ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಸುಮಾರು 24 ಪೊಲೀಸ್ ಠಾಣೆಗಳಲ್ಲಿ ಬಾಗಲಕೋಟೆ ನಗರ ಪೊಲೀಸ್ ಠಾಣೆ ಪ್ರಥಮ ಸ್ಥಾನ ಪಡೆದಿದ್ದು ಕಳೆದ ವರ್ಷದಿಂದ ಬಾಗಲಕೋಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದೆ.
ಅತ್ಯುತ್ತಮ ಠಾಣೆ ಪ್ರಶಸ್ತಿಯನ್ನು ಸಿಪಿಐ ಗುರುನಾಥ ಚವ್ಹಾಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರಿಂದ ಈಚೆಗೆ ಸ್ವೀಕರಿಸಿದರು. ಇದರೊಂದಿಗೆ ಅತ್ಯುತ್ತಮ ಪರಿಸರ ಆವರಣ ಹೊಂದಿರುವ ಪೊಲೀಸ್ ಠಾಣೆ ಪ್ರಶಸ್ತಿಯನ್ನು ಕೆರೂರು ಠಾಣೆ ಪಡೆದಿದೆ.ಅತ್ಯುತ್ತಮ ವಾಹನ ಚಾಲಕ ಪ್ರಶಸ್ತಿಯನ್ನು ಬಾಗಲಕೋಟೆ ಡಿಎಆರ್ ಠಾಣೆಯ ಎಂ.ಎಂ.ಹಾಲಗೇರಿ ಪಾಲಾಗಿದೆ. ಅತ್ಯುತ್ತಮ ಕರ್ತವ್ಯ ನಿರ್ವಹಣೆಯ ಪ್ರಶಸ್ತಿ ಡಿಎಆರ್ ಘಟಕದ ಸಿಬ್ಬಂದಿ ಎಸ್.ಬಿ.ನಿಂಗೊಳ್ಳಿ ಪಾಲಾಗಿದೆ.
ಸಮಗ್ರ ಅತ್ಯುತ್ತಮ ಪೊಲೀಸ್ ಠಾಣೆಯನ್ನಾಗಿ ಮುಧೋಳ ಠಾಣೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹಾಗೂ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಪ್ರಶಸ್ತಿ ವಿತರಿಸಿದರು.