ರಾಮನಗರ: ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ವಿತರಿಸಲು ರಾಜ್ಯ ಸರ್ಕಾರ ನೀಡಿದ್ದ ಕಾಲಾವಕಾಶ ಮುಕ್ತಾಯಗೊಂಡಿದೆ. ಮತ್ತೊಮ್ಮೆ ಅವಧಿ ವಿಸ್ತರಣೆಯಾದರೆ ಬಿ-ಖಾತೆಗಳನ್ನು ವಿತರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ತಿಳಿಸಿದರು.
ಭೂ ಪರಿವರ್ತನೆ, ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದ ಇಲ್ಲದ ರೆವಿನ್ಯೂ ನಿವೇಶನಗಳಿಗೆ ಬಿ-ಖಾತೆ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು. ಇದೊಂದು ಐತಿಹಾಸಿಕ ತೀರ್ಮಾನವಾಗಿತ್ತು. ಮೊದಲು ನೀಡಿದ್ದ ಸಮಾಯವಾಕಾಶ ಕಡಿಮೆ ಎಂದು ಸರ್ಕಾರ ಒಂದು ಬಾರಿ ಅವಧಿ ವಿಸ್ತರಣೆ ಮಾಡಿ, ಆಗಸ್ಟ್ 10 ಕಡೆಯ ದಿನಾಂಕವನ್ನು ನಿಗದಿ ಮಾಡಿತ್ತು. ಈವರೆಗೆ ರಾಮನಗರ ನಗರಸಭೆಯಲ್ಲಿ 1700ಕ್ಕೂ ಅಧಿಕ ಬಿ-ಖಾತೆಗಳನ್ನು ವಿತರಿಸಲಾಗಿದೆ. ಇನ್ನೂ 300 ಅರ್ಜಿಗಳಿಗೆ ಖಾತೆ ವಿತರಣೆ ಬಾಕಿ ಇದೆ. ಆದರೆ ಸುಮಾರು 3 ಸಾವಿರ ಆಸ್ತಿ ಮಾಲೀಕರು ಬಿ-ಖಾತೆ ಪಡೆಯಲು ಅರ್ಜಿ ಸಲ್ಲಿಸಿಲ್ಲ ಎಂದರು.
ಮುಂದಿನ ದಿನಗಳಲ್ಲಿ ನಮೂನೆ-3 (ಎ-ಖಾತಾ) ವಿತರಣೆ ನಿರಂತರವಾಗಿ ಮುಂದುವರೆಯಲಿದೆ. ಈವರೆಗೆ ಮೂರು ಅಭಿಯಾನದ ಮೂಲಕ ವಾರ್ಡುಗಳಿಗೆ ತೆರಳಿ ಖಾತೆ ವಿತರಿಸಿದ್ದೇವೆ. ಇದರಿಂದ ನೂರಾರು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಇದೀಗ ನಡೆಯುತ್ತಿರುವ ಅಭಿಯಾನದಲ್ಲಿ 25 ಮತ್ತು 26ನೇ ವಾರ್ಡಿಗೆ ಸಂಬಂಧಿಸಿದ ಆಸ್ತಿಗಳಿಗೆ ಖಾತೆ ವಿತರಣೆ ಮಾಡಲಾಗುತ್ತಿದೆ. ವಿವಿಧ ಹಂತಗಳಲ್ಲಿ ಎಲ್ಲಾ ವಾರ್ಡುಗಳಿಗೆ ತೆರಳಿ ಖಾತೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.ಇ-ಆಸ್ತಿ ತಂತ್ರಾಂಶ ವಿವಿಧ ಅಧಿಕಾರಿಗಳ ಲಾಗಿನ್ಗಳಲ್ಲಿ ಸುಮಾರು 300 ಖಾತೆಗಳ ಸೃಜನೆ ಬಾಕಿ ಇದೆ. ಅವುಗಳನ್ನು ಶೀಘ್ರದಲ್ಲೆ ವಿತರಿಸಲಾಗುವುದು. ಕಳೆದ ಐದು ದಿನಗಳಿಂದ ನಿರಂತರವಾಗಿ ಸರ್ವರ್ ಸಮಸ್ಯೆ ಕಾರಣ ಖಾತೆ ವಿತರಣೆ ಕಾರ್ಯ ವಿಳಂಬವಾಯಿತು ಎಂದು ತಿಳಿಸಿದರು.
25ಕ್ಕೂ ಅಧಿಕ ಮಂದಿಗೆ ಇ-ಖಾತೆ ವಿತರಣೆ ಮಾಡಿದರು. ಅಭಿಯಾನದಲ್ಲಿ 50ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆಯುಕ್ತರಾದ ಡಾ.ಜಯಣ್ಣ, ಪ್ರೊಬೆಷನರಿ ಉಪವಿಭಾಗಾಧಿಕಾರಿ ಮಂಜುನಾಥ್, ನಗರಸಭೆ ಸದಸ್ಯರಾದ ಮುತ್ತುರಾಜ್, ಮಂಜುನಾಥ್, ನರಸಿಂಹ, ದೌಲತ್ ಷರೀಫ್, ಅಜ್ಮತ್, ಟಿಎಪಿಎಂಸಿ ಅಧ್ಯಕ್ಷರಾದ ಸುರೇಶ್, ಮುಖಂಡರಾದ ವೆಂಕಟೇಶ್, ರಮೇಶ್, ಶಿವಣ್ಣ, ರಾಜಣ್ಣ, ನಾಗೇಶ್, ಕಂದಾಯಾಧಿಕಾರಿ ಕಿರಣ್ ಸೇರಿದಂತೆ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
14ಕೆಆರ್ ಎಂಎನ್ 2.ಜೆಪಿಜಿರಾಮನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾರ್ಡ್ ವಾರು ಖಾತಾ ಅಭಿಯಾನದಲ್ಲಿ ಆಸ್ತಿ ಮಾಲೀಕರಿಗೆ ನಗರಸಭಾಧ್ಯ ಕೆ.ಶೇಷಾದ್ರಿ ಇ-ಖಾತೆಗಳನ್ನು ವಿತರಿಸಿದರು. ಆಯುಕ್ತ ಡಾ.ಜಯಣ್ಣ, ಪ್ರೊಬೆಷನರಿ ಉಪವಿಭಾಗಾಧಿಕಾರಿ ಮಂಜುನಾಥ್, ನಗರಸಭೆ ಸದಸ್ಯರು ಹಾಜರಿದ್ದರು.