ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಿಗೆ ಹಲವು ತಿಂಗಳುಗಳಿಂದ ವೇತನ ಹಾಗೂ ಸೌಲಭ್ಯಗಳು ಸಿಗದಿರುವುದನ್ನು ಖಂಡಿಸಿ ಶನಿವಾರದಿಂದ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಬಂದ್ಗೆ ಕರೆ ನೀಡಿದ್ದಾರೆ.ಇಟಿಎಫ್, ಆರ್ಆರ್ಟಿ ಹಾಗೂ ಎಡಿಸಿ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ್ದು, ಕಾಡಾನೆಗಳ ಟ್ರ್ಯಾಕಿಂಗ್, ಜಿಪಿಎಸ್ ಫೋಟೋ ಅಪ್ಲೋಡ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಡಾನೆಗಳ ಚಲನವಲನಗಳ ಬಗ್ಗೆ ಅನೌನ್ಸ್ಮೆಂಟ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾಡಾನೆ ಹಾವಳಿ ಹೆಚ್ಚಿರುವ ಮಲೆನಾಡು ಭಾಗದ ಹೋಬಳಿಗಳಲ್ಲಿ ಈ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಕಾಡಾನೆಗಳ ಹಿಂದೆ ಬಿದ್ದು ಅವುಗಳ ಚಲನವಲನ ಪತ್ತೆ ಮಾಡಿ ಅದರ ಮಾಹಿತಿಯನ್ನು ಆ ಭಾಗದ ಜನರಿಗೆ ನೀಡುತ್ತಿದ್ದರು. ಇದರಿಂದ ಸ್ಥಳೀಯರಿಗೆ ಆನೆಗಳ ಇರುವಿಕೆ ಬಗ್ಗೆ ಮಾಹಿತಿ ಸಿಗುತ್ತಿತ್ತು. ಇಂತಹ ಅತ್ಯಮೂಲ್ಯ ಮಾಹಿತಿ ನೀಡುತ್ತಿದ್ದ ಹೊರಗುತ್ತಿಗೆ ನೌಕರರಿಗೆ ನೀಡುತ್ತಿದ್ದುದು ಕೂಡ ಕನಿಷ್ಠ ವೇತನ ಮಾತ್ರ. ಇದೀಗ ಕೆಲ ತಿಂಗಳುಗಳಿಂದ ಅದು ಕೂಡ ಬಾರದ ಪರಿಣಾಮ ಈ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಮಲೆನಾಡಿಗರಿಗೆ ಮತ್ತಷ್ಟು ಸಂಕಷ್ಟ:ಆರ್ಥಿಕ ಬಿಕ್ಕಟ್ಟಿಗೆ ಸಲುಕಿರುವ ರಾಜ್ಯ ಸರ್ಕಾರಕ್ಕೆ ತನ್ನ ನೌಕರರಿಗೆ ವೇತನ ನೀಡಲಿಕ್ಕೂ ಆಗುತ್ತಿಲ್ಲ. ಹಲವು ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಈಡೇರಿಕೆಗಾಗಿ ಸರ್ಕಾರದ ಖಜಾನೆ ಖಾಲಿ ಮಾಡಿ ಇದೀಗ ರಾಜ್ಯದಲ್ಲಿ ಆರ್ಥಿಕ ಸಂದಿಗ್ಧ ತಂದೊಡ್ಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಜಿಲ್ಲೆಯ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಇದರ ನಡುವೆ ಪ್ರತಿನಿತ್ಯ ಕಾಡಾನೆ ಪೀಡಿತ ಪ್ರದೇಶದ ಜನರ ನಡುವಿನ ಸೇತುವೆಯಾಗಿದ್ದ ನೌಕರರಿಂದ ಮುಷ್ಕರ ಆರಂಭವಾಗಿರುವುದು ಮಲೆನಾಡು ಭಾಗದ ಜನರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ.
