ಬಂಜಾರ ಸಂಸ್ಕೃತಿ ಪರಂಪರೆ ಶ್ರೀಮಂತ: ಡಾ. ಕಠಾರಿನಾಯ್ಕ

KannadaprabhaNewsNetwork |  
Published : Feb 11, 2024, 01:49 AM IST
ಹೂವಿನಹಡಗಲಿಯ ಕಸಾಪ ಘಟಕವು ವರಕನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ  ಆಯೋಜಿಸಿದ್ದ ವಿವಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯ ಡಾ.ಎಲ್‌.ಪಿ.ಕಠಾರಿನಾಯ್ಕ. | Kannada Prabha

ಸಾರಾಂಶ

ಬಂಜಾರ ಜನಾಂಗದ ಪರಂಪರೆ ಮತ್ತು ಸಂಸ್ಕೃತಿ ಕುರಿತು ಹೂವಿನಹಡಗಲಿಯಲ್ಲಿ ನಡೆದ ದತ್ತಿ ಉಪನ್ಯಾಸದಲ್ಲಿ ಡಾ. ಎಲ್‌.ಪಿ. ಕಠಾರಿನಾಯ್ಕ ವಿಸ್ತೃತ ಮಾಹಿತಿ ನೀಡಿದರು. ಧೈರ್ಯ, ಸ್ವಾಭಿಮಾನಕ್ಕೆ ಬಂಜಾರ ಜನಾಂಗ ಹೆಸರಾಗಿದೆ ಎಂದರು.

ಹೂವಿನಹಡಗಲಿ: ಬಂಜಾರ ಜನಾಂಗದ ಉಡುಗೆ, ತೊಡುಗೆ, ಭಾಷೆ, ಜೀವನ ಶೈಲಿ ದೇಶದ ಬುಡಕಟ್ಟು ಜನಾಂಗಗಳಲ್ಲೇ ಸಂಸ್ಕೃತಿ, ಪರಂಪರೆ ಶ್ರೀಮಂತವಾಗಿದೆ ಎಂದು ವೈದ್ಯ ಡಾ. ಎಲ್‌.ಪಿ. ಕಠಾರಿನಾಯ್ಕ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಇಟ್ಟಿಗಿ ಹೋಬಳಿ ಘಟಕವು ವರಕನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಮತಿ ಉಮ್ಲಿಬಾಯಿ ಥಾವರ್ಯ ನಾಯ್ಕ ಸ್ಮಾರಕದತ್ತಿ, ಶ್ರೀಮತಿ ಕೌಸಲ್ಯಾಬಾಯಿ ದೇವೇಂದ್ರನಾಯ್ಕ ಪ್ರದೀಪ, ಪಲ್ಲವಿ ದತ್ತಿ ಹಾಗೂ ಶ್ರೀಮತಿ ಲಕ್ಷ್ಮಿಬಾಯಿ ಪುರುಷೋತ್ತಮರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಜಾರರು ಕರ್ನಾಟಕ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ಹರಡಿಕೊಂಡಿದ್ದಾರೆ. ಪ್ರಪಂಚದ 144 ದೇಶಗಳಲ್ಲಿ ಈ ಜನಾಂಗದವರಿದ್ದಾರೆ. ಎಲ್ಲರೂ ಆಡುವ ಭಾಷೆ ಒಂದೇ ಅದು ಗೋರ್ ಬೋಲಿ. ಇಂಡೋ ಆರ್ಯನ್ ಜನಾಂಗಕ್ಕೆ ಸೇರಿದವರಾದ ಇವರು, ಸಿಂಧೂ ನದಿಯ ನಾಗರಿಕತೆಯ ಪಟ್ಟಣಗಳಾದ ಹರಪ್ಪ ಮತ್ತು ಮಹೆಂಜೋದಾರ್‌ಗಳಲ್ಲಿ ಮೋಹನನಾಯ್ಕನ ತಾಂಡಾ, ಹರಪ್ಪನ ತಾಂಡಾಗಳಲ್ಲಿ ಈ ಜನಾಂಗ ವಾಸಿಸುತ್ತಿದ್ದ ಕುರುಹುಗಳಿದ್ದವು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ ಎಂದರು.

