ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯ ದಿವಾಳಿ: ತಿಮ್ಮರಾಯಪ್ಪ

KannadaprabhaNewsNetwork | Published : Feb 26, 2024 1:32 AM

ಸಾರಾಂಶ

ಓಟಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಬಿಟ್ಟಿ ಗ್ಯಾರಂಟಿಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಸಾಧ್ಯವಿಲ್ಲದಾಗಿದೆ ಎಂದು ಮಾಜಿ ಶಾಸಕ ತಿಮ್ಮರಾಯಪ್ಪ ದೂರಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರುಓಟಿಗಾಗಿ ಬಿಟ್ಟಿ ಭಾಗ್ಯಗಳ ಜಾರಿ ಮಾಡಿ ಜನಸಾಮಾನ್ಯರಿಗೆ ಸಾಲದ ಹೊರೆಯನ್ನು ಹೊರೆಸುತ್ತಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ವ್ಯವಸ್ಥೆಯನ್ನೇ ಬುಡ ಮೇಲು ಮಾಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಯಾರೇ ಅದರೂ ಗೆಲ್ಲಿಸಬೇಕೆಂದು ಮಾಜಿ ಶಾಸಕ ತಿಮ್ಮರಾಯಪ್ಪ ಹೇಳಿದರು.

ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಓಟಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಬಿಟ್ಟಿ ಗ್ಯಾರಂಟಿಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಸಾಧ್ಯವಿಲ್ಲದಾಗಿದೆ. ಎದುರಾಗಿರುವ ಭೀಕರ ಬರಗಾಲವನ್ನು ಎದುರಿಸುವಲ್ಲಿ ಹಣ ಇಲ್ಲದಂತಾಗಿದೆ. ಗ್ಯಾರಂಟಿಗಳ ಜಾರಿ ಮಾಡಲು 5 ಲಕ್ಷಕ್ಕೂ ಅಧಿಕ ಕೋಟಿ ರು. ಸಾಲ ಮಾಡಿ ರುವ ಸರ್ಕಾರ ಮುಂದಿನ ನಾಲ್ಕು ವರ್ಷದಲ್ಲಿ ಸಾಲಗಾರರ ರಾಜ್ಯವನ್ನಾಗಿಸುತ್ತದೆ. ಕಾಂಗ್ರೆಸ್ ದುರಾಡಳಿತವನ್ನು ಕಟ್ಟಿಹಾಕಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಪಕ್ಷದ ಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಒಟ್ಟಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ತಿಳಿಸಿದರು.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಆಡಳಿತದ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸುವ ಮೂಲಕ ಮತದಾರರನ್ನು ಜಾಗೃತರನ್ನಾಗಿ ಸಬೇಕು. ಕ್ಷೇತ್ರವು ಜೆಡಿಎಸ್ ಪಕ್ಷಕ್ಕೆ ಉತ್ತಮ ನೆಲೆ ಇದೆ. ಕಾರ್ಯಕರ್ತರು ಒಟ್ಟಾಗಬೇಕು. ಲೋಕಸಭಾ ಚುನಾವಣೆಗೆ ಪೂರಕವಾಗಿ ಪಕ್ಷವನ್ನು ಸಂಘಟಿಸಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವಂತೆ ಕರೆ ನೀಡಿದರು.

ಜಿಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ಇಲ್ಲವಾಗಿವೆ. ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ರವೀಂದ್ರ, ತಾಲೂಕು ಅದ್ಯಕ್ಷ ಡಿ.ಬಿ.ಕರಿಬಸಪ್ಪ, ಪಾವಗಡ ಜಿಲ್ಲಾಧ್ಯಕ್ಷ ವೀರಣ್ಣ,ಮೊಳಕಾಲ್ಮುರು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ.ವೀರಭದ್ರಪ್ಪ, ಓಬಯ್ಯನ ಹಟ್ಟಿ ಕುಮಾರ, ತಾಲೂಕು ಉಪಾಧ್ಯಕ್ಷ ನಾಗೇಂದ್ರ, ಜಿಲ್ಲಾ ಕಾರ್ಯದರ್ಶಿ ರಂಗ ಸ್ವಾಮಿ, ಒಬಿಸಿ ಅಧ್ಯಕ್ಷ ಚನ್ನ ಬಸಪ್ಪ, ಮಲ್ಲೂರಹಳ್ಳಿ ತಿಪ್ಪಯ್ಯ, ಹನುಮಂತನಹಳ್ಳಿ ನಾಗರಾಜ, ರೇಕಲಗೆರೆ ಮಹೇಂದ್ರ, ಧನಂಜಯ ಇದ್ದರು.

Share this article