ಮುಷ್ಕರಕ್ಕೆ ಸಾರ್ವಜನಿಕ ಬೆಂಬಲ:ಹಗಲು ರಾತ್ರಿಯೆನ್ನದೆ ಜೀವಭಯದಲ್ಲಿ ಕಾಡಾನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತಾ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಹಾಗೂ ಅವರ ಬೇಡಿಕೆಗಳನ್ನು ಅರಣ್ಯ ಇಲಾಖೆ ಸಚಿವರು ತಕ್ಷಣವೇ ಬಗೆಹರಿಸಲು ಮುಂದಾಗಬೇಕು. ಸಾರ್ವಜನಿಕರ ಜೊತೆಗೂಡಿ ಹೊರಾಟ ಮಾಡಲು ಸಿದ್ಧರಿದ್ದೇವೆ ಎಂದು ಅರೇಹಳ್ಳಿ ಪಟ್ಟಣದ ಕಡೇಗರ್ಜೆ ವಿಜಯರಾಜ್ ತಿಳಿಸಿದ್ದಾರೆ.
ಕಾಡಾನೆ ಮಾನವ ಸಂಘರ್ಷವನ್ನು ನಿಯಂತ್ರಿಸುವ ಸಲುವಾಗಿ ಪ್ರತಿನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರನ್ನು ಸಂಪರ್ಕಿಸುತ್ತ ಕಾಡಾನೆಗಳ ಚಲನವಲನಗಳ ಬಗ್ಗೆ ಮುನ್ನೆಚ್ಚರಿಕೆ ಸಂದೇಶಗಳನ್ನು ನೀಡುತ್ತಾ ಕೂಲಿ ಕಾರ್ಮಿಕ, ಕೃಷಿಕ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ಕಾಗಿ ಅರಣ್ಯ ಇಲಾಖೆಯು ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಆಲೂರು ಹಾಗೂ ಯಸಳೂರು ಭಾಗದ ಆನೆ ಕಾರ್ಯ ಪಡೆ (ಇಟಿಎಫ್), ಕ್ಷಿಪ್ರ ಸ್ಪಂದನ ತಂಡ (ಆರ್.ಆರ್.ಟಿ) ಹಾಗೂ ಹಿಮ್ಮೆಟ್ಟಿಸುವ ಶಿಬಿರ ತಂಡ (ಎಡಿಸಿ)ದ ಸುಮಾರು 140 ನೌಕರರು ಒಮ್ಮತದಿಂದ ಇಲಾಖೆಯು ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮುಷ್ಕರಕ್ಕೆ ಮುಂದಾಗಿರುವುದು ಆತಂಕಕಾರಿ ವಿಷಯವಾಗಿದೆ. ಈಗಾಗಲೇ ಮಲೆನಾಡು ಬಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಪ್ರಾಣಹಾನಿ ಹಾಗು ಬೆಳೆಹಾನಿ ಮಿತಿ ಮೀರಿದೆ. ಅರೆಕಾಲಿಕ ನೌಕರರ ಮುಷ್ಕರದಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.ಮುಷ್ಕರ ನಿರತ ಅರೆಕಾಲಿಕ ಸಿಬ್ಬಂದಿ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದು ನಮಗೆ ಸಿಗಬೇಕಾದ ಸೌಲಭ್ಯ ಸರಿಯಾಗಿ ಸಿಗದ ಕಾರಣದಿಂದ ಹಾಗೂ ಜಿಪಿಎಸ್ ಫೋಟೋಸ್ ಹಾಗೂ ಸಂದೇಶ ರವಾನೆ ಮಾಡುವುದಿಲ್ಲವೆಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಏನೇ ಆಗಲಿ ಕಾಡಾನೆಗಳನ್ನು ಕಂಡೊಡನೆ ಮನೆಯೊಳಗೆ ಇರುವ ಪರಿಸ್ಥಿತಿ ಜನಸಾಮಾನ್ಯರದ್ದಾಗಿದೆ. ಹಗಲು ರಾತ್ರಿಯೆನ್ನದೆ ಜೀವಭಯದಲ್ಲಿ ಕಾಡಾನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತಾ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ ನೌಕರರ ಕರ್ತವ್ಯವಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುವ ಮೂಲಕ ಯಥಾಸ್ಥಿತಿ ಕಾಪಾಡುವಂತೆ ಮುಂದಾಗಬೇಕು. ಇಲ್ಲದಿದ್ದರೆ ಕೃಷಿಕರು ಕಾಡಾನೆಗಳಿಂದ ಹಿತ ಕಾಪಾಡುವ ಅವರ ಕ್ಷೇಮಾಭಿವೃದ್ಧಿಗಾಗಿ ಬೆಳೆಗಾರರು ಮುಷ್ಕರದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ.