ಬಿ.ಸಿ.ರೋಡ್‌- ಕಾಸರಗೋಡು ಅಂತಾರಾಜ್ಯ ಬಸ್‌ ಸಂಚಾರಕ್ಕೆ ಆದಾಯ ಕೊರತೆ ನೆಪ!

KannadaprabhaNewsNetwork |  
Published : Nov 28, 2025, 03:00 AM IST
ಬಿ.ಸಿ.ರೋಡ್‌-ಕಾಸರಗೋಡು ನಡುವಿನ ಕೆಎಸ್ಸಾರ್ಟಿಸಿ ಬಸ್‌  | Kannada Prabha

ಸಾರಾಂಶ

ಕಾಸರಗೋಡು-ಬಿಸಿ ರೋಡ್ ಮಾರ್ಗದಲ್ಲಿ ಅಧಿಕ ಆದಾಯ ತರುತ್ತಿದ್ದರೂ ಖಾಸಗಿ ಬಸ್‌ಗಳ ಲಾಬಿಗೆ ಮಣಿದು ಈ ರೂಟ್‌ನಲ್ಲಿ ಬಸ್‌ ಸಂಚಾರ ಹಂತ ಹಂತವಾಗಿ ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬ ಸಾರ್ವತ್ರಿಕ ಆರೋಪ ಕೇಳಿಬರುತ್ತಿದೆ.

ಐದರಿಂದ ಎರಡಕ್ಕೆ ಇಳಿದ ಬಸ್‌ಗಳ ಸಂಖ್ಯೆ, ಬೇರೆ ರೂಟ್‌ಗಳಿಗೆ ಈ ಬಸ್‌ಗಳ ವರ್ಗ

ವಿಶೇಷ ವರದಿ ಮಂಗಳೂರು

ಬಿ.ಸಿ.ರೋಡ್‌- ತೊಕ್ಕೊಟ್ಟು- ಕಾಸರಗೋಡು ನಡುವೆ ಸಂಚರಿಸುತ್ತಿದ್ದ 5 ಅಂತಾರಾಜ್ಯ ಸಾರಿಗೆ ಪೈಕಿ 2 ಸಾರಿಗೆ ಬಸ್‌ಗಳನ್ನು ರದ್ದುಪಡಿಸಿದ ಕೆಎಸ್ಸಾರ್ಟಿಸಿ ಮತ್ತೊಂದು ಬಸ್‌ನ್ನೂ ರದ್ದುಪಡಿಸಿತ್ತು. ಅಧಿಕ ಆದಾಯ ತರುತ್ತಿದ್ದರೂ ಖಾಸಗಿ ಬಸ್‌ಗಳ ಲಾಬಿಗೆ ಮಣಿದು ಈ ರೂಟ್‌ನಲ್ಲಿ ಬಸ್‌ ಸಂಚಾರ ಹಂತ ಹಂತವಾಗಿ ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬ ಸಾರ್ವತ್ರಿಕ ಆರೋಪ ಕೇಳಿಬರುತ್ತಿದೆ.

ಸುಮಾರು ಒಂಭತ್ತು ವರ್ಷಗಳ ಹಿಂದೆ ಬಿ.ಸಿ.ರೋಡ್‌-ಕಾಸರಗೋಡು ನಡುವೆ ಅಂತಾರಾಜ್ಯ ಕೆಸ್ಸಾರ್ಟಿಸಿ ಬಸ್‌ ಸಂಚಾರ ಆರಂಭಗೊಂಡಿತ್ತು. ಆರಂಭದಲ್ಲಿ ಐದು ಬಸ್‌ಗಳನ್ನು ಓಡಿಸಲಾಗುತ್ತಿತ್ತು. ದಿನದಲ್ಲಿ 28 ಸಾವಿರ ರು. ವರೆಗೂ ಆದಾಯ ತರುತ್ತಿತ್ತು. ಕೊರೋನಾ ಬಳಿಕ ಬಸ್‌ಗಳ ಸಂಖ್ಯೆ ಎರಡಕ್ಕೆ ಕಡಿತಗೊಂಡಿತ್ತು.

