ಮೃತನ ಪತ್ನಿ, ಮಗಳ ಮುಂದೆ ಆರೋಪಿಗಳು ಪೊಲೀಸರಿಗ ಶರಣು
ಉಡುಪಿ: ಆಡಿಯೋ ವೈರಲ್ ಮಾಡಿದ ಕಾರಣಕ್ಕಾಗಿ ಸ್ನೇಹಿತರೇ ಸೇರಿ ವ್ಯಕ್ತಿಯೊಬ್ಬರನ್ನು ಮನೆಗೆ ನುಗ್ಗಿ ಬರ್ಬರವಾಗಿ ಕೊಂದ ಘಟನೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯನಗರದಲ್ಲಿ ಮಂಗಳವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ.
ವಿನಯ್ ದೇವಾಡಿಗ (40) ಮೃತರು. ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯ ಗಾಂಧಿನಗರ ನಿವಾಸಿಗಳಾದ ಅಕ್ಷೇಂದ್ರ ಯಾನೆ ಅಕ್ಷಯ್ (34) ಮತ್ತು ಆತನ ತಮ್ಮ ಅಜಿತ್ (28) ಹಾಗೂ ಕೊಕ್ಕರ್ಣೆ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ (29) ಕೊಲೆ ಆರೋಪಿಗಳು. ಅವರು ಪೊಲೀಸರಿಗೆ ಶರಣಾಗಿದ್ದು ಅವರನ್ನು ಬಂಧಿಸಲಾಗಿದೆ.ಆರೋಪಿ ಅಕ್ಷಯ್ಗೆ ಯಾರೋ ಅವಾಚ್ಯವಾಗಿ ಬೈದಿರುವ ಆಡಿಯೋವನ್ನು ವಿನಯ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದ. ಇದು ಅಕ್ಷಯ್ಗೆ ಗೊತ್ತಾಗಿ ಸಿಟ್ಟಿನಿಂದ ತಮ್ಮ ಮತ್ತು ಗೆಳೆಯರೊಂದಿಗೆ ಸೇರಿ ವಿನಯ್ನನ್ನು ಬರ್ಭರವಾಗಿ ಕೊಲೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ವಿನಯ್ ವೃತ್ತಿಯಲ್ಲಿ ಪೈಂಟರ್ ಆಗಿದ್ದು, ಮಂಗಳವಾರ ರಾತ್ರಿ 8.30ಕ್ಕೆ ಮನೆಗೆ ಬಂದು ಪತ್ನಿ, ಮಗಳೊಂದಿಗೆ ಊಟ ಮಾಡಿ ಮಲಗಿದ್ದ. ರಾತ್ರಿ 11.30ಕ್ಕೆ ಅವರ ಪರಿಚಯದ ಅಕ್ಷಯ್ ಮತ್ತು ಇನ್ನಿಬ್ಬರು ಬಂದು ಬಾಗಿಲು ಬಡಿದರು. ಪತ್ನಿ ಸೌಮ್ಯಶ್ರೀ ಬಾಗಿಲು ತೆಗೆದಿದ್ದು, ಆರೋಪಿಗಳು ಕೈಯಲ್ಲಿ ಮಚ್ಚು ಹಿಡಿದು ಒಳನುಗ್ಗಿ ಮನೆಯಲ್ಲೆಲ್ಲಾ ಹುಡುಕಾಡಿದರು.ನಂತರ ವಿನಯ್ ಮಲಗಿದ್ದ ಕೋಣೆಯ ಬಾಗಿಲನ್ನು ಬಲವಂತವಾಗಿ ದೂಡಿ ಒಳನುಗ್ಗಿ, ವಿನಯ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡರು. ವಿನಯ್ ತಪ್ಪಿಸಿಕೊಳ್ಳದಂತೆ ಅಜಿತ್ ಗಟ್ಟಿಯಾಗಿ ಹಿಡಿದುಕೊಂಡ, ಆಕ್ಷಯ್ ಮತ್ತು ಅಜಿತ್ ಮಚ್ಚುನಿಂದ ಅವರ ತಲೆಗೆ ಕಡಿದ, ಸ್ಕೂಟರಿನಲ್ಲಿ ಪರಾರಿಯಾದರು.ತಲೆ ಸೀಳಿ, ಮೊಣಕೈಗೆ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದ ಅಕ್ಷಯ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆರೋಪಿಗಳು ವಿನಯ ಅವರನ್ನು ಪತ್ನಿ, ಮಗಳು ಮತ್ತು ತಾಯಿಯ ಎದುರಿನಲ್ಲಿ ಅತ್ಯಂತ ಅಮಾನವೀಯವಾಗಿ ಕೊಲೆ ಮಾಡಿದ್ದಾರೆ.