ಮುಂದಿನ ಶತಮಾನ ಸನಾತನ ಧರ್ಮದ್ದಾಗಲಿದೆ: ರಾಮ್‌ದೇವ್‌ ವಿಶ್ವಾಸ

KannadaprabhaNewsNetwork |  
Published : Oct 25, 2024, 12:51 AM IST

ಸಾರಾಂಶ

ಮುಂದಿನ ಶತಮಾನ ಭಾರತದ್ದು, ಭಾರತದ ಸನಾತನ ಧರ್ಮದ್ದು ಮತ್ತು ಸಂಸ್ಕೃತದ್ದಾಗಿರಲಿದೆ ಎಂದು ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮುಂದಿನ ಶತಮಾನ ಭಾರತದ್ದು, ಭಾರತದ ಸನಾತನ ಧರ್ಮದ್ದು ಮತ್ತು ಸಂಸ್ಕೃತದ್ದಾಗಿರಲಿದೆ ಎಂದು ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್, ನವದೆಹಲಿಯ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ 3 ದಿನಗಳ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃತದಲ್ಲಿ ಅಧ್ಯಯನ ಮಾಡಿದವರಿಗೆ ಎಲ್ಲ ಆಧುನಿಕ ಜ್ಞಾನ ಲಭ್ಯವಾಗುತ್ತವೆ. ಸಂಸ್ಕೃತದಲ್ಲಿ ಅಧ್ಯಯನ ಮಾಡಿದವರು ವಿಶ್ವಮಾನ್ಯರಾಗುವುದಕ್ಕೆ ಸಾಧ್ಯವಿದೆ ಎಂದ ಅವರು, ಹರಿದ್ವಾರದ ಪತಂಜಲಿ ವಿ.ವಿ.ಯಲ್ಲಿ ಸಂಸ್ಕೃತ ಅಧ್ಯಯನ ಮಾಡಬಯಸುವ ಉಡುಪಿಯ ವಿದ್ಯಾರ್ಥಿಗಳ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ರಾಮ್‌ದೇವ್‌ ಘೋಷಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅತಿಥೇಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪ್ರಾಚೀನ ವಿದ್ಯೆ ಮತ್ತು ವಿದ್ಯಾದೃಷ್ಟಿಕೋನಗಳು ಕಾಲ ಪರೀಕ್ಷೆಗೊಳಗಾಗಿ ಅತ್ಯಂತ ಶ್ರೇಷ್ಠ ಎಂದು ಸಾಬೀತಾಗಿವೆ. ಮತ್ತೆ ಈ ವಿದ್ಯೆ ಅನುಷ್ಠಾನಕ್ಕೆ ಬರಬೇಕಾದುದು ಅತ್ಯಗತ್ಯವಾಗಿದೆ ಎಂದಭಿಪ್ರಾಯಪಟ್ಟರು.

ಪ್ರಾಚ್ಯ ವಿದ್ಯೆ ಎಂಬುದು ಕೇವಲ ಭಾರತದಲ್ಲಿ ಮಾತ್ರ ಇದೆ, ಬೇರೆ ಯಾವ ದೇಶಗಳಲ್ಲಿ ಪ್ರಾಚ್ಯ ವಿದ್ಯೆ ಎಂಬುದಿಲ್ಲ. ಇಂತಹ ಪ್ರಾಚ್ಯ ವಿದ್ಯೆಗಳ ರಕ್ಷಣೆಯಾಗಬೇಕಾಗಿದೆ. ಪ್ರಾಚ್ಯ ವಿದ್ಯೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ರಕ್ಷಣೆಯಾಬೇಕಾದರೆ ಮೊದಲು ಸಂಸ್ಕೃತವನ್ನು ರಕ್ಷಣೆ ಮಾಡಬೇಕು ಎಂದವರು ಕರೆ ನೀಡಿದರು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಮತ್ತು ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂನಾ ವಿಶ್ವ ವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕಿ ಪ್ರೊ. ಸರೋಜಾ ಭಾಟೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾರತ ಭಾಷಾ ಸಮಿತಿಯ ಅಧ್ಯಕ್ಷ ಪದ್ಮಶ್ರೀ ಚಮು ಕೃಷ್ಣ ಶಾಸ್ತ್ರೀ, ದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ.ಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಆಗಮಿಸಿದ್ದರು.