ರಾಥೋಡ್, ಚೌಹಾನ್, ಪವಾರ್, ಜಾಧವ್ ಕುಲಗಳಿದ್ದು, ಅನೇಕ ಗೋತ್ರಗಳನ್ನು ಹೊಂದಿವೆ. ಮುತ್ತು, ರತ್ನ ವ್ಯಾಪಾರ, ಪಶು ಸಂಗೋಪನೆ ವೃತ್ತಿಯಲ್ಲಿ ತೊಡಗಿರುವ ಇವರ ಧೈರ್ಯ, ಸ್ವಾಭಿಮಾನಕ್ಕೆ ಹೆಸರಾದ ಸಮುದಾಯ ಬ್ರಿಟಿಷರ ಅವಕೃಪೆಗೆ ಒಳಗಾಗಿ, 1871ರಲ್ಲಿ ಕ್ರಿಮಿನಲ್ ಆ್ಯಕ್ಟ್‌ನಡಿ ಆಪಾದಿತರಾಗಿ ಕಾಡು ಸೇರಿದ್ದು ಇತಿಹಾಸದ ದುರಂತ ಎಂದರು.

ಹಬ್ಬ, ಹರಿದಿನ, ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಈ ಜನಾಂಗಗಳ ಹಾಡು, ನೃತ್ಯ, ವಿಶಿಷ್ಟ ವೈವಿಧ್ಯಮ ಆಚರಣೆಗಳಿಂದ ಈ ಸಮುದಾಯ ಹೆಸರಾಗಿದೆ ಎಂದರು.

ಸ್ವಾತಂತ್ರ್ಯದ ನಂತರ ಸರ್ಕಾರಿ ಸೌಲಭ್ಯಗಳ ನೆರವಿನಿಂದ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳ ಉನ್ನತ ಸೇವೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವೆಂದರು.

ಕಸಾಪ ಮಾಜಿ ಅಧ್ಯಕ್ಷರು, ದತ್ತಿ ದಾನಿಗಳಾದ ಕೌಸಲ್ಯ ದೇವೇಂದ್ರನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಜಾರ ಜನಾಂಗದ ಸಂಸ್ಕೃತಿ ಎಲ್ಲರಿಗೂ ಪರಿಚಯವಾಗಲೆಂದು ಈ ವಿಷಯದ ದತ್ತಿ ನೀಡಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಆದರ್ಶದ ನಡೆ, ನುಡಿಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು. ಕವನ ವಾಚಿಸುವುದರ ಮೂಲಕ ಮಾಹಿತಿ ನೀಡಿದರು.

ಶಾಲೆಯ ಪ್ರಾಚಾರ್ಯ ಜಿ. ಬಸವರಾಜ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ಕಾರ್ಯಕ್ರಮದ ವಿಶಿಷ್ಟತೆಯ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ. ವಿನಯರಾಜ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಎಚ್. ಜಿ. ಪಾಟೀಲ್, ಇಟ್ಟಿಗಿ ಘಟಕದ ಸಂಘಟನಾ ಕಾರ್ಯದರ್ಶಿ ಎಂ. ನಿಂಗರಾಜ್, ಶಾಲೆಯ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಲಂಬಾಣಿ ನೃತ್ಯ ಎಲ್ಲರ ಮನಸೂರೆಗೊಂಡಿತು. ಸುನಿಲ್ ನಾಯ್ಕ ಇವರ ಜಾನಪದ ಹಾಡುಗಾರಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಗೀತ ಶಿಕ್ಷಕ ಬಿ. ಯುವರಾಜಗೌಡ ಸ್ವಾಗತಿಸಿದರು. ವಿ. ಭೀಮಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸೈಯದ್ ತೋಫಿಕ್ ವಂದಿಸಿದರು. ಶಿಕ್ಷಕ ಬಸವರಾಜ ರೊಟ್ಟಿ ನಿರ್ವಹಿಸಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