ಹಳಿಯಾಳ ತಾಲೂಕಿನಲ್ಲಿ ಶ್ರದ್ಧಾ- ಭಕ್ತಿಯಿಂದ ಬಕ್ರೀದ್‌ ಆಚರಣೆ

KannadaprabhaNewsNetwork |  
Published : Jun 18, 2024, 12:59 AM IST
 ಹಳಿಯಾಳ ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ್ಯ ಸಾಮೂಹಿಕ ಪ್ರಾರ್ಥನೆ ನಡೆಯಿತು. | Kannada Prabha

ಸಾರಾಂಶ

ಪಟ್ಟಣದ ಮರಡಿಗುಡ್ಡದಲ್ಲಿನ ಈದ್ಗಾ ಮೈದಾನದಲ್ಲಿ ನಡೆದ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಸರ್ವ ಮುಸ್ಲಿಮರು ಸೇರಿ ಬಕ್ರೀದ್ ಹಬ್ಬದ ಪ್ರಾರ್ಥನೆಯನ್ನು ಶ್ರದ್ಧಾ ಭಕ್ತಿಯಿಂದ ಸಲ್ಲಿಸಿದರು.

ಹಳಿಯಾಳ: ತ್ಯಾಗ, ಬಲಿದಾನ ಪ್ರತೀಕವಾಗಿ ಆಚರಿಸಲ್ಪಡುವ ಪವಿತ್ರ ಬಕ್ರೀದ್ ಹಬ್ಬವನ್ನು ಸೋಮವಾರ ತಾಲೂಕಿನಾದ್ಯಂತ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಮರಡಿಗುಡ್ಡದಲ್ಲಿನ ಈದ್ಗಾ ಮೈದಾನದಲ್ಲಿ ನಡೆದ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಸರ್ವ ಮುಸ್ಲಿಮರು ಸೇರಿ ಬಕ್ರೀದ್ ಹಬ್ಬದ ಪ್ರಾರ್ಥನೆಯನ್ನು ಶ್ರದ್ಧಾ ಭಕ್ತಿಯಿಂದ ಸಲ್ಲಿಸಿದರು.

ಬಕ್ರೀದ್ ಹಬ್ಬದ ಸಂದೇಶವನ್ನು ನೀಡಿದ ಮುಪ್ತಿ ಫಯಾಜ ಅಹ್ಮದ ಖಾಸ್ಮಿ ಇಟ್ಟಂಗಿವಾಲೆ ಅವರು, ದೇವರಿಗೆ ನಿಷ್ಠೆ, ಶ್ರದ್ಧೆ, ವಿಧೇಯತೆ ತೋರುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ. ದೇವರನ್ನು ನಂಬಿದವರ ಬಾಳು ಶಾಶ್ವತವಾಗಿರುತ್ತದೆ ಎಂಬ ಪರಮಾರ್ಥಿಕ ಸತ್ಯವನ್ನು ಸಾರುವ ಹಬ್ಬವೇ ಬಕ್ರೀದ್. ಈ ಹಬ್ಬವು ನಮ್ಮೆಲ್ಲರ ಬಾಳಿನಲ್ಲಿ ಹಾಗೂ ನಾಡಿನಲ್ಲಿ ಸುಖ, ಸಮೃದ್ಧಿ, ಶಾಂತಿಯನ್ನು ತರಲಿ ಎಂದು ಹಾರೈಸಿದರು.

ಜಾಮೀಯಾ ಮಸೀದಿಯ ಮೌಲಾನಾ ಮುಪ್ತಿ ಮುಷ್ತಾಕ ಅಹ್ಮದ ನಾಯಕ ಅವರು ಹಬ್ಬದ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಪ್ರಾರ್ಥನಾ ವಿಧಿಯಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಲಿಂ ಬಸರಿಕಟ್ಟಿ, ಜಿಲ್ಲಾ ವಕ್ಫ್‌ ಸಮಿತಿ ಮಾಜಿ ಅಧ್ಯಕ್ಷ ಮಹಮದ್ಖಯ್ಯಾಂ ಮುಗದ, ಸಮಾಜದ ಹಿರಿಯರಾದ ಉದ್ಯಮಿ ಆರ್.ಎಂ. ಬಸರಿಕಟ್ಟಿ, ನಿಕಟಪೂರ್ವ ಪುರಸಭಾ ಅಧ್ಯಕ್ಷ ಅಜರ್ ಬಸರಿಕಟ್ಟಿ, ಪುರಸಭಾ ಸದಸ್ಯ ಫಯಾಜ್ ಶೇಖ್, ಪ್ರಮುಖರಾದ ಇಮ್ತಿಯಾಜ್ ಶೇಖ್, ಎಂ.ಎ. ಕಾಗದ, ಪುರಸಭಾ ಮಾಜಿ ಅಧ್ಯಕ್ಷ ಖಾಕೇಶಾ ಮಕಾನದಾರ, ಇಮ್ತಿಯಾಜ್ ಮನಿಯಾರ, ಸುಭಾನಿ ಗೋರಿಖಾನ್ ಹಾಗೂ ಮೊದಲಾದವರು ಇದ್ದರು.

