5ನೇ ಬಾರಿ ಗೆದ್ದ ಬಾಲಕೃಷ್ಣರಿಗೆ ಸಿಗಲಿದಿಯೇ ಸಚಿವಗಿರಿ!

KannadaprabhaNewsNetwork |  
Published : May 30, 2026, 01:15 AM IST
6.ಎಚ್.ಸಿ.ಬಾಲಕೃಷ್ಣ | Kannada Prabha

ಸಾರಾಂಶ

ರಾಮನಗರ: ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದ್ದು, ಅವರೊಂದಿಗೆ ಸಚಿವರಾಗಿ ಜಿಲ್ಲೆಯ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾದ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೂ ಸಚಿವ ಸ್ಥಾನ ಸಿಗಲಿದಿಯೇ ಎಂಬ ಕುತೂಹಲ ಮೂಡಿದೆ

ರಾಮನಗರ: ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದ್ದು, ಅವರೊಂದಿಗೆ ಸಚಿವರಾಗಿ ಜಿಲ್ಲೆಯ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾದ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೂ ಸಚಿವ ಸ್ಥಾನ ಸಿಗಲಿದಿಯೇ ಎಂಬ ಕುತೂಹಲ ಮೂಡಿದೆ.

ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಾಗಿದ್ದು, ಅವರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಹೊರತು ಪಡಿಸಿದರೆ ಎಚ್.ಸಿ.ಬಾಲಕೃಷ್ಣ ಮತ್ತು ಸಿ.ಪಿ.ಯೋಗೇಶ್ವರ್ ಅವರು ಹಿರಿಯ ರಾಜಕಾರಣಿ. ಆದರೆ, ಕಾಂಗ್ರೆಸ್ ಪಕ್ಷದಿಂದ ಬಾಲಕೃಷ್ಣ ಮೊದಲ ಬಾರಿ ಶಾಸಕರಾದವರು. ಆ ಹಿರಿತನವನ್ನು ಮುಂದಿಟ್ಟುಕೊಂಡು ಬಾಲಕೃಷ್ಣ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ.

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾದಾಗ ಬಾಲಕೃಷ್ಣ ಸಚಿವ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸಿದ್ದರು. ಅವರಿಗೆ ಸಚಿವ ಸ್ಥಾನದ ಬದಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿತ್ತು. ಇಷ್ಟೇ ಅಲ್ಲದೆ, ಕಳೆದ ಮಾರ್ಚ್ ತಿಂಗಳಲ್ಲಿ ಬಾಲಕೃಷ್ಣರವರು ಹಿರಿಯ ಶಾಸಕರೊಂದಿಗೆ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠರಿಗೂ ಪತ್ರ ಬರೆದು ಸಂಪುಟ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದು ಈಡೇರಿರಲಿಲ್ಲ. ಆದರೀಗ ಸಚಿವ ಸ್ಥಾನಕ್ಕಾಗಿ ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಕಮಲ 1, ದಳ 3 ಬಾರಿ ಶಾಸಕರಾದರು:

ನಾಡಪ್ರಭು ಕೆಂಪೇಗೌಡರ ನೆಲವಾದ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಬಾಲಕೃಷ್ಣರವರು 5ನೇ ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಚುನಾಯಿತರಾಗಿದ್ದಾರೆ. ಬಿಜೆಪಿ ಪಕ್ಷದಿಂದ ಒಂದು ಬಾರಿ ಹಾಗೂ ಜೆಡಿಎಸ್ ಪಕ್ಷದಿಂದ 3 ಬಾರಿ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದವರು.

ಕಾಂಗ್ರೆಸ್ ಮತ್ತು ಜನತಾ ಪರಿವಾರದ ಭದ್ರಕೋಟೆಯಾಗಿದ್ದ ಮಾಗಡಿಯಲ್ಲಿ 1994ರ ಚುನಾವಣೆಲ್ಲಿಯೇ ಬಾಲಕೃಷ್ಣ ಬಿಜೆಪಿಯಿಂದ ಗೆಲುವು ಸಾಧಿಸಿ ಕಮಲ ಅರಳಿಸಿದ್ದರು. 1999ರಲ್ಲಿ ಬಿಜೆಪಿಯಿಂದ ಸೋತ ಬಳಿಕ ಜೆಡಿಎಸ್ ಸೇರಿದ ಅವರು 2004, 2008, 2013ರಲ್ಲಿ ಕ್ರಮವಾಗಿ ವಿಜಯ ಪತಾಕೆ ಹಾರಿಸಿದರು.

