ಕನ್ನಡಪ್ರಭ ವಾರ್ತೆ ಕಾರ್ಕಳಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಅಂತಿಮ ದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಹರಕೆ ಹಾಗೂ ಬಿನ್ನಹಗಳನ್ನು ಅರ್ಪಿಸಿದರು.
ಧರ್ಮಗುರು ಜಿತೇಶ್, ತಮ್ಮ ಧಾರ್ಮಿಕ ಬೋಧನೆಯಲ್ಲಿ, ಭರವಸೆಯ ಜೀವನ, ಕ್ರಿಸ್ತನೊಂದಿಗೆ ಯಾತ್ರಾರ್ಥಿಗಳಾಗುವ ಮಹತ್ವವನ್ನು ತಿಳಿಸಿದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಮಹೋತ್ಸವದ ಬಲಿಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಭಕ್ತರು ಪವಿತ್ರ ಪುಷ್ಕರಣಿಯ ಜಲತೀರ್ಥ, ಮೊಂಬತ್ತಿ ಬೆಳಗಿಸುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಪಾಪ ನಿವೇದನೆ ಸಂಸ್ಕಾರ ಮತ್ತು ಪುಷ್ಪಪ್ರಸಾದ ಸೇವೆ ಮುಂತಾದ ಆಚರಣೆಗಳಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.ಸಂಜೆಯ ಅಂತಿಮ ಪೂಜೆಯ ಬಳಿಕ, ಸಂತ ಲಾರೆನ್ಸ್ ಅವರ ಪ್ರತಿಮೆಯನ್ನು ಗುಡಿಗೆ ಮೆರವಣಿಗೆಯ ಮೂಲಕ ಮರುಸ್ಥಾಪಿಸಲಾಯಿತು. ಮಹೋತ್ಸವದ ಧ್ವಜವನ್ನು ಗೌರವಯುತವಾಗಿ ಕೆಳಗಿಳಿಸಲಾಯಿತು.