ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪಕ್ಷ ನಿಷ್ಠೆ, ಹಿರಿತನ ಹಾಗೂ ಸಂಘಟನಾತ್ಮಕವಾಗಿ ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವ ದೃಷ್ಟಿಯಲ್ಲಿ ಜಿಲ್ಲೆಯ ಮೂವರು ಹಿರಿಯ ಶಾಸಕ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ ಅವರಿಗೆ ವಿವಿಧ ನಿಗಮಗಳ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಜೊತೆಗೆ ಸಂಪುಟ ಸಚಿವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಲು ಸೂಚಿಸಿದ್ದರಿಂದ ಜಿಲ್ಲೆಯಲ್ಲಿ ಶಿಷ್ಟಾಚಾರದ ನೆಪದಲ್ಲಿ ಕೆಂಪುಗೂಟದ ಕಾರುಗಳ ಸದ್ದು ಮತ್ತೆ ಕಾಣಬಹುದಾಗಿದೆ.
ಯಾರ್ಯಾರಿಗೆ ಯಾವ ನಿಗಮ?: ಬಾಗಲಕೋಟೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಾಗಲಕೋಟೆ ಶಾಸಕ, ಮಾಜಿ ಸಚಿವ ಎಚ್.ವೈ ಮೇಟಿ, ಬೀಳಗಿ ಶಾಸಕ ಜೆ.ಟಿ.ಪಾಟೀಲರಿಗೆ ಹಟ್ಟಿ ಚಿನ್ನದ ಗಣಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಮೂವರು ಶಾಸಕರು ಹಿಂದುಳಿದ ಹಾಗೂ ಮೇಲ್ವರ್ಗಕ್ಕೆ ಸೇರಿದ್ದು, ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.ಸಚಿವರಾಗುವ ಅವಕಾಶವಿಲ್ಲ: ಮುಂದೆ ನಡೆಯಬಹುದಾದ ಅಥವಾ ಸರ್ಕಾರ ಎರಡೂ ವರ್ಷ ಪೂರೈಸಿದ ಬಳಿಕ ಸಂಪುಟ ಪುನಾರಚನೆ ನಡೆದರೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ ಸಮಾಧಾನ ಮಾಡುವ ಪ್ರಯತ್ನವನ್ನು ಮುಖ್ಯ ಮಂತ್ರಿಗಳಾದಿಯಾಗಿ ಮಾಡಿದ್ದಾರೆಂಬ ಮಾತು ಸಹ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ. ಮೊದಲ ಹಂತದಲ್ಲಿ ನಡೆದ ಈ ನೇಮಕ ಪಟ್ಟಿಯಲ್ಲಿ ಎಲ್ಲ 34 ಅಧ್ಯಕ್ಷರು ಸಹ ಶಾಸಕರಾಗಿರುವುದು ವಿಶೇಷವಾಗಿದೆ.
ಚುನಾವಣೆ ಸಂದರ್ಭದಲ್ಲಿ ಕೆಲವು ನಾಯಕರಿಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡುವ ಭರವಸೆ ಮತ್ತು ಇನ್ನು ಕೆಲವು ಸಂದರ್ಭದಲ್ಲಿ ಕಾರ್ಯಕರ್ತರಿಗೆ ಈ ಅವಕಾಶ ನೀಡುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಏಕಾಏಕಿ ಸ್ಥಳೀಯ ಶಾಸಕರೆ ಪ್ರಾಧಿಕಾರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ಕಾರ್ಯಕರ್ತರಿಗೆ ಅವಕಾಶ ಏಕಿಲ್ಲ ಎಂಬ ಪ್ರಶ್ನೆಗಳನ್ನು ಕೆಲವರು ಕೇಳುತ್ತಿದ್ದಾರೆ.