ಬಾಲಣ್ಣ ಕಾಂಗ್ರೆಸ್ ಸೇರ್ಪಡೆ :

ಜೆಡಿಎಸ್ ವರಿಷ್ಠರ ನಡವಳಿಕೆಯಿಂದ ಬಾಲಕೃಷ್ಣ ಮತ್ತು ಸ್ನೇಹಿತರು ಬೇಸರಗೊಂಡಿದ್ದರು. ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಜಮೀರ್ ಅಹಮದ್ ಖಾನ್ , ಚಲುವರಾಯಸ್ವಾಮಿ, ಬಾಲಕೃಷ್ಣ ಸೇರಿದಂತೆ 8 ಶಾಸಕರು ಬಂಡಾಯದ ಕಹಳೆ ಮೊಳಗಿಸಿದರು.

2018ರ ವಿಧಾನಸಭಾ ಚುನಾವಣೆ ವೇಳೆಗೆ ಬಾಲಕೃಷ್ಣರವರು ಸ್ನೇಹಿತರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೆಡಿಎಸ್ ನ ಎ.ಮಂಜುನಾಥ್ ವಿರುದ್ಧ 51,425 ಮತಗಳ ಅಂತರದಿಂದ ಪರಾಭವಗೊಂಡರು.

ಚುನಾವಣೆಯಲ್ಲಿನ ಸೋಲಿನಿಂದ ಎದೆಗುಂದಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಜನಪ್ರತಿನಿಗಳು ನಾಚುವಂತೆ ಬಾಲಕೃಷ್ಣರವರು ಕ್ಷೇತ್ರದಾದ್ಯಂತ ಸಂಚರಿಸಿ ಜನರ ಕಷ್ಟ ಆಲಿಸಿ ಕೈಲಾದ ಸಹಾಯ ಮಾಡಿ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸಮಯ ಮೀಸಲಿಟ್ಟರು. ಜನರ ಕಷ್ಟಸುಖಗಳಲ್ಲಿ ಭಾಗಿಯಾದರು.

ಮಾಗಡಿ ಕ್ಷೇತ್ರ ವ್ಯಾಪ್ತಿಯ 36 ಗ್ರಾಮ ಪಂಚಾಯಿತಿಗಳ ಪೈಕಿ 22 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರೇ ಅಧಿಕಾರ ಹಿಡಿಯುವಲ್ಲಿ ಬಾಲಕೃಷ್ಣ ಹೆಚ್ಚಿನ ಶ್ರಮ ವಹಿಸಿದರು. ಅಲ್ಲದೆ, ಹಲವಾರು ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಬಲಿಷ್ಠವಾಗಿ ಸಂಘಟಿಸುವ ಕಾರ್ಯವನ್ನು ಮಾಡಿದರು.

ಇದರ ಪರಿಣಾಮ 2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ವಿರುದ್ಧ 11,839 ಮತಗಳ ಅಂತರದಿಂದ ಕಾಂಗ್ರೆಸ್ ನ ಬಾಲಕೃಷ್ಣ ಪರಾಭವಗೊಳಿಸಿದರು. ಆ ಮೂಲಕ ಕ್ಷೇತ್ರದಿಂದ ಅತಿ ಹೆಚ್ಚಿನ ಬಾರಿ ಗೆಲುವು ಸಾಧಿಸಿದ ಕೀರ್ತಿಗೂ ಪಾತ್ರರಾದರು. ಅವರು ಕಾಂಗ್ರೆಸ್ ಶಾಸಕರಾದ ಮೇಲೆ ನಡೆದ ಸ್ಥಳೀಯ ಸಂಸ್ಥೆ , ಬಮೂಲ್ , ಬಿಡಿಸಿಸಿ ಬ್ಯಾಂಕ್ , ಬಿಡದಿ ಸೊಸೈಟಿ ಸೇರಿದಂತೆ ಅನೇಕ ಚುನಾವಣೆಗಳಲ್ಲಿ ಕೈ ಅಧಿಕಾರ ಹಿಡಿಯುವಂತೆ ಮಾಡಿದ್ದಾರೆ.

