ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಚಿನಹಳ್ಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ಬಸ್ನಲ್ಲಿದ್ದ ೧೬ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.ಘಟನೆಯ ವೇಳೆ ಬಸ್ನಲ್ಲಿ ಸುಮಾರು ೩೦ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಹೆಚ್ಚಿನವರು ಹಬ್ಬದ ಪ್ರಯುಕ್ತ ತಮ್ಮ ಊರುಗಳಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮೂಡುಬಿದಿರೆಯ ಫಹದ್ (೨೦) , ಫರಂಗಿಪೇಟೆಯ ರಂಝೀನ್(೨೫), ದೇರಳಕಟ್ಟೆಯ ಉಮ್ಮರ್ (೫೩), ಪುತ್ತೂರಿನ ತಮೀನ್ (೧೯), ಪುತ್ತೂರು ಸಾಲ್ಮರದ ಇಷಾಮ್ (೧೯), ಉಪ್ಪಿನಂಗಡಿಯ ರುಕ್ಮಯ (೨೪), ಬಂಟ್ವಾಳ ಸಾಲೆತ್ತೂರಿನ ಜಾಹಿರ್ (೨೩), ವಿಟ್ಲದ ಶಮೀರ್ (೨೮), ವಿಟ್ಲದ ಅನ್ಸಾರ್ (೨೬), ಬೆಂಗಳೂರಿನ ದಾಸರಪುರದ ಸೋಮಶೇಖರ (೫೫) ಮತ್ತು ಶರತ್ (೩೫), ನೆಲಮಂಗಲ ಡಾ. ಮಹಂತ್ ಗೌಡ (೪೭), ಸಂಪ್ಯದ ಸಿಮಾಕ್ (೨೩), ಅಬ್ದುಲ್ ರಜೀದ್ (೩೮), ಮೂಡುಬಿದಿರೆ ಕೈಕಂಬದ ಪೌಝಿಲ್ (೨೩), ಅಲ್ತಾಫ್(೨೮) ಎಂದು ಗುರುತಿಸಲಾಗಿದೆ. ಬಸ್ನಲ್ಲಿದ್ದ ಇತರ ಪ್ರಯಾಣಿಕರಿಗೆ ತರಚಿದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.ಘಟನೆ ಸಂಭವಿಸಿದಾಕ್ಷಣ ಸ್ಥಳೀಯರು ಒಗ್ಗೂಡಿ ಗಾಯಾಳುಗಳನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಒದಗಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ೧೪ ಮಂದಿಯನ್ನು ಮಂಗಳೂರು ಐಲ್ಯಾಂಡ್ ಆಸ್ಪತ್ರೆಗೆ, ಓರ್ವನನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಹಾಗೂ ಓರ್ವನನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಘಟನಾ ಸ್ಥಳದಿಂದ ಸುಮಾರು ೮ ಆಂಬುಲೆನ್ಸ್ಗಳಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸಲಾಯಿತು. ಇವರಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.