ಓರವಿಲ್ಲ್ ಫರ್ನಾಂಡೀಸ್
ಹಳಿಯಾಳ:ಅಯೋಧ್ಯೆಯ ರಾಮಪ್ರತಿಷ್ಠಾಪನೆಯ ನಿಮಿತ್ತ ನಡೆಯಲಿರುವ ರಾಮೋತ್ಸವ ಕಾರ್ಯಕ್ರಮದಲ್ಲಿ ಹಳಿಯಾಳದ ಹೊಂಗಿರಣ ಕಲಾ ತಂಡಕ್ಕೆ ಸೂತ್ರದ ಗೊಂಬೆಯಾಟ ಪ್ರದರ್ಶಿಸಿಸುವ ಅವಕಾಶ ದೊರೆತಿದೆ.ಬೊಂಬೆಯಾಟದ ಮೇಷ್ಟ್ರು ಎಂದೇ ಖ್ಯಾತರಾಗಿರುವ ಹೊಂಗಿರಣ ಕಲಾ ತಂಡದ ಮುಖ್ಯಸ್ಥ ಸಿದ್ದಪ್ಪ ವೀರಭದ್ರಪ್ಪ ಬಿರಾದಾರ್ ಅವರು ತಮ್ಮ ಹಳ್ಳಿಯ ಶಿಷ್ಯ ವೃಂದದೊಂದಿಗೆ ಸೇರಿ ಸೀತಾಪಹರಣ ಸನ್ನಿವೇಶ ಆಧಾರಿತ ಸೂತ್ರದ ಗೊಂಬೆಯಾಟವನ್ನು ಕನ್ನಡ ಭಾಷೆಯಲ್ಲಿ ಪ್ರದರ್ಶಿಸಲಿದ್ದಾರೆ.ಗೊಂಬೆಯಾಟದ ಮೇಷ್ಟ್ರು:ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುದ್ದಾಪರದವರಾದ ಇವರು ಕಳೆದ 24 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಪ್ರಸ್ತುತ ಹಳಿಯಾಳ ತಾಲೂಕಿನ ಚಿಬ್ಬಲಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶಾಲಾ ಕೊಠಡಿಯನ್ನೇ ಗೊಂಬೆಯಾಟದ ಥೇಟರ್ನ್ನಾಗಿಸಿಕೊಂಡು ಕಲಿಕೆಯ ವಾತಾವರಣ ಸೃಷ್ಟಿಸಿದ್ದಾರೆ. ಈ ಮೂಲಕ, ವಿಜ್ಞಾನ ಮತ್ತು ಗಣಿತದ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಮಕ್ಕಳಿಗೆ ಗೊಂಬೆಯಾಟದ ಮೂಲಕ ಸುಲಭವಾಗಿ ಬೋಧಿಸುವ ವಿಶಿಷ್ಟ ಶೈಲಿ ಇವರದ್ದು. ಮಕ್ಕಳ ಬೌದ್ಧಿಕ ಮಟ್ಟದ ಆಧಾರವಾಗಿ ಸೂತ್ರದ ಗೊಂಬೆಯಾಟದಲ್ಲೂ ಸಾಕಷ್ಟು ಆಧುನಿಕತೆ, ಹೊಸತನ ಅಳವಡಿಸಿದ್ದು, ತಮ್ಮ ವಿದ್ಯಾರ್ಥಿಗಳಿಗೂ ಸೂತ್ರದ ಗೊಂಬೆಯಾಟ ಪ್ರದರ್ಶಿಸುವ ಕಲೆ ಕಲಿಸಿದ್ದಾರೆ. ತಮ್ಮ ಹಳೆಯ ವಿದ್ಯಾರ್ಥಿಗಳೊಂದಿಗೆ ರಾಜ್ಯ, ದೇಶದೆಲ್ಲೆಡೆ ಸಂಚರಿಸಿ ಪರಿಸರ ಸಂರಕ್ಷಣೆ ವಿಷಯದ ಮೇಲೆ ಸೂತ್ರದ ಗೊಂಬೆಯಾಟದ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಈವರೆಗೆ ಥೈಲ್ಯಾಂಡ್, ನೇಪಾಳ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಇವರ ಸೂತ್ರದ ಗೊಂಬೆಯಾಟ ಪ್ರದರ್ಶನ ಕಂಡಿದೆ.