ಕನ್ನಡಪ್ರಭ ವಾರ್ತೆ ಮಾಲೂರು
ಇಲ್ಲಿನ ನಗರಸಭೆ ಆಡಳಿತ ಹಳೇ ಬಸ್ ನಿಲ್ದಾಣ ಕಟ್ಟಡವನ್ನು ತೆರವುಗೊಳಿಸಿ ಮುಂದೆ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯಮಳಿಗೆಗಳ ಹರಾಜು ಪ್ರಕ್ರಿಯೆಗೆ ಮುಂದಾಗಿರುವುದು ಅತ್ಯಂತ ಹಾಸ್ಯಾಸ್ಪದ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಾಗಿದೆ. ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿಯು ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಪ್ರದೀಪ್ ರವರಿಗೆ ಮನವಿ ಸಲ್ಲಿಸಿತು. ಈ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಮಾತನಾಡಿ, ನಗರದ ಬಸ್ ನಿಲ್ದಾಣದ ಬಳಿ ೭೬ ಅಂಗಡಿ ಮಳಿಗೆಗಳನ್ನು ಹೊಂದಿದ್ದು ಸ್ಥಳಿಯ ನಗರಸಭೆ ಅಧಿಕಾರಿಗಳು ಈ ಹರಾಜು ಪ್ರಕ್ರಿಯೆಗೆ ಕರಪತ್ರಗಳನ್ನು ಹಂಚಿದೆ. ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿಲ್ಲ. ಮಳಿಗೆ ನಿರ್ಮಾಣಕ್ಕೆ ಮೊದಲೆ ಹರಾಜು ಪ್ರಕ್ರಿಯೆಗೆ ಮುಂದಾಗಿದೆ ಎಂದು ಹೇಳಿದರು.ನಿರ್ಮಾಣಕ್ಕೆ ಮೊದಲೇ ಹರಾಜು
ಮೊದಲು ಹಳೇ ಬಸ್ ನಿಲ್ದಾಣ ಕಟ್ಟಡವನ್ನು ತೆರವುಗೊಳಿಸಿ ನಂತರ ಹೊಸ ಕಟ್ಟಡವನ್ನು ನಿರ್ಮಿಸಿ ಬಳಿಕ ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಇದು ನಿಯಮ. ಅದನ್ನು ಬಿಟ್ಟು ಈಗಾಲೇ ಬಸ್ ನಿಲ್ದಾಣದ ಅಂಗಡಿ ಮಳಿಗೆಗೆ ಹರಾಜು ಪ್ರಕ್ರಿಯೆಯನ್ನು ಕೈಗೊಂಡಿರುವುದು ಹಾಲಿ ಇರುವ ಅಂಗಡಿ ಮಳಿಗೆಗಳ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಾಗಿದ್ದು, ಇದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಅವರು ಆರೋಪಿಸಿದರು.ಹರಾಜು ಪ್ರಕ್ರಿಯೆ ರದ್ದು ಮಾಡಿ
ಅಲ್ಲದೇ ೭೬ ಅಂಗಡಿ ಮಳಿಗೆಗಳನ್ನು ಮೀಸಲಾತಿಗೆ ಅನುಗುಣವಾಗಿ ಮೀಸಲಿರಿಸಲಾಗಿದೆ. ಸಾಮಾನ್ಯ ವರ್ಗಕ್ಕೂ ಮತ್ತು ಪರಿಶಿಷ್ಟ ವರ್ಗಗಳಿಗೆ ಸಮವಾಗಿ ಅಂಗಡಿ ಮಳಿಗೆಗೆ ಹಣವನ್ನು ಕಟ್ಟುವಂತೆ ಸೂಚಿಸಲಾಗಿದ್ದು, ಈ ಹರಾಜು ಪ್ರಕ್ರಿಯೆಯನ್ನು ರದ್ದು ಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ಪ್ರೋ.ಬಿ.ಕೃಷ್ಣಪ್ಪ ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಒತ್ತಾಯಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಸಂಘಟನಾ ಸಂಚಾಲಕ ಡಿ ಎನ್ ನಾರಾಯಣಸ್ವಾಮಿ, ಟೇಕಲ್ ಹೋಬಳಿಯ ಸಂಚಾಲಕ ಉಳ್ಳೇರಹಳ್ಳಿ ಮುನಿರಾಜು, ತಾಲ್ಲೂಕು ಸಮಿತಿ ಸದಸ್ಯ ಮಾಸ್ತಿ ವೆಂಕಟೇಶಪ್ಪ, ತಾಲ್ಲೂಕು ಸಂಘಟನಾ ಸಂಚಾಲಕ ತಿರುಮಲೇಶ್, ಅರಳೇರಿ ಮುನಿರಾಜು, ನಾರಾಯಣಸ್ವಾಮಿ, ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು,