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಬೆರಳಚ್ಚುಗಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಸೀದಿಗೆ ನುಗ್ಗಿರುವ ಕಳ್ಳನ ಚಲನವಲನವು ಸಿಸಿ ಕ್ಯಾಮಾರಾದಲ್ಲಿ ರೆಕಾರ್ಡ್ ಆಗಿದ್ದು, ಆತನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.