ಮುಳಗುಂದ: ಪಟ್ಟಣದ ಶಿಶು ಮಹಾಂತ ಶಿವಯೋಗಿಗಳ ೧೬೫ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಶ್ರೀಮಠ ಹಾಗೂ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳ ಸಮ್ಮುಖದಲ್ಲಿ ಸಕಲವಾದ್ಯ ವೈಭವಗಳೊಂದಿಗೆ ಸಡಗರ ಸಂಭ್ರಮದಿಂದ ರಥೋತ್ಸವ ಜರುಗಿತು.ಡೊಳ್ಳುಕುಣಿತ, ಕಂಸಾಳಿ ಮೆರವಣಿಗೆ ಜೊತೆಗೆ ರಥ ಬೀದಿಯಲ್ಲಿ ಸಾಗಿ ವಾಲಿ ಕ್ರಾಸ್ ತಲುಪಿ ರಥೋತ್ಸವ ವಾಪಸ ಪಾದಗಟ್ಟಿಗೆ ಬಂದು ತಲುಪಿದಾಗ ಭಕ್ತರು ಚಪ್ಪಾಳೆಯನ್ನು ತಟ್ಟಿ ಹರ ಹರ ಮಹಾದೇವ, ಬಾಲಲೀಲಾ ಮಹಾಂತ ಶಿವಯೋಗಿಗಳ ಮಹರಾಜ್ ಕೀ ಜೈ ಘೋಷಗಳು ಮೊಳಗಿದವು.
ಈ ವೇಳೆ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಕಂಪ್ಲಿ ಕಲ್ಮಠದ ಅಭಿನವಪ್ರಭು ಸ್ವಾಮಿಗಳು ಸೇರಿದಂತೆ ಜಾತ್ರಾ ಸಮಿತಿ ಸರ್ವ ಸದಸ್ಯರು ಹಾಗೂ ಶ್ರೀಮಠದ ಭಕ್ತಾಧಿಗಳು ಇದ್ದರು.ವಿರೂಪಾಕ್ಷೇಶ್ವರ ಸ್ವಾಮಿಗಳ ಜಾತ್ರೆ: ಲಕ್ಷ್ಮೇಶ್ವರಕ್ಕೆ ಸಮೀಪದ ಗೊಜನೂರ ಗ್ರಾಮದ ವಿರೂಪಾಕ್ಷೇಶ್ವರ ಸ್ವಾಮಿಗಳ ರಥೋತ್ಸವವು ಭಕ್ತ ಸಾಗರದ ಮಧ್ಯೆ ಗುರುವಾರ ಅದ್ಧೂರಿಯಾಗಿ ಜರುಗಿತು.
ಹರಹರ ಮಹಾದೇವ ಎನ್ನುತ್ತ ಸೇರಿದ್ದ ಸಾವಿರಾರು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ನೂತನ ರಥಕ್ಕೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು. ಪೇರಲ ಹಣ್ಣು ಎಸೆಯುವ ಮೂಲಕ ಜಾತ್ರೆಗೆ ಮೆರಗು ಮೂಡಿಸಿದರು.ನೂತನ ರಥದ ಮುಂದೆ ಕೊಂಬು ಕಹಳೆಯನ್ನು ಮೊಳಗಿಸುವ ತಂಡದೊಂದಿಗೆ ಶಹನಾಯಿ ವಾದನ, ನಂದಿ ಕೋಲು ಕುಣಿತದ ತಂಡ, ಜಾಂಜ್ ಮೇಳವು ಜಾತ್ರೆಯ ಅಂದವನ್ನು ಹೆಚ್ಚಿಸುವ ಕಾರ್ಯ ಮಾಡಿದವು.ಮುಳಗುಂದ ಬಾಲಲೀಲಾ ಮಹಾಂತ ಸ್ವಾಮಿಮಠದ ಜಗದ್ಗುರು ಮಲ್ಲಿಕಾರ್ಜುನ ಸ್ವಾಮಿಗಳು ಗುರುವಾರ ಬೆಳಗ್ಗೆ ಭಕ್ತರಿಗೆ ದರ್ಶನಾರ್ಶಿವಾದ ಕರುಣಿಸಿ ರಥವು ಸಾಂಗವಾಗಿ ನೆರವೇರಲಿ ಎಂದು ನುಡಿದರು.ಕಡುಬಿನ ಕಾಳಗ ಇಂದು- ಗೊಜನೂರ ಗ್ರಾಮದ ವಿರೂಪಾಕ್ಷೇಶ್ವರ ಸ್ವಾಮಿಗಳ ಕಡುಬಿನ ಕಾಳಗವು ಶುಕ್ರವಾರ ಸಂಜೆ 5.30ಕ್ಕೆ ಅದ್ಧೂರಿಯಾಗಿ ನಡೆಯುತ್ತದೆ.