ರಾಮೋತ್ಸವದಲ್ಲಿ ಪ್ರದರ್ಶನ:ಆಯೋಧ್ಯೆಯಲ್ಲಿ ಜ. 14ರಿಂದ ಮಾರ್ಚ್ 25ರ ವರೆಗೆ ನಡೆಯಲಿರುವ ರಾಮೋತ್ಸವದಲ್ಲಿ ಸಿದ್ದಪ್ಪ ಬಿರಾದಾರ ಅವರ ಹೊಂಗಿರಣ ಕಲಾತಂಡದ ಸೂತ್ರದ ಗೊಂಬೆಯಾಟವನ್ನು ನಾಗಪುರದ ಕೇಂದ್ರ ಸರ್ಕಾರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ಆಯ್ಕೆ ಮಾಡಿ ಪತ್ರವನ್ನು ಕಳಿಸಿದ್ದು ಕಲಾತಂಡಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸೀತಾಪಹರಣ ಸೂತ್ರದ ಗೊಂಬೆಯಾಟ ಪ್ರದರ್ಶನಕ್ಕೆ ಒಂದು ಗಂಟೆಯ ಅವಕಾಶ ನೀಡಲಾಗಿದ್ದು, ಒಟ್ಟು ಐದು ಪ್ರದರ್ಶನಗಳನ್ನು ಈ ಹೊಂಗಿರಣ ಕಲಾತಂಡವು ನೀಡಲಿದೆ. ಗೊಂಬೆಯಾಟ ಟೀಮ್:ಬಿರಾದಾರ್ ಮೇಷ್ಟು ಈಗಾಗಲೇ ತಂತ್ರಜ್ಞರು ಸೇರಿ 15 ಜನರ ತಂಡ ರಚಿಸಿದ್ದು, ಇದರಲ್ಲಿ ಹಳೆಯ ವಿದ್ಯಾರ್ಥಿಗಳಾದ ನಾರಾಯಣ, ಸೂರಜ್, ಪ್ರಿಯಾಂಕ, ಫಕೀರ, ನಿಶಿತಾ, ಕಾರ್ತಿಕ, ಗಜಾನನ್, ರಾಘವೇಂದ್ರ, ಅಭಿಷೇಕ ಸೂತ್ರದ ಗೊಂಬೆ ಆಡಿಸಲಿದ್ದು, ಸೀತಾಪಹರಣ ಸೂತ್ರದ ಗೊಂಬೆಯಾಟಕ್ಕೆ ವಿಯಪುರದ ದಂಡಪ್ಪಗೌಡ ಪಾಟೀಲ ಸಾಹಿತ್ಯ ಬರೆದಿದ್ದು, ಶಿರಸಿಯ ವಿಶ್ವನಾಥ ಹಿರೇಮಠ ಸಂಗೀತ ನಿರ್ದೇಶನ ನೀಡಿದ್ದಾರೆ. ಗಂಗಾಧರ ನಾಯ್ಕ ಹಿನ್ನಲೆ ಗಾಯನ ಹಾಡಲಿದ್ದು, ತಬಲಾ ಯಲ್ಲಪ್ಪ ಭಜಂತ್ರಿ ಹಾಗೂ ರಿದಂ ಪ್ಯಾಡನ್ನು ಗಣೇಶ ಅರಳಿಕಟ್ಟೆ ನುಡಿಸಲಿದ್ದು, ಸಿದ್ದಪ್ಪ ಬಿರಾದಾರ ಅವರು ನಿರ್ದೇಶನ ನೀಡಲಿದ್ದಾರೆ
ಹಳ್ಳಿಯಲ್ಲಿ ಸಂಭ್ರಮ:ಅಯೋಧ್ಯೆಯ ರಾಮೋತ್ಸವದಲ್ಲಿ ಹೊಂಗಿರಣ ಕಲಾ ತಂಡಕ್ಕೆ ಅವಕಾಶ ಲಭಿಸಿದಲ್ಲದೇ, ಈ ಸೂತ್ರದ ಗೊಂಬೆಯಾಟ ಪ್ರದರ್ಶನದಲ್ಲಿ ಹಳ್ಳಿ ಹುಡುಗರಿಗೂ ಅವಕಾಶ ಲಭಿಸಿದ ಸುದ್ದಿ ಕೇಳಿ ಗ್ರಾಮೀಣ ಭಾಗದ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ. ನಿತ್ಯವೂ ಗೊಂಬೆಯಾಟದ ಮೇಷ್ಟ್ರು ಬಿರಾದಾರ್ ಅವರನ್ನು ಅಭಿನಂದಿಸಲು ಹಳ್ಳಿ ಜನರು ಹಿಂಡು ಹಿಂಡಾಗಿ ಬರಲಾರಂಭಿಸಿದ್ದಾರೆ.ವೈಜ್ಞಾನಿಕ, ಪರಿಸರ ವಿಷಯಕ್ಕೆ ಆಧಾರಿತ ಸೂತ್ರದ ಗೊಂಬೆಯಾಟ ಪ್ರದರ್ಶನ ನೀಡಿದ್ದೇವೆ. ರಾಮಾಯಣಕ್ಕೆ ಸಂಬಂಧಿಸಿದಂತೆ ವಾಲಿ-ಸುಗ್ರೀವ, ಶಬರಿ ಹಾಗೂ ಸೀತಾಪಹರಣ ಗೊಂಬೆಯಾಟವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ. ರಾಮೋತ್ಸವದಲ್ಲಿ ನೀಡುವ ಪ್ರದರ್ಶನಕ್ಕಾಗಿ ಹೊಸ ಸೂತ್ರದ ಗೊಂಬೆ ಸಿದ್ಧಪಡಿಸಲಾಗುತ್ತಿದ್ದು, ಪ್ರದರ್ಶನದ ರಂಗತಾಲಿಮನ್ನು ಆರಂಭಿಸಿದ್ದೇವೆ. ರಾಮೋತ್ಸವದಲ್ಲಿ ಪಾಲ್ಗೊಳ್ಳುವುದು ನಮಗೆಲ್ಲ ಹೊಸ ಅನುಭವ ಎಂದು ಸಿದ್ದಪ್ಪ ಬಿರಾದಾರ ಹೇಳಿದರು.