ವಯಾ ಮುಡಿಪು, ತೊಕ್ಕೊಟ್ಟು ಮೂಲಕ ಈ ಬಸ್‌ ಕಾಸರಗೋಡು-ಬಿ.ಸಿ.ರೋಡ್‌ ನಡುವೆ ಈ ಬಸ್‌ ಸಂಚಾರ. ಹೀಗಾಗಿ ಕಾಸರಗೋಡಿಗೆ ಪ್ರಯಾಣಿಸುವ ಮಂದಿ ಇದೇ ಬಸ್‌ನಲ್ಲಿ ನೇರವಾಗಿ ಪ್ರಯಾಣಿಸುತ್ತಿದ್ದರು. ಸುಮಾರು ಎರಡೂಕಾಲು ಗಂಟೆ ಅವಧಿಯಲ್ಲಿ ಈ ಬಸ್‌ ಗಮ್ಯ ಸ್ಥಾನ ತಲುಪುತ್ತಿತ್ತು. ಆದಾಯದ ಕೊರತೆ ನೆಪ:

ಕೊರೋನಾ ಬಳಿಕ ಮೂರು ಬಸ್‌ಗಳ ಓಡಾಟ ಇದ್ದುದು ಕಳೆದ ಕೆಲವು ಸಮಯದಿಂದ ಎರಡಕ್ಕೆ ಇಳಿದಿತ್ತು. ಸಾರ್ವಜನಿಕರ ತೀವ್ರ ಆಕ್ಷೇಪದ ಬಳಿಕ ಮತ್ತೆ ಒಂದು ಬಸ್‌ನ್ನು ಓಡಾಟಕ್ಕೆ ಇಳಿಸಲಾಗಿದೆ. ಇನ್ನೂ ಎರಡು ಬಸ್‌ಗಳು ಸಂಚಾರ ನಡೆಸುತ್ತಿಲ್ಲ. ಆದಾಯದ ಕೊರತೆ ನೆಪದಲ್ಲಿ ಈ ಬಸ್‌ಗಳ ಓಡಾಟ ಸ್ಥಗಿತಗೊಳಿಸಲಾಗಿದೆ ಎನ್ನುವುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಮಜಾಯಿಷಿ.

ವಿದ್ಯಾರ್ಥಿಗಳಿಗೆ ತೊಂದರೆ:

ಕಾಸರಗೋಡು-ಮಂಗಳೂರು ಅಂತಾರಾಜ್ಯ ಸಾರಿಗೆಗೆ ವಿದ್ಯಾರ್ಥಿ ಪಾಸ್‌ನಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಕಾಸರಗೋಡು-ಬಿ.ಸಿ.ರೋಡ್‌ ಬಸ್‌ಗೂ ಅಂತಾರಾಜ್ಯ ವಿದ್ಯಾರ್ಥಿ ಪಾಸ್‌ಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಕಾಸರಗೋಡಿನಿಂದ ದೇರಳಕಟ್ಟೆ, ಕೊಣಾಜೆಯ ಶಿಕ್ಷಣ ಸಂಸ್ಥೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಪಾಸ್‌ ನೆರವಾಗುತ್ತಿದೆ. ಅದೇ ರೀತಿ ಮುಡಿಪಿನಿಂದಲೂ ಮೆಲ್ಕಾರ್‌ ವರೆಗೆ ವಿದ್ಯಾರ್ಥಿಗಳಿಗೆ ಪಾಸ್‌ ನೀಡಲಾಗಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ಕಲ್ಪಿಸಿದ ಬಳಿಕ ಈ ಅಂತಾರಾಜ್ಯ ಸಂಚಾರದಲ್ಲಿ ಬಸ್‌ಗಳ ಸಂಖ್ಯೆ ಕಡಿತಗೊಳಿಸುವುದರಿಂದ ವಿದ್ಯಾರ್ಥಿಗಳು ಹಣ ನೀಡಿ ಖಾಸಗಿ ಬಸ್‌ಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಈ ಅಂತಾರಾಜ್ಯ ಬಸ್‌ಗೆ ಕರ್ನಾಟಕದ ಸ್ತ್ರೀಶಕ್ತಿ ಯೋಜನೆಯ ಉಚಿತ ಪ್ರಯಾಣ ಅನ್ವಯವಾಗುತ್ತಿಲ್ಲ. ಹಾಗಾಗಿ ಹಣ ನೀಡಿಯೇ ಪ್ರಯಾಣಿಸಬೇಕು. ಹಾಗಾಗಿ ಇದು ಈ ಬಸ್‌ನಲ್ಲಿ ಉತ್ತಮ ಆದಾಯಕ್ಕೆ ಕಾರಣವಾಗಿದೆ ಎನ್ನುವುದು ನಾಗರಿಕರ ವಾದ. ಆದರೆ ಖಾಸಗಿ ಲಾಬಿಗಳಿಗೆ ಮಣಿದು, ಆದಾಯದ ಕೊರತೆ ಹೇಳಿ ಕೆಎಸ್ಸಾರ್ಟಿಸಿಯ ಧರ್ಮಸ್ಥಳ, ಪುತ್ತೂರು, ಸುಬ್ರಹ್ಮಣ್ಯ ರೂಟ್‌ಗಳಿಗೆ ಈ ಬಸ್‌ಗಳನ್ನು ಕಳುಹಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು, ನಾಗರಿಕರು ಬವಣೆ ಪಡುವಂತಾಗಿದೆ ಎನ್ನುವುದು ಕೇಳಿಬರುತ್ತಿರುವ ಸಾರ್ವತ್ರಿಕ ಆರೋಪ. ಪ್ರಯಾಣಿಕರ ನೆಚ್ಚಿನ ಕೆಎಸ್ಸಾರ್ಟಿಸಿ ಬಸ್‌

ಸುಮಾರು 18 ಕಿ.ಮೀ. ದೂರದ ಮುಡಿಪು-ಬಿ.ಸಿ.ರೋಡ್‌ ನಡುವೆ ಖಾಸಗಿ ಬಸ್‌ ಕ್ರಮಿಸಲು ಒಂದು ಗಂಟೆ ಬೇಕಾಗುತ್ತದೆ. ಆದರೆ ಈ ಕೆಎಸ್ಸಾರ್ಟಿಸಿ ಬಸ್‌ ಕೇವಲ ಅರ್ಧ ಗಂಟೆಯಲ್ಲಿ ಸಂಚರಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು, ಪ್ರಯಾಣಿಕರು ಕೆಎಸ್ಸಾರ್ಟಿಸಿ ಬಸ್‌ನ್ನು ನೆಚ್ಚಿಕೊಳ್ಳುತ್ತಿದ್ದರು. ಆದರೆ ಈ ಬಸ್‌ನ ಸಂಚಾರವೇ ಮೊಟಕುಗೊಳ್ಳುತ್ತಿರಬೇಕಾದರೆ, ಪ್ರಯಾಣಿಕರು ಹೇಗೆ ಇದೇ ಬಸ್‌ನ್ನು ನೆಚ್ಚಿಕೊಂಡು ಪ್ರಯಾಣಿಸಬೇಕು ಎಂದು ಪ್ರಶ್ನಿಸುತ್ತಾರೆ ಮುಡಿಪಿನ ಕೆಎಸ್ಸಾರ್ಟಿಸಿ ಪರ ಹೋರಾಟಗಾರರು.

ಆದಾಯದ ಕೊರತೆ ಹಿನ್ನೆಲೆಯಲ್ಲಿ ಐದು ಬಸ್‌ಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಿ ಈಗ ಮತ್ತೆ ಮೂರು ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನ ಸಿಕ್ಕಿದರೆ ಬಾಕಿಯುಳಿದ ಎರಡು ಬಸ್‌ಗಳನ್ನೂ ಶೀಘ್ರವೇ ಸಂಚಾರಕ್ಕೆ ಇಳಿಸಲಾಗುವುದು.

-ಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಿ
ಪಾಟೀಲ ಪುಟ್ಟಪ್ಪ ಕನ್ನಡ ನಾಡು ಕಂಡ ಧೀಮಂತ ಸಾಹಿತಿ