ಆರ್ಯರು ಕೂಡ ಭಾರತದ ಮೂಲ ನಿವಾಸಿಗಳು: ಆಚಾರ್ಯ ಬಾಲಕೃಷ್ಣ ಉಡುಪಿ: ಭಾರತದ ಆರ್ಯರು ಮತ್ತು ದ್ರಾವಿಡರು ಎಂಬ ವಿಭಜನೆ ಆಂಗ್ಲರು ಮಾಡಿದ ಷಡ್ಯಂತ್ರ. ಆರ್ಯರು ಭಾರತಕ್ಕೆ ವಲಸೆ ಬಂದವರು ಎಂಬುವುದು ಸುಳ್ಳು ಕತೆ, ಆರ್ಯರು ಮತ್ತು ದ್ರಾವಿಡರಿಬ್ಬರೂ ಭಾರತದ ಮೂಲನಿವಾಸಿಗಳು ಎಂಬುದೀಗ ಸಾಬೀತಾಗಿದೆ ಎಂದು ಹರಿದ್ವಾರದ ಪತಂಜಲಿ ವಿ.ವಿ.ಯ ಉಪಕುಲಪತಿ ಆಚಾರ್ಯ ಬಾಲಕೃಷ್ಣ ಹೇಳಿದರು.

ಗುರುವಾರ ರಾಜಾಂಗಣದಲ್ಲಿ ನಡೆದ ಅಖಿಲ ಬಾರತೀಯ ಪ್ರಾಚ್ಯವಿದ್ಯಾ ಸಮ್ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶಿಖರೋಪನ್ಯಾಸ ನೀಡಿದರು.

ಹೊರಗಿನಿಂದ ಭಾರತಕ್ಕೆ ವಲಸೆ ಬಂದವರಿಗಿಂತಲೂ ಹೆಚ್ಚು ಭಾರತೀಯರೇ ಹೊರಗೆ ಹೋಗಿರುವುದಕ್ಕೂ ಪುರಾವೆಗಳಿವೆ. ರಾಜ ಯಾಯತಿಯ ಮಗ ಪುರು ಈಜಿಪ್ಟ್‌ ದೇಶಕ್ಕೂ ಹೋಗಿದ್ದ, ಆತನ ಸ್ಮರಣಾರ್ಥವೇ ಅಲ್ಲಿನ ರಾಜವಂಶ ಫೇರೋ ಎಂದು ಕರೆಯಲ್ಪಟ್ಟಿತು ಎಂಬುದುಕ್ಕೂ ನಿದರ್ಶನಗಳು ಸಿಕ್ಕಿವೆ. ಬೇರೆ ದೇಶಗಳ ನಾಗರಿಕತೆಯಲ್ಲಿ ಇನ್ನೂ ಚಿತ್ರ ಲಿಪಿಯನ್ನು ಕಂಡು ಹಿಡಿಯುವಾಗ, ಭಾರತದಲ್ಲಿ ಅದಾಗಲೇ ವರ್ಣಲಿಪಿ ಬಳಕೆಯಲ್ಲಿತ್ತು ಎಂದವರು ಹೇಳಿದರು.

ಆಂಗ್ಲರು ಸಂಸ್ಕೃತ ಭಾಷೆಯ ವಿರುದ್ಧವೂ ಷಡ್ಯಂತ್ರ ಹೂಡಿದ್ದರು. ನಮ್ಮ ದೇಶದ ಸಂಸ್ಕೃತಿಯ ಬೇರು ಇರುವುದೇ ಸಂಸ್ಕೃತ ಭಾಷೆಯಲ್ಲಿ. ಸಂಸ್ಕೃತಿ ಉಳಿಯಬೇಕಾದರೆ ಸಂಸ್ಕೃತ ಉಳಿಸಬೇಕು. ಅದಕ್ಕಾಗಿ ಮೊದಲು ನಮ್ಮ ದೇಶದ ಇತಿಹಾಸದ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದವರು ಒತ್ತಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