ಗ್ರಾಮೀಣ ಭಾಗದಲ್ಲಿಯೂ ಬಕ್ರೀದ್: ಜೋಗನಕೊಪ್ಪ, ತಟ್ಟಿಗೇರಾ, ಅಡಕೆಹೊಸುರ, ಕಾವಲವಾಡ, ತೇರಗಾಂವ, ಭಾಗವತಿ, ಗೋಲೆಹಳ್ಳಿ, ಮುರ್ಕವಾಡ, ಅಮ್ಮನಕೊಪ್ಪ, ತತ್ವಣಗಿ, ಜಾವಳ್ಳಿ, ತಿಮ್ಮಾಪುರ ಮೊದಲಾದೆಡೆ ಬಕ್ರೀದ್ ಆಚರಣೆ ನಡೆಯಿತು.ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

ಮುಂಡಗೋಡ: ತ್ಯಾಗ ಮತ್ತು ಬಲಿದಾನ ಸಂದೇಶ ಸಾರು ಬಕ್ರೀದ್(ಈದ್-ಉಲ್-ಅದ್ಹಾ) ಹಬ್ಬವನ್ನು ಮುಸ್ಲಿಮರು ತಾಲೂಕಿನಾದ್ಯಂತ ಸೋಮವಾರ ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಯಲ್ಲಾಪುರ ರಸ್ತೆ ಬನ್ನಿಕಟ್ಟೆ ಬಳಿಯ ನೂರಾನಿ ಮಸೀದಿ ಹತ್ತಿರ ಪಟ್ಟಣದ 5 ಮಸೀದಿಗಳ ಮುಸ್ಲಿಮರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಶುಭ್ರವಾದ ಹೊಸ ಬಟ್ಟೆಗಳನ್ನು ಧರಿಸಿ ಜಮಾವಣೆಗೊಂಡು ನಂತರ ಸಾಮೂಹಿಕವಾಗಿ ಅಲ್ಲಾಹನ ನಾಮಸ್ಮರಣೆ ಮಾಡುತ್ತ ಪಟ್ಟಣದ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಈದ್- ಉಲ್- ಅದ್ಹಾ(ಬಕ್ರೀದ್‌) ಹಬ್ಬದ ವಿಶೇಷ ಸಾಮೂಹಿಕವಾಗಿ ನಮಾಜ್ ಸಲ್ಲಿಸಿದರು.ಹಾಫ್ಹೀಜ ಜೈನುಲಾಬಿದ್ದಿನ ಅವರ ನೇತೃತ್ವದಲ್ಲಿ ಮುಸ್ಲಿಮರು ಈದ್- ಉಲ್- ಅದ್ಹಾ(ಬಕ್ರೀದ್) ಹಬ್ಬದ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ಪ್ರಾರ್ಥನೆ ನಂತರ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡು ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಂಡರು. ಪಿಎಸ್‌ಐ ಪರಶುರಾಮ ಮಿರ್ಜಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದರು. ನಮಾಜ ಮುಗಿದ ನಂತರ ಮುಸ್ಲಿಮರು ಖಬರಸ್ಥಾನಕ್ಕೆ ತೆರಳಿ ಸ್ವರ್ಗಸ್ಥರಾದ ತಮ್ಮ ಬಂದುಬಳಗದ ಘೋರಿಗಳಿಗೆ ಹೂಮಾಲೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ತಾಲೂಕಿನ ಪಾಳಾ, ಮಳಗಿ, ಕಾತೂರ, ಇಂದೂರ ಗ್ರಾಮ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೂಡ ವಿಜೃಂಭಣೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?