ಕ್ಷೇತ್ರಕ್ಕೆ ಕುಟುಂಬದ ಕೊಡುಗೆ ? :

ಎಚ್ .ಸಿ.ಬಾಲಕೃಷ್ಣರವರು ಕುಟುಂಬ ಮಾಗಡಿ ಕ್ಷೇತ್ರದಲ್ಲಿ ಕಟ್ಟೆಮನೆ ಯಜಮಾನರು ಎಂದೇ ಪ್ರಸಿದ್ಧಿ ಪಡೆದಿದೆ. ತಂದೆ ಹುಲಿಕಟ್ಟೆ ಜಿ.ಚನ್ನಪ್ಪ ಅವರಂತೆಯೇ ಪುತ್ರ ಬಾಲಕೃಷ್ಣರವರು ಸಹ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದವರು.

ಹುಲಿಕಟ್ಟೆ ಜಿ.ಚನ್ನಪ್ಪ ಅವರು 1972, 1983, 1985ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಆನಂತರದ ಚುನಾವಣೆಗಳಲ್ಲಿ ಬಾಲಕೃಷ್ಣರವರು ಗೆಲುವು ಸಾಧಿಸಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಪ್ರಾಪ್ತಿಯಾಗಲಿದಿಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಬಾಕ್ಸ್ ...........

ಸಚಿವ ಸ್ಥಾನ ಕೊಡುವುದು ಕಷ್ಟಸಾಧ್ಯ

ಕನಕಪುರ ಕ್ಷೇತ್ರ ಶಾಸಕರಾಗಿ ಆಯ್ಕೆಯಾದ ಡಿ.ಕೆ.ಶಿವಕುಮಾರ್ ರವರು ಉಪಮುಖ್ಯಮಂತ್ರಿಯಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರು. ಈಗ ಮುಖ್ಯಮಂತ್ರಿ ಹುದ್ದೆ ಲಭಿಸಿರುವುದು ಜಿಲ್ಲೆಗೆ ಖುಷಿಯ ಸಂಗತಿ. ಸಿಎಂ ಸ್ಥಾನವೇ ಸಿಕ್ಕಿರುವಾಗ ಬೇರೊಬ್ಬ ಶಾಸಕರಿಗೆ ಸಚಿವ ಸ್ಥಾನ ಕೊಡುವುದು ಕಷ್ಟಸಾಧ್ಯ ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆದಿವೆ.

ಕೋಟ್ ..........

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಡಿ.ಕೆ.ಶಿವಕುಮಾರ್ ರವರ ನೇತೃತ್ವದ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡುವ ಅಭಿಲಾಷೆ ಹೊಂದಿದ್ದೇನೆ. ಹೈಕಮಾಂಡ್ ನಿರ್ಧಾರ ಏನೆಂದು ಕಾದು ನೋಡಬೇಕು. ನಾನು ಆಶಾವಾದಿಯಾಗಿದ್ದು, ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ.

-ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ

29ಕೆಆರ್ ಎಂಎನ್ 6,7.ಜೆಪಿಜಿ

6.ಎಚ್.ಸಿ.ಬಾಲಕೃಷ್ಣ

7.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಶಾಸಕ ಬಾಲಕೃಷ್ಣ

--------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣದಲ್ಲೇ ಉಳಿಯುವೆನೆಂಬ ಸಿದ್ದುಹೇಳಿಕೆ ಡಿಕೆಶಿಗೆ ಎಚ್ಚರಿಕೆ ಘಂಟೆ:ಸಂಸದ ಸುಧಾಕರ್‌
ಸಚಿವ ಸ್ಥಾನದ ರೇಸ್‌ನಲ್ಲಿ ತರೀಕೆರೆ ಶಾಸಕ ಶ್ರೀನಿವಾಸ್‌