ಡಾ. ತುಂಬೆ ಮೊಯ್ದಿನ್‌ಗೆ ಹೊಸ ವರ್ಷದ ಪ್ರಶಸ್ತಿ

KannadaprabhaNewsNetwork |  
Published : Jan 13, 2026, 03:15 AM IST
ಡಾ.ತುಂಬೆ ಮೊಯ್ದಿನ್‌ಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ  | Kannada Prabha

ಸಾರಾಂಶ

ದುಬೈನ ತುಂಬೆ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರಿಗೆ ಸಮಾಜ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ನೀಡಿದ ಅಪೂರ್ವ ಸೇವೆಯನ್ನು ಗುರುತಿಸಿ ಹೊಸ ವರ್ಷದ ಪ್ರಶಸ್ತಿ ೨೦೨೬ ಪ್ರದಾನ

ಮಂಗಳೂರು: ದುಬೈನ ತುಂಬೆ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರಿಗೆ ಸಮಾಜ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ನೀಡಿದ ಅಪೂರ್ವ ಸೇವೆಯನ್ನು ಗುರುತಿಸಿ ಹೊಸ ವರ್ಷದ ಪ್ರಶಸ್ತಿ ೨೦೨೬ ಪ್ರದಾನ ಮಾಡಲಾಯಿತು.ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಹಾಗೂ ಡಾ. ಟಿಎಂಎ ಪೈ ಫೌಂಡೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಈ ಗೌರವ ಪ್ರದಾನ ಸಮಾರಂಭ ಮಣಿಪಾಲದ ಹೋಟೆಲ್ ಫಾರ್ಚ್ಯೂನ್ ಸಭಾಂಗಣದಲ್ಲಿ ನಡೆಯಿತು.

ಸಮಾಜ ಮತ್ತು ಸಮುದಾಯದ ಅಭಿವೃದ್ಧಿಗೆ ಅಪರೂಪದ ಕೊಡುಗೆ ನೀಡಿದ ಗಣ್ಯರನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಕರಾವಳಿ ಜಿಲ್ಲೆಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಾಧಕರನ್ನು ಸನ್ಮಾನಿಸುವುದು ಇದರ ಆಶಯವಾಗಿದೆ. ಸಾಮಾಜಿಕ, ವೈದ್ಯಕೀಯ, ಶಿಕ್ಷಣ, ಸಂಶೋಧನೆ ಹಾಗೂ ಇತರ ಸೇವಾ ಕ್ಷೇತ್ರಗಳಲ್ಲಿ ಮಹತ್ವದ ಪ್ರಭಾವ ಬೀರಿದ ನಾಯಕರನ್ನು ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆರೋಗ್ಯ ರಕ್ಷಣೆ, ವೈದ್ಯಕೀಯ ಶಿಕ್ಷಣ, ಸಂಶೋಧನೆ, ರೋಗನಿರ್ಣಯ ಮತ್ತು ಸಮುದಾಯ ಸೇವೆಯನ್ನು ಒಳಗೊಂಡ ಸಮಗ್ರ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಡಾ. ತುಂಬೆ ಮೊಯ್ದೀನ್ ಅವರ ದೂರದೃಷ್ಟಿಯ ನಾಯಕತ್ವವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ೧೯೯೭ರಲ್ಲಿ ತುಂಬೆ ಗ್ರೂಪ್ ಸ್ಥಾಪನೆಯಿಂದ ಹಿಡಿದು ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಸ್ಥಾಪನೆ ವರೆಗೆ ಅವರ ಪ್ರಯತ್ನಗಳು ಗುಣಮಟ್ಟದ ಶಿಕ್ಷಣ, ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆ ಮತ್ತು ಅಂತರರಾಷ್ಟ್ರೀಯ ಸಹಯೋಗದತ್ತ ಕೇಂದ್ರೀಕೃತವಾಗಿವೆ.ಗಲ್ಫ್ ಪ್ರದೇಶದ ಪ್ರಮುಖ ಅನಿವಾಸಿ ಭಾರತೀಯರಲ್ಲಿ ಒಬ್ಬರಾಗಿರುವ ಡಾ. ತುಂಬೆ ಮೊಯ್ದೀನ್ ಅವರು ಬ್ಯಾರಿ ಸಮುದಾಯದಿಂದ ಹೊರಹೊಮ್ಮಿದ ಗೌರವಾನ್ವಿತ ಜಾಗತಿಕ ವ್ಯಕ್ತಿತ್ವವಾಗಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಮುಖ ಉದ್ಯಮಿ ಹಾಗೂ ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಕರಾವಳಿ ಕರ್ನಾಟಕದಿಂದ ಮಧ್ಯಪ್ರಾಚ್ಯ ಮತ್ತು ಇತರೆ ರಾಷ್ಟ್ರಗಳವರೆಗೆ ಸಂಸ್ಥೆಗಳನ್ನು ನಿರ್ಮಿಸಿರುವ ಅವರ ಪಯಣವು ಮೌಲ್ಯಾಧಾರಿತ ಮತ್ತು ಸಾಮಾಜಿಕ ಜವಾಬ್ದಾರಿಯ ನಾಯಕತ್ವಕ್ಕೆ ಉದಾಹರಣೆಯಾಗಿದೆ.

ಗೌರವ ಸ್ವೀಕರಿಸಿ ಮಾತನಾಡಿದ ಡಾ. ತುಂಬೆ ಮೊಯ್ದೀನ್ ಅವರು, ತಲೆಮಾರುಗಳ ವೃತ್ತಿಪರರನ್ನು ರೂಪಿಸಿರುವ ಮಣಿಪಾಲ ಸಂಸ್ಥೆಯಿಂದ ದೊರೆತ ಈ ಮನ್ನಣೆ ನನಗೆ ಅತ್ಯಂತ ಗೌರವದ ಸಂಗತಿ. ಈ ಪ್ರಶಸ್ತಿಯನ್ನು ವೈಯಕ್ತಿಕ ಸಾಧನೆಯಾಗಿ ಅಲ್ಲ, ಬದಲಾಗಿ ತಂಡಗಳ ಶ್ರಮ ಮತ್ತು ಮೌಲ್ಯಾಧಾರಿತ ಸಂಸ್ಥೆಗಳು ಸಮಾಜಕ್ಕಾಗಿ ಸಾಧಿಸಿದ ಫಲವಾಗಿ ನೋಡುತ್ತೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