ಕಂದಾಯ, ಕೃಷಿ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯ: ಶಾಸಕ ಮಾನೆ

KannadaprabhaNewsNetwork | Published : Mar 2, 2025 1:17 AM

ಸಾರಾಂಶ

ಕಂದಾಯ ಹಾಗೂ ಕೃಷಿ ಇಲಾಖೆ ಜನರ ಜೀವನಾಡಿ. ಹಾಗಾಗಿ ಈ ಇಲಾಖೆಗಳಿಗೆ ಚುರುಕು ಮುಟ್ಟಿಸುವ ಹಾಗೂ ಬದಲಾವಣೆ ಕೆಲಸ ಮಾಡಲಾಗುತ್ತಿದೆ. ಬಿ ಖಾತೆ ಸೇರಿದಂತೆ ಎಲ್ಲ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಜನರ ಬಳಿಗೆ ಆಡಳಿತ ತರುವ ಜನಸ್ಪಂದನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ತಾಲೂಕಿನಲ್ಲಿ ಈ ವರೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ 600ಕ್ಕೂ ಅಧಿಕ ಅರ್ಜಿಗಳ ವಿಲೇವಾರಿ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕು ಆಡೂರ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ ಹಾಗೂ ತಾಪಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಹಾಗೂ ಕೃಷಿ ಇಲಾಖೆ ಜನರ ಜೀವನಾಡಿ. ಹಾಗಾಗಿ ಈ ಇಲಾಖೆಗಳಿಗೆ ಚುರುಕು ಮುಟ್ಟಿಸುವ ಹಾಗೂ ಬದಲಾವಣೆ ಕೆಲಸ ಮಾಡಲಾಗುತ್ತಿದೆ. ಬಿ ಖಾತೆ ಸೇರಿದಂತೆ ಎಲ್ಲ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. 30ರಿಂದ 40 ವರ್ಷಗಳಿಂದ ವಾಸಿಸುವವರಿಗೆ ಪಟ್ಟಾ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ ಆರರಿಂದ ಏಳು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಸ್ವೀಕರಿಸುವ ಅಹವಾಲುಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗುವುದು ಎಂದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಮನೆಹಾನಿ ಪರಿಹಾರ, ಹೊಲಕ್ಕೆ ದಾರಿ, ಭೂಸ್ವಾಧೀನ ಪರಿಹಾರ, ಪಹಣಿಯಲ್ಲಿನ ಸರ್ಕಾರ ಕಡಿಮೆ ಮಾಡಲು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ಹಣದ ಬೇಡಿಕೆ, ಬಿ ಖಾತಾ ಪಹಣಿ, ಬಸ್ ಸೌಲಭ್ಯ ಸೇರಿದಂತೆ ಸಾರ್ವಜನಿಕರು ವಿವಿಧ ಸಮಸ್ಯೆಗಳ ಅಹವಾಲು ಸಲ್ಲಿಸಿದರು.

ಸುಕನ್ಯಾ ಸಮೃದ್ಧಿ ಯೋಜನೆ ಪಾಸ್‌ಪುಸ್ತಕವನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.

ಆಡೂರ ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಅಕ್ರಮ-ಸಕ್ರಮ ಮತ್ತು ಬಗರಹುಕುಂ ಸಮಿತಿ ಸದಸ್ಯ ಪುಟ್ಟಪ್ಪ ನರೇಗಲ್ಲ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ತಹಸೀಲ್ದಾರ್‌ ರೇಣುಕಮ್ಮ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ತಾಪಂ ಮಾಜಿ ಸದಸ್ಯ ಎನ್.ಪಿ. ಪೂಜಾರ, ಇತರರು ಇದ್ದರು.105 ಅರ್ಜಿ ಸಲ್ಲಿಕೆ: ಕಂದಾಯ ಇಲಾಖೆಯ-25, ತಾಪಂ-34, ಸರ್ವೇ ಇಲಾಖೆ-15, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ -11, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-1, ಹಾನಗಲ್ಲ ಎಪಿಎಂಸಿ-01, ಹಾನಗಲ್ಲ ಏತ ನೀರಾವರಿ ವಿಭಾಗ-5, ಹಾನಗಲ್ಲ ವಾಕರಸಾ ಸಂಸ್ಥೆ-1, ಸಮಾಜ ಕಲ್ಯಾಣ ಇಲಾಖೆ-2, ಹಾನಗಲ್ಲ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ-1, ಹೆಸ್ಕಾಂ-8, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ-1 ಸೇರಿದಂತೆ 105 ಅರ್ಜಿಗಳು ಸಲ್ಲಿಕೆಯಾಗಿವೆ. ಹಾನಗಲ್ಲ ಕಂದಾಯ ಇಲಾಖೆ 11 ಹಾಗೂ ತಾಪಂ 10 ಸೇರಿದಂತೆ 21 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಲಾಯಿತು.

819 ಮನೆಗಳ ವರದಿ ಸಲ್ಲಿಕೆ: ಮಳೆಯಿಂದ ಹಾನಿಯಾದ 2,300 ಮನೆಗಳ ಪಟ್ಟಿ ಬ್ಲಾಕ್ ಆಗಿತ್ತು, ನಿಗದಿತ ಸಮಯದಲ್ಲಿ ತಳಪಾಯ ಹಾಕದ ಹಿನ್ನಲೆಯಲ್ಲಿ ಅಂತಹ ಮನೆಗಳ ಪಟ್ಟಿ ಬ್ಲಾಕ್ ಆಗಿತ್ತು. ಈ ಪೈಕಿ 819 ಮನೆಗಳ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಅನುದಾನ ಮಂಜೂರಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೊಸ ರಸ್ತೆಗಳಿಗೆ ಮಾತ್ರ ಪರಿಹಾರ: ಕಳೆದ 30ರಿಂದ 40 ವರ್ಷದ ಹಳೆಯ ದಾರಿಗಳಿಗೆ ಈಗ ಪರಿಹಾರ ನೀಡಲು ಅವಕಾಶ ಇಲ್ಲ. ಹೊಸದಾಗಿ ರಸ್ತೆ ಮಾಡುತ್ತಿದ್ದರೆ ಪರಿಹಾರ ಕೊಡಿಸಲು ಕ್ರಮವಹಿಸಲಾಗುವುದು. 40ರಿಂದ 50 ವರ್ಷಗಳ ಹಿಂದೆ ನಮ್ಮ ಪೂರ್ವಜರು ಶಾಲೆ, ಆಸ್ಪತ್ರೆ ಹಾಗೂ ರಸ್ತೆಗಳಿಗೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಇಲಾಖೆಗಳು ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಹಾಗಾಗಿ ಹಳೆ ಸಮಸ್ಯೆಗಳಿಗೆ ಪರಿಹಾರ ನೀಡುವುದು ಕಷ್ಟಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

Share this article