85 ನೇ ದಿನದ ಈ ಹೋರಾಟ ತಾರ್ಕಿಕವಾಗಿ ಜಯದೊಂದಿಗೆ ಮುಕ್ತಾಯವಾಗಬೇಕಿದೆ
ಕೊಪ್ಪಳ: ಕೊಪ್ಪಳ ನಗರಕ್ಕೆ ಹೊಂದಿಕೊಂಡ ಬಲ್ಡೋಟ ಕಾರ್ಖಾನೆಯ ಪರವಾನಗಿ ರದ್ದಾಗಬೇಕು. ಹಲವು ವರ್ಷಗಳಿಂದ ಕವಲೂರು ಬಡಾವಣೆಯ ನನ್ನ ಮನೆ ಧೂಳು ಬಾಧಿತವಾಗಿದೆ. ಸುತ್ತಲೂ ಇರುವ ವಾಸದ ಬಡಾವಣೆಗಳ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಗರಸಭೆ ಬಳಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ಹೋರಾಟದ 85ನೇ ದಿನವಾದ ಶುಕ್ರವಾರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹೋರಾಟವು ನಗರದ ಒಂದೂವರೆ ಲಕ್ಷ, 20 ಹಳ್ಳಿಗಳ 50 ಸಾವಿರ ಜನರ ಜೀವ, ಆರೋಗ್ಯಕ್ಕೆ ಸಂಬಂಧಿಸಿದೆ. 85 ನೇ ದಿನದ ಈ ಹೋರಾಟ ತಾರ್ಕಿಕವಾಗಿ ಜಯದೊಂದಿಗೆ ಮುಕ್ತಾಯವಾಗಬೇಕಿದೆ.ಇಷ್ಟೊಂದು ಸುದೀರ್ಘ ದಿನಗಳಿಂದ ಹೋರಾಟ ನಡೆಸುವ ಈ ಹೋರಾಟಗಾರರು ಅಭಿನಂದನಾರ್ಹರು.ಸ್ಪಾಂಜ್ ಐರನ್ ಕಾರ್ಖಾನೆಗಳು ಇಷ್ಟೊಂದು ಮಾಲಿನ್ಯ ಮಾಡಿವೆ. ಅವುಗಳು ಮಾಲಿನ್ಯ ನಿಯಂತ್ರಣ ಮಾಡಿದರೆ ಹಳ್ಳಿ ಜನರು, ಕೃಷಿ ಉಳಿಯುತ್ತದೆ. ಇಲ್ಲದಿದ್ದರೆ ರೋಗ ರುಜಿನ ಹೆಚ್ಚಾಗಿ ಅಕಾಲಿಕ ಸಾವು ಹೆಚ್ಚುತ್ತವೆ. ಬಲ್ಡೋಟ ವಿಸ್ತರಣೆ ಅಷ್ಟೇ ಅಲ್ಲ ಈಗಿರುವ ಲೈಸೆನ್ಸ್ ರದ್ದಾಗಬೇಕು ಎನ್ನುವುದಕ್ಕೆ ಸಹಮತವಿದೆ ಎಂದರು.
ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಜನಾರ್ದನರಡ್ಡಿ, ದೊಡ್ಡನಗೌಡ ಪಾಟೀಲ್,ಹೇಮಲತಾ ನಾಯಕ ಹಾಗೂ ಜಿಲ್ಲೆಯ ವಿರೋಧ ಪಕ್ಷದ ನಾಯಕರು, ಹೋರಾಟ ವೇದಿಕೆಯ ಮುಖಂಡರು ಸೇರಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಒಂದು ಸಭೆ ಕರೆಯುವ ವ್ಯವಸ್ಥೆ ಮಾಡಿಸಲು ಪ್ರಯತ್ನ ಮಾಡುತ್ತೇನೆ. ಸಿಎಂ ಮುಂದೆ ಸರ್ವಪಕ್ಷ ಮತ್ತು ಹೋರಾಟದ ಮುಖಂಡರ ನಿಯೋಗ ತೆಗೆದುಕೊಂಡು ಹೋಗೋಣ. ನಮ್ಮ ನ್ಯಾಯಯುತ ಜೀವ,ಆರೋಗ್ಯ ಉಳಿಸಿಕೊಳ್ಳುವ ಬೇಡಿಕೆಗೆ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ. ಮಾ.3 ರೊಳಗಾಗಿ ಇತ್ಯರ್ಥಪಡಿಸಲು ಪ್ರಯೋತ್ನಿಸೋಣ ಎಂದರು.
ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜು ಉಪನ್ಯಾಸಕಿ ಕೆ.ಎಸ್.ಸ್ವಾತಿ ಮಾತನಾಡಿ, ನಾನು ಬಾಧಿತ ಹಳ್ಳಿಯ ನಿವಾಸಿಯಾಗಿರುವೆ. ಕಾರ್ಖಾನೆ ಸುತ್ತುವರಿದ ಗ್ರಾಮಗಳು ಇಂದು ರೋಗ ಬಾಧಿತರ ಕೇಂದ್ರವಾಗಿವೆ.ಅಲ್ಲಿನ ಗಾಳಿ ಉಸಿರಾಡುವ ಜನ ಸಾಮಾನ್ಯವಾಗಿ ಪುಪ್ಪಸ ಸಂಬಂಧಿ ಅಸ್ತಮಾ, ಟಿಬಿ ರೋಗಕ್ಕೆ ತುತ್ತಾಗಿ ನರುಳಾಡುತ್ತಿದ್ದಾರೆ. ಮುಂದಿನ ಪೀಳಿಗೆ ಉಳಿಯಬೇಕಾರೆ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಮಾನವ ಬಂಧುತ್ವ ವೇದಿಕೆ ಘಟಪ್ರಭ ಕೇಂದ್ರದ ಸಂಪನ್ಮೂಲ ವ್ಯಕ್ತಿ ಮಹಾಲಿಂಗಪ್ಪ ಆಲ್ಬಾಳ ಮಾತನಾಡಿದರು.
ಸಾಹಿತಿ ಎ.ಎಂ.ಮದರಿ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಡಿ.ಎಚ್.ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಡಾ. ಮಂಜುನಾಥ ಸಜ್ಜನ್, ರಾಜು ಬಾಕಳೆ, ಎಸ್.ಬಿ.ರಾಜೂರು, ಜಿ.ಬಿ. ಪಾಟೀಲ್, ರವಿ ಕಾಂತನವರ, ಗಂಗಾಧರ ಖಾನಾಪೂರ, ರಾಜ್ಯ ರೈತ ಸಂಘದ ನಜೀರ್ ಸಾಬ್ ಮೂಲಿಮನಿ, ದಲಿತ ಮುಖಂಡ ಶುಕರಾಜ ತಾಳಕೇರಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲಣ್ಣವರ, ಜಿಲ್ಲಾ ಕೇಂದ್ರದ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೆಹಮತ್ ಉಲ್ಲಾ ಶಬ್ಬೀರ್, ಎರ್ರಿಸ್ವಾಮಿ, ಶರಣು ಗಡ್ಡಿ ಈಶ್ವರ ಹತ್ತಿ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಎಂ.ಎಸ್.ಸಜ್ಜನ್, ಶಿವಪ್ಪ ಹಲಗೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹೋರಾಟಗಾರ ಡಾ. ಕೆ.ಎಸ್. ಜನಾರ್ದನ, ರಾಮಚಂದ್ರ ಜಿ. ಕಡೇಮನಿ, ರತ್ನಮ್ಮ ದೊಡ್ಡಮನಿ, ಶಿವಪ್ಪ ಜಲ್ಲಿ, ಮಹಾದೇವಪ್ಪ ಮಾವಿನಮಾಡು, ವಿಜಯ ಮಹಾಂತೇಶ ಹಟ್ಟಿ, ಮಖ್ಬುಲ್ ರಾಯಚೂರು, ಜಮಲ್ ದಫೇದಾರ್, ಆನಂದ, ಮಕ್ಬುಲ್, ಮೌನೇಶ್, ರವಿ ಈರಣ್ಣ, ಹಾಲಪ್ಪ, ಶ್ರೀಕಾಂತ್, ಕಲೀಮ್ ಕಿನ್ನಾಳ್, ಮಂಜು, ಚಿನ್ನು, ಪರಸಪ್ಪ ಮನ್ನಾಪುರ, ಈರಮ್ಮ, ಮುದಿಯಪ್ಪ ಕಾಳಿದಾಸನಗರ್, ಗವಿಸಿದ್ದಪ್ಪ ಹೂಗಾರ್, ಸಂತೋಷ್, ಅನ್ನಪೂರ್ಣ ಸೇರಿದಂತೆ ಮೊದಲಾದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.