ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಕುರ್ಬಾನಿ ನೀಡಬೇಕು. ಇದನ್ನು ಸಮನಾಗಿ ಮೂರು ಪಾಲು ಮಾಡಬೇಕು
ಧಾರವಾಡ: ತ್ಯಾಗ,ಬಲಿದಾನದ ಪ್ರತೀಕವಾಗಿರುವ ಬಕ್ರೀದ ಹಬ್ಬವನ್ನು ಶನಿವಾರ ಧಾರವಾಡ ನಗರ ಹಾಗೂ ಗ್ರಾಮೀಣದಲ್ಲಿ ಮುಸ್ಲಿಂ ಬಂಧುಗಳು ಸಂಭ್ರಮದಿಂದ ಆಚರಿಸಿದರು.
ಇಲ್ಲಿಯ ಈದ್ಗಾ ಮೈದಾನದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಸಹೋದರರು ನಂತರ ಪರಸ್ಪರ ಶುಭಾಶಯ ಹಂಚಿಕೊಂಡರು. ಮಾನವೀಯ ಮೌಲ್ಯ ಎತ್ತಿಹಿಡಿಯುವುದು, ಸಹೋದರತ್ವ ಬೆಳೆಸಿಕೊಳ್ಳುವ ಹಾಗೂ ತ್ಯಾಗ ಬಲಿದಾನದ ಪ್ರತೀಕ ಸಾರುವ ಹಬ್ಬ ಇದಾಗಿದೆ. ಹಜರತ್ ಇಬ್ರಾಹಿಂ ಅವರ ದೈವಭಕ್ತಿ ತ್ಯಾಗ ನೆನಪಿಸಲು ಹಬ್ಬದ ದಿನ ಕುರ್ಬಾನಿ (ಕೊಡುಗೆ) ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಕುರ್ಬಾನಿ ನೀಡಬೇಕು. ಇದನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಭಾಗವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚುವ ಮೂಲಕ ಹಬ್ಬದಲ್ಲಿ ನಾವೆಲ್ಲರೂ ಪಾಲ್ಗೊಳ್ಳುತ್ತೇವೆ ಎಂದು ಧರ್ಮದ ಮುಖಂಡರು ಹಬ್ಬದ ಬಗ್ಗೆ ಮಾಹಿತಿ ನೀಡಿದರು.
ಅಂಜುಮನ್ ಇಸ್ಲಾ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಇದಲ್ಲದೇ, ನರೇಂದ್ರ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಜಮಾತ್ ಅಧ್ಯಕ್ಷ ಇಮಾಮಸಾಬ್ ಸಾಲಿ, ಕಾರ್ಯದರ್ಶಿ ನೂರಆಹ್ಮದ್ ನದಾಫ, ಖಾದರಸಾಬ್ ಬುಕ್ಕಿಟಗಾರ, ರುಸ್ತುಂಸಾಬ್ ನದಾಫ, ಹುಸೇನಸಾಬ್ ವಾಲೀಕಾರ, ಮಹ್ಮದಶಫೀ ಝಾರಿ ಇದ್ದರು. ಇದೇ ರೀತಿ ಅಳ್ನಾವರ ಹಾಗೂ ಹುಲಿಕೇರಿಗಳಲ್ಲೂ ಬಕ್ರೀದ್ ಹಬ್ಬ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.