ಸಾಲ ಮರುಪಾವತಿಗಾಗಿ ರೈತರ ಮನೆಗಳಿಗೆ ಬ್ಯಾಂಕ್ ನೋಟಿಸ್ ಜಾರಿ: ಖಂಡನೆ

KannadaprabhaNewsNetwork |  
Published : Jan 11, 2024, 01:30 AM IST
10ಕೆಎಂಎನ್ ಡಿ12,13,14  | Kannada Prabha

ಸಾರಾಂಶ

ಬರ ಪರಿಸ್ಥಿತಿ ನಡುವೆ ಬ್ಯಾಂಕ್‌ನಿಂದ ಪಡೆದ ಸಾಲದ ಕಂತುಗಳನ್ನು ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ರೈತರು, ಶೈಕ್ಷಣಿಕವಾಗಿ ಪಡೆದ ಸಾಲವನ್ನು ಕಟ್ಟುವಂತೆ ವಿದ್ಯಾರ್ಥಿಗಳ ಪೋಷಕರಿಗೆ ನೋಟಿಸ್ ನೀಡುತ್ತಿರುವುದನ್ನು ಖಂಡನೀಯ. ರೈತರ ಮನೆಗಳಿಗೆ ನೋಟಿಸ್ ನೀಡಿ ಭಯ ಪಡಿಸುತ್ತಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ಮನೆಗಳಿಗೆ ಸಾಲ ಮರು ಪಾವತಿಗಾಗಿ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದನ್ನು ಖಂಡಿಸಿ ತಾಲೂಕಿನ ತಗ್ಗಹಳ್ಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು, ರೈತರು ಪ್ರತಿಭಟನೆ ನಡೆಸಿದರು.

ತಾಲೂಕಿನ ತಗ್ಗಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ರೈತರು, ಸರ್ಕಾರ ಜಿಲ್ಲೆಯನ್ನು ಬರಗಾಲು ಎಂದು ಘೋಷಣೆ ಮಾಡಿದ್ದರೂ ರೈತರ ಮನೆಗಳಿಗೆ ನೋಟಿಸ್ ನೀಡಿ ಭಯ ಪಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಸ್ಥಿತಿ ನಡುವೆ ಬ್ಯಾಂಕ್‌ನಿಂದ ಪಡೆದ ಸಾಲದ ಕಂತುಗಳನ್ನು ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ರೈತರು, ಶೈಕ್ಷಣಿಕವಾಗಿ ಪಡೆದ ಸಾಲವನ್ನು ಕಟ್ಟುವಂತೆ ವಿದ್ಯಾರ್ಥಿಗಳ ಪೋಷಕರಿಗೆ ನೋಟಿಸ್ ನೀಡುತ್ತಿರುವುದನ್ನು ಖಂಡಿಸಿದರು.

ಈ ವರ್ಷ ಸರಿಯಾಗಿ ಮಳೆಯಾಗದೇ ರೈತರು ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದ್ದರೂ ಇದಕ್ಕೆ ಕ್ಯಾರೆ ಎನ್ನದೇ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿ ರೈತರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳಿಗೂ ಸಾಲ ಮರುಪಾವತಿಗಾಗಿ ಒತ್ತಡ ಹಾಕುತ್ತಿದ್ದಾರೆ. ಪದವಿ ಮಾಡಿದ ಹಲವು ವಿದ್ಯಾರ್ಥಿಗಳು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ರೈತರಲ್ಲಿ ಒತ್ತಡ ಜಾಸ್ತಿಯಾಗಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಬಲವಂತದ ಸಾಲ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಪಡೆದ ಶ್ರೀಮಂತರಿಗೆ ಯಾವುದೇ ನೋಟಿಸ್ ನೀಡಲ್ಲ. ಅವರ ಬಳಿ ಸಾಲವನ್ನು ಕೇಳಲ್ಲ. ಆದರೆ, ಸಾಮಾನ್ಯ ಜನರು, ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದೀರಿ. ನೋಟಿಸ್ ನೀಡಿದ್ದರಿಂದ ರೈತರು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ವಿದ್ಯಾರ್ಥಿಗಳು ಪಡೆದ ಶೈಕ್ಷಣಿಕ ಸಾಲ, ರೈತರು ಪಡೆದ ಬೆಳೆ ಸೇರಿದಂತೆ ಇತರೆ ಸಾಲವನ್ನು ಸಾಲವನ್ನು ಮನ್ನಾ ಮಾಡಬೇಕು. ಈ ಬಗ್ಗೆ ಗ್ಯಾರಂಟಿ ನೀಡಿ ರೈತರು, ವಿದ್ಯಾರ್ಥಿಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ, ಸಂಬಂಧಿಸಿದ ಸಚಿವರು, ವಿಪಕ್ಷ ನಾಯಕರು ತಕ್ಷಣ ರೈತರಿಗೆ ಸಾಲ ವಸೂಲಾತಿಗಾಗಿ ನೀಡುತ್ತಿರುವ ನೋಟಿಸ್‌ಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ನೋಟಿಸ್ ನೀಡುವುದು ಕೂಡ ರೈತರನ್ನು ಭಯ ಪಡಿಸುವಂತದ್ದಾಗಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆ ಹಾದಿ ಹಿಡಿಯುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ರೈತರಿಂದ ಮನವಿ ಸ್ವೀಕರಿಸಿದ ಬ್ಯಾಂಕ್ ಮ್ಯಾನೇಜರ್ ಎನ್ .ರಮೇಶ್ ಮಾತನಾಡಿ, ಮೇಲಾಧಿಕಾರಿಗಳ ಸೂಚನೆಯಂತೆ ನಾವು ನೋಟಿಸ್ ನೀಡಿದ್ದೇವೆ. ಹೊಸ ಸಾಲ ಕಟ್ಟುವಂತೆ ಕೇಳುತ್ತಿಲ್ಲ. ಹಳೇ ಸಾಲ ನೀಡುವಂತೆ ಈ ಹಿಂದೆಯೂ ನೋಟಿಸ್ ನೀಡಲಾಗಿತ್ತು. ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಲ್ಲಿಗೆರೆ ಎಂ.ಬಿ.ಲೋಕೇಶ್ , ವೆಂಕಟೇಶ್ , ಲಿಖಿತ್ ಕುಮಾರ್, ವಿನೋದ್ , ಎಂ.ಬಿ.ಸುರೇಶ್ , ದೇವರಾಜು, ಸಿದ್ದರಾಜು, ನಾಗೇಶ್ , ಟಿ.ಕೆ.ಮಾದೇಗೌಡ, ನಾಗಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!