ಕನ್ನಡಪ್ರಭ ವಾರ್ತೆ ಕೋಲಾರನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಪ್ರಸಾದ್ ಬಾಬು ಪರೋಕ್ಷವಾಗಿ ಶಾಸಕರ ಮೇಲೆ ಹಾಗೂ ಪ್ರತ್ಯಕ್ಷವಾಗಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ವಿರುದ್ಧ ಮಾತನಾಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ವೈ.ಶಿವಕುಮಾರ್ ಹಾಗೂ ನಗರಸಭೆ ಸದಸ್ಯ ಕೆ.ಜೆ.ಅಮರನಾಥ್ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರಸಾದ್ ಬಾಬು ಕಾಂಗ್ರೆಸ್ ಸೇರುವ ಮೊದಲು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ರ ಆತ್ಮೀಯ ಸ್ನೇಹಿತರಾದ ಗೌರಿಪೇಟೆ ಶಿವು ಅವರ ಮೂಲಕ 200405ರಲ್ಲಿ ಕೆ.ಆರ್.ಪುರದಿಂದ ಚಿತ್ತೂರುವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹೆಸರಿನಲ್ಲಿ ರಸ್ತೆ ಬದಿಯ ಮರಗಳ ಟೆಂಡರ್ ಹರಾಜು ವಿಚಾರದಲ್ಲಿ ಸಹಾಯ ಕೋರಿದ್ದರು. ಆ ವೇಳೆ ಅನಿಲ್ ಕುಮಾರ್ ನೆರವು ನೀಡಿದ್ದರು ಎಂಬುದನ್ನು ಪ್ರಸಾದ್ ಬಾಬು ಮರೆತಿದ್ದಾರೆ ಎಂದು ಆರೋಪಿಸಿದರು.ಅನಿಲ್ ಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ, ಗೌರಿಪೇಟೆ ಶಿವು ಮೂಲಕ ನಡೆದ ಪ್ರಕ್ರಿಯೆಯಲ್ಲಿ ಪ್ರಸಾದ್ ಬಾಬು ಅವರನ್ನೇ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲಾಗಿದೆ. ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನಿಲ್ ಕುಮಾರ್ ಬಿ-ಫಾರಂ ನೀಡಿದ್ದರು. ಪ್ರಸಾದ್ ಬಾಬು ಅವರ ಪತ್ನಿಯನ್ನು ನಗರಸಭೆ ಅಧ್ಯಕ್ಷೆಯನ್ನಾಗಿ ಮಾಡಲು ಅಲ್ಪಸಂಖ್ಯಾತ ಸದಸ್ಯರ ಬೆಂಬಲ ಕೋರಿದ ವೇಳೆಯೂ ಅನಿಲ್ ಕುಮಾರ್ ಸಹಾಯ ಪಡೆದಿರುವುದನ್ನು ಮರೆತಿದ್ದಾರೆ ಎಂದು ಟೀಕಿಸಿದರು.ಪ್ರಸಾದ್ ಬಾಬು ಅನಿಲ್ ಕುಮಾರ್ ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ವೈ.ಶಿವಕುಮಾರ್, 15 ವರ್ಷಗಳಿಗೂ ಹೆಚ್ಚು ಕಾಲ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪ್ರಸಾದ್ ಬಾಬು ಪಕ್ಷದ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವಲ್ಲಿ ವಿಫಲರಾಗಿದ್ದು, ಇತರ ಮುಖಂಡರಿಗೆ ಮಾನಸಿಕ ಒತ್ತಡ ತಂದ ಘಟನೆಗಳು ಎಲ್ಲರಿಗೂ ತಿಳಿದಿವೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಅವರು1990ರಿಂದ ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿ, ಕೈವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರಾಜ್ಯ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪಕ್ಷದ ಬಲವರ್ಧನೆಗೆ ಕೊಡುಗೆ ನೀಡಿದ್ದಾರೆ ಎಂದು ಅವರು ವಿವರಿಸಿದರು.ಪ್ರಸಾದ್ ಬಾಬು ಅವರು ಅನಿಲ್ ಕುಮಾರ್ ಅವರಿಂದ ಯಾವುದೇ ರೀತಿಯ ರಾಜಕೀಯ ಸಹಾಯ ಪಡೆಯಲಿಲ್ಲ ಎಂದು ಹೇಳುವುದಾದರೆ, ನಗರ ದೇವತೆ ಕೋಲಾರಮ್ಮ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ವೈ.ಶಿವಕುಮಾರ್ ಬಹಿರಂಗವಾಗಿ ಸವಾಲು ಹಾಕಿದರು.