ಕುಷ್ಟಗಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಈ ಎಫ್ಎಲ್ಎನ್ ಕಲಿಕಾ ಹಬ್ಬ ಬುನಾದಿ, ಅಕ್ಷರ ಮತ್ತು ಸಂಖ್ಯಾಜ್ಞಾನದ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಶಿಕ್ಷಣ ಸಂಯೋಜಕ ಶಿವಾನಂದ ಪಂಪಣ್ಣನವರು ಹೇಳಿದರು.
ಕಲಿಕಾ ಹಬ್ಬವು ಮಕ್ಕಳನ್ನು ಕಲಿಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಅಯ್ಯಪ್ಪ ಸುರುಳ, ಸರಕಾರದ ಆದೇಶ ಮತ್ತು 1-5 ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡ ಈ ಕಾರ್ಯಕ್ರಮದ ಬಗ್ಗೆ ತಿಳಿಸುವುದರ ಜತೆಗೆ ಗ್ರಾಮದ ಸಹಕಾರ ಸ್ಮರಿಸಿದ ಅವರು ಸ್ಥಳೀಯ ಕಲೆಗಳು, ಜನಪದ ಹಾಡು ಮತ್ತು ಕಥೆಗಳಿಗೆ ಈ ಹಬ್ಬದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಕಲಿಕಾ ಹಬ್ಬವು ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿಸಲು ಮತ್ತು ಅವರಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಆಯೋಜಿಸಲಾಗುವ ಒಂದು ವಿಶೇಷ ಕಾರ್ಯಕ್ರಮ ಎಂದು ತಿಳಿಸಿದರು. ಮಕ್ಕಳಿಗೆ ಸಂಸ್ಕೃತಿಯ ಪರಿಚಯ, ಚಿತ್ರಕಲೆ, ಮಣ್ಣಿನ ಮಾದರಿ ತಯಾರಿಕೆ, ಕಾಗದದ ಕೆಲಸ, ನಾಟಕಗಳ ಮೂಲಕ ಮಕ್ಕಳ ಸೃಜನಶೀಲಶಕ್ತಿ ಉತ್ತೇಜಿಸಲಾಗುತ್ತದೆ ಎಂದರು.ಸಂಪನ್ಮೂಲ ವ್ಯಕ್ತಿ ಉಮೇಶ ಮೇಲಸಕ್ರಿ ಮಾತನಾಡಿ, ನಿಜವಾದ ಅರ್ಹತೆ ಪಡೆದ ಮಗುವಿಗೆ ಗೌರವ ಸಲ್ಲುವ ಈ ಹಬ್ಬ ಪ್ರಾಶಸ್ತ್ಯವಾದದ್ದು ಎಂದರು.
ಗ್ರಾಪಂ ಮಾಜಿ ಸದಸ್ಯ ಬಸವರಾಜ ಗೋನಾಳ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ ಮುರ್ತುಜಾಸಾಬ್ ಕೊಲಂಪಲ್ಲಿ ವಹಿಸಿದ್ದರು.ಫಕೀರಪ್ಪ ಬಿಂಜವಾಡಗಿ, ಶೇಖರಪ್ಪ ಕುರಿ, ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಮುಖ್ಯ ಗುರುಗಳು ಹಾಜರಿದ್ದರು.
ನಂತರ ಕಲಿಕಾ ಹಬ್ಬದ ಏಳು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.ಶಿಕ್ಷಕ ಪರಶುರಾಮ ಹಾಗೂ ಮಕ್ಕಳು ಪ್ರಾರ್ಥನೆಗೈದರು, ಶ್ರೀದೇವಿ ನೀರಲಕೇರಿ ನಿರೂಪಿಸಿದರು, ಯಮನೂರಪ್ಪ ಕುಷ್ಟಗಿ ಸ್ವಾಗತಿಸಿದರು, ಮಂಜುನಾಥ ಹಿರೇಮಠ ವಂದಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.