ಬಜತ್ತೂರು ಸರ್ಕಾರಿ ಶಾಲೆ ಎಲ್‌ಕೆಜಿ ತರಗತಿ ಪ್ರಾರಂಭ: ಬಸ್‌ ಸೌಲಭ್ಯ ಕೊಡುಗೆ

KannadaprabhaNewsNetwork |  
Published : Jun 05, 2025, 03:01 AM IST
ಎಲ್ ಕೆ ಜಿ  ತರಗತಿಯ ಪ್ರಾರಂಭ ಹಾಗೂ ಮಕ್ಕಳ ಸಂಚಾರಕ್ಕೆ  ಬಸ್ ಸೌಲಭ್ಯವನ್ನು ಒದಗಿಸುವ  | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿರುವ ಶಾಲಾ ಹಳೇ ವಿದ್ಯಾರ್ಥಿಗಳು ಮತ್ತು ಊರ ವಿದ್ಯಾಭಿಮಾನಿಗಳು ಒಗ್ಗೂಡಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಎಲ್ ಕೆ ಜಿ ತರಗತಿಯ ಪ್ರಾರಂಭ ಹಾಗೂ ಮಕ್ಕಳ ಸಂಚಾರಕ್ಕೆ ಬಸ್ ಸೌಲಭ್ಯ ಒದಗಿಸುವ ಮೂಲ ಬಜತ್ತೂರು ಸರ್ಕಾರಿ ಹಿ.ಪ್ರಾ.ಶಾಲೆ ಗಮನ ಸೆಳೆದಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ವಿದ್ಯಾರ್ಥಿಗಳ ಸಂಖ್ಯೆ ಕುಸಿತಕ್ಕೆ ತುತ್ತಾಗಿರುವ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿರುವ ಶಾಲಾ ಹಳೇ ವಿದ್ಯಾರ್ಥಿಗಳು ಮತ್ತು ಊರ ವಿದ್ಯಾಭಿಮಾನಿಗಳು ಒಗ್ಗೂಡಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಎಲ್ ಕೆ ಜಿ ತರಗತಿಯ ಪ್ರಾರಂಭ ಹಾಗೂ ಮಕ್ಕಳ ಸಂಚಾರಕ್ಕೆ ಬಸ್ ಸೌಲಭ್ಯ ಒದಗಿಸುವ ಮೂಲ ಬಜತ್ತೂರು ಸರ್ಕಾರಿ ಹಿ.ಪ್ರಾ.ಶಾಲೆ ಗಮನ ಸೆಳೆದಿದೆ.ಎಲ್‌ಕೆಜಿ ತರಗತಿಯ ಕೊಠಡಿ ಹಾಗು ಶಾಲಾ ಬಸ್ ಸೌಲಭ್ಯವನ್ನು ಸೋಮವಾರ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯದ ಎಲ್ಲೆಡೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲು ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ತೆರೆಯುತ್ತಿದ್ದು, ಈಗಾಗಲೇ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕು ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆಗೊಳ್ಳಲಿದೆ. ಕನಿಷ್ಠ ೨ ಗ್ರಾಮಗಳಲ್ಲಿ ಒಂದು ಕೆಪಿಎಸ್ ಶಾಲೆಗಳನ್ನು ತೆರೆಯುವ ಯೋಜನೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ವಿಲ್ಫ್ರೆಡ್ ಡಿಸೋಜಾ ಪ್ರಾಸ್ತಾವಿಕ ಮಾತುಗಳನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಗೌಡ ಪಿ.ಎನ್‌. ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಮಲಾ ಬೆದ್ರೋಡಿ, ಉಮೇಶ್ ಓಡ್ರಪಾಲ್, ಪ್ರಸಿಲ್ಲಾ ಬೆಡ್ರೋಡಿ, ರತ್ನಾ, ರಾಮಚಂದ್ರ ಆಲಾಜೆ, ಕ್ಷೇತ್ರಾ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಚಕ್ರಪಾಣಿ ಎ ವಿ, ಯಶೋಧ ವಿ, ಸಿದ್ದಪ್ಪ ನಾಯ್ಕ, ಧನಂಜಯ ಬಾರಿಕೆ, ರಾಜಾರಾಮ ಕೆ ಬಿ, ನವೀನ್, ಯು ಟಿ ತೌಷಿಫ್, ಉದಯ ರಾವ್ ಮಣಿಕ್ಕಳ, ಗೋಪಾಲ ವಳಾಲ್, ಮಂಜುನಾಥ ಕೆ ವಿ ಮೊದಲಾದವರು ಇದ್ದರು.

ಕನಸು ನನಸಾಗಿದ್ದು ಹೇಗೆ?:

ಬಜತ್ತೂರು ಗ್ರಾಮದ ವಳಾಲು ಸರ್ಕಾರಿ ಶಾಲೆ ೬ ಎಕ್ರೆ ಭೂಮಿಯನ್ನು ಹೊಂದಿದ್ದರೂ, ಬದಲಾದ ಕಾಲಘಟ್ಟದಲ್ಲಿ ಮಕ್ಕಳು ಖಾಸಗಿ ಶಾಲೆಯತ್ತ ಆಕರ್ಷಿತರಾದಾಗ ಮಕ್ಕಳನ್ನು ಮತ್ತೆ ಸರ್ಕಾರಿ ಶಾಲೆಗೆ ಸೆಳೆಯಲು ಒಗ್ಗೂಡಿದ ತಂಡ ಶಿಕ್ಷಣ ಸಮನ್ವಯ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟು ಹಾಕಲಾಯಿತು. ಅದರ ಮೂಲಕ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಆರ್ಥಿಕ ಸಹಕಾರ ಕೋರಲಾಯಿತು. ಸುಮಾರು ೧೫ ಲಕ್ಷ ರು. ಸಂಗ್ರಹಣೆಯ ಗುರಿಯೊಂದಿಗೆ ಸಾಗಿದ ಈ ಟ್ರಸ್ಟ್ ಯಶಸ್ವಿಯಾಗಿ ಬಸ್ಸೊಂದನ್ನು ಖರೀದಿಸಿದೆ. ತನ್ಮೂಲಕ ದೂರದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಮತ್ತು ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ತನ್ಮೂಲಕ ಸರಕಾರಿ ಶಾಲೆಯಲ್ಲೇ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿ ವರೆಗಿನ ಶಿಕ್ಷಣವನ್ನು ಆಂಗ್ಲಮಾಧ್ಯಮದಲ್ಲೇ ಉಚಿತವಾಗಿ ಪಡೆಯುವಂತಾಗಲು ಈ ಟ್ರಸ್ಟ್ ಕಾರ್ಯೋನ್ಮುಖಗೊಂಡಿದೆ.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್