ಭಟ್ಕಳ ಆಸರಕೇರಿ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಕನ್ನಡಪ್ರಭ ವಾರ್ತೆ ಭಟ್ಕಳ
ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿ, ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಕ್ರಮದಿಂದ ಧರ್ಮ ಪ್ರಚಾರ ಹೆಚ್ಚಾಗುತ್ತದೆ. ಸತ್ಸಂಗದಿಂದ ನಮ್ಮಲ್ಲಿರುವ ಆಧ್ಯಾತ್ಮಿಕ ಶಕ್ತಿ ಜಾಗೃತಗೊಳ್ಳುತ್ತದೆ. ನಾಮಧಾರಿ ಸಮಾಜ ಆಧ್ಯಾತ್ಮಿಕವಾಗಿ ಜಾಗೃತಗೊಂಡು ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಆಗಬೇಕು. ಸಮಾಜದವರು ಎಲ್ಲಾ ಸಮಾಜ ಬಾಂಧವರನ್ನೂ ಸಹ ಪ್ರೀತಿ, ವಿಶ್ವಾಸ, ಬಾಂಧವ್ಯದಿಂದ ನೋಡಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕಾರ್ಯ ಸಮಾಜದಿಂದ ಆಗಬೇಕು. ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಿಂದ ದಾಂಪತ್ಯದ ಅರಿವು ಮೂಡುತ್ತದೆ. ಇದೊಂದು ಪುಣ್ಯತಹ: ಕಾರ್ಯಕ್ರಮವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಸಂತಸ ತಂದಿದೆ ಎಂದರು. ನಾಮಧಾರಿ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, 21 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಎಲ್ಲಾ ಸಮುದಾಯವದರನ್ನೂ ಪ್ರೀತಿ, ವಿಶ್ವಾಸದಿಂದ ನೋಡಿದ್ದೇನೆ. ಹಲವು ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಾಮಧಾರಿ ಸಮಾಜದಿಂದ ವಿದ್ಯಾರ್ಥಿನಿಲಯ, ಯಾತ್ರಿ ನಿವಾಸ, ಪುರವರ್ಗದಲ್ಲಿ ಸಭಾಭವನ ನಿರ್ಮಿಸಲು ಬೇಡಿಕೆ ಇಟ್ಟಿದ್ದು, ಇದಕ್ಕೆ ಸ್ಪಂದಿಸುತ್ತೇನೆ. ಆದಷ್ಟು ಬೇಗ ಕೆಲಸ ಆರಂಭಿಸಿ ಎಂದ ಅವರು, ನಾಮಧಾರಿ ಸಮಾಜಕ್ಕೆ ಎಂತಹ ಸಂದರ್ಭದಲ್ಲೂ ಸಹ ಸಹಾಯ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಅರುಣ ನಾಯ್ಕ ಪ್ರಸ್ತಾವಿಕ ಮಾತನಾಡಿದರು. ನಾಮಧಾರಿ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಎಲ್. ನಾಯ್ಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಬೆಂಗಳೂರಿನ ರಾಧಕೃಷ್ಣ ನೇತೃತ್ವದ ತಂಡ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಟ್ಟರು. ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಸಮಾಜ ಗೌರವಾಧ್ಯಕ್ಷ ಕೃಷ್ಣಾ ನಾಯ್ಕ, ಉಪಾಧ್ಯಕ್ಷ ಎಂ.ಕೆ. ನಾಯ್ಕ ಸೇರಿ ನಾಮಧಾರಿ ಒಕ್ಕೂಟದ ಸದಸ್ಯರು, ಸಮಾಜ ಬಾಂಧವರಿದ್ದರು. ಮಧ್ಯಾಹ್ನ ಸಾವಿರಾರು ಜನರು ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ ಹರಿನಾಮ ಸ್ಮರಣೆ ಹೌದರಾಯನ ಕುಣಿತ ಗಮನ ಸೆಳೆಯಿತು. ರಾತ್ರಿ ಗದ್ದುಗೆ ಶ್ರೀ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ದೇವಸ್ಥಾನಕ್ಕೆ ಆಗಮಿಸಿತು.