ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಭಾಗದ ಸಹಯೋಗದಲ್ಲಿ ‘ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ’ ಅಂಗವಾಗಿ ಶುಕ್ರವಾರ ಮೇ 17 ರಂದು ನಗರದ ರಾಮಸಮುದ್ರ (ಭೀಮಸಮುದ್ರ) ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಶಿಬಿರಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್ಕುಮಾರ್ ಅವರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಭಾಗದ ಸಹಯೋಗದಲ್ಲಿ ‘ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ’ ಅಂಗವಾಗಿ ಶುಕ್ರವಾರ ಮೇ 17 ರಂದು ನಗರದ ರಾಮಸಮುದ್ರ (ಭೀಮಸಮುದ್ರ) ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಶಿಬಿರಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್ಕುಮಾರ್ ಅವರು ಚಾಲನೆ ನೀಡಿದರು. ಬಳಿಕ ಶಿಬಿರವನ್ನು ಉದ್ದೇಶಿಸಿ ಮಾತನಾಡಿ, ಅಸಾಂಕ್ರಾಮಿಕ ರೋಗದ ಲಕ್ಷಣಗಳಾದ ಮೇಲಿಂದ ಮೇಲೆ ತಲೆ ನೋವು ಕಾಣಿಸಿಕೊಳ್ಳುವುದು, ತಲೆ ತಿರುಗುವುದು ಅಥವಾ ತಲೆ ಸುತ್ತು ಬರುವುದು, ಏದುಸಿರು ಬರುವುದು, ದೃಷ್ಠಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಅನಿಯಮಿತ ಹೃದಯ ಬಡಿತ ಕಂಡುಬರುವುದು, ಲಕ್ವ/ಪಾರ್ಶ್ವವಾಯು, ಹೃದಯಾಘಾತ, ಒಣಗಿದ ಬಾಯಿ, ವಿಪರೀತ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಮಂಪರು ಸ್ಥಿತಿ, ಆಯಾಸವಾಗುವುದು ಕಂಡು ಬಂದಲ್ಲಿ ವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದರು.
ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಪ್ರತಿದಿನ ವ್ಯಾಯಾಮ ಮಾಡಬೇಕು, ತೂಕ ಇಳಿಸಬೇಕು ಹಾಗೂ ಊಟದಲ್ಲಿ ಕೊಬ್ಬು, ಸಕ್ಕರೆ ಹಾಗೂ ಉಪ್ಪಿನ ಅಂಶ ಕಡಿಮೆ ಮಾಡಬೇಕು. ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಮದ್ಯಪಾನ ಹಾಗೂ ಧೂಮಪಾನ ತ್ಯಜಿಸಬೇಕು. ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. 30ವರ್ಷ ವಯಸ್ಸಿನ ನಂತರ ವರ್ಷಕ್ಕೊಮ್ಮೆ ರಕ್ತವನ್ನು ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಸಲಹೆ ಹಾಗೂ ಸೂಚನೆ ಮೇರೆಗೆ ಮಾತ್ರೆ ಅಥವಾ ಇನ್ಸುಲಿನ್ ಅನ್ನು ತೆಗೆದುಕೊಳ್ಳಬೇಕು ಎಂದು ಡಾ.ರಾಜೇಶ್ ಕುಮಾರ್ ಅವರು ತಿಳಿಸಿದರು.
ಶಿಬಿರದಲ್ಲಿ ಸಾರ್ವಜನಿಕರಿಗೆ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಖಾಯಿಲೆಗೆ ಸಂಬಂಧಿದಂತೆ ತಪಾಸಣೆಯನ್ನು ಕೈಗೊಂಡು ಔಷಧಗಳನ್ನು ವಿತರಣೆ ಮಾಡಲಾಯಿತು. ಶಿಬಿರದಲ್ಲಿ ಒಟ್ಟು 76 ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಹೊಸದಾಗಿ 6 ಜನರಿಗೆ ಮಧುಮೇಹ ಮತ್ತು 9 ಜನರಿಗೆ ರಕ್ತದೊತ್ತಡ ದೃಢಪಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಪ್ರತಿ ತಿಂಗಳು ವೈದ್ಯರ ಸಲಹೆ ಪಡೆಯಲು ಸೂಚಿಸಲಾಯಿತು.
ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್ ತಜ್ಞ ವೈದ್ಯ ಡಾ. ಭಾರ್ಗವ್, ಸಮುದಾಯ ಆರೋಗ್ಯ ಅಧಿಕಾರಿಗಳು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು, ಇತರರು ಶಿಬಿರದಲ್ಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.