ಕೊಪ್ಪಳ: ಆಯುರ್ವೇದ ಭಾರತದ ಮತ್ತು ಪ್ರಾಚೀನ ಚಿಕಿತ್ಸಾ ಪದ್ಧತಿಯೂ ಹೌದು ಮತ್ತು ಸಂಸ್ಕೃತಿಯೂ ಆಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.2018-2019ನೇ ಸಾಲಿನಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ ನಿರ್ಮಿಸಿದ ಗಿಣಿಗೇರಾದಲ್ಲಿನ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಆಯುರ್ವೇದವು ಪ್ರಾಚೀನ ಸಂಸ್ಕೃತಿಯಾಗಿದೆ. ಆ ಕಾಲದಲ್ಲಿ ಜನರು ಮಿತಆಹಾರ ಸೇವನೆ, ಯೋಗ, ವ್ಯಾಯಾಮದಿಂದ ಆರೋಗ್ಯವಂತರಾಗಿದ್ದರು. ಅದರಂತೆ ಜೀವಿಸಲು ನಾವು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.ಗಿಣಿಗೇರಾ ಗ್ರಾಮದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿರುವುದರಿಂದ ಗ್ರಾಮದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗಿದೆ. ಕುಡಿಯುವ ನೀರಿನ ಸೌಕರ್ಯ, ಮುಖ್ಯವಾಗಿ ಶುದ್ಧ ನೀರು ಸಿಕ್ಕು ಆರೋಗ್ಯವಂತರಾಗಿರಲು ಸಾಧ್ಯವಾಗಿದೆ. ಮುಖ್ಯವಾಗಿ ಆಯುಷ್ ಚಿಕಿತ್ಸಾ ವಿಧಾನ ಬಳಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಸಂಸದರು ತಿಳಿಸಿದರು.ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಉತ್ತಮ ಆರೋಗ್ಯ ಕಾಯ್ದುಕೊಳ್ಳುವುದು ಇಂದು ಸವಾಲಿನ ಕೆಲಸ ಅನ್ನುವಂತಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆಯುರ್ವೇದ ಚಿಕಿತ್ಸೆ ಬಳಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಯಮನಪ್ಪ ಶಿರವಾರ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ನೀಲಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖಂಡರಾದ ಗೂಳಪ್ಪ ಹಲಗೇರಿ, ಕರಿಯಣ್ಣ ಮೇಟಿ, ಪಿಡಿಒ ಮಂಜುಳಾದೇವಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಫಾರ್ಮಸಿ ಅಧಿಕಾರಿ ಬಲರಾಮ ಸ್ವಾಗತಿಸಿದರು.