ಕಂದಾಯ ಗ್ರಾಮವಾದ ಬಸಾಪುರ, ದಶಕಗಳ ಕನಸು ನನಸು

KannadaprabhaNewsNetwork | Published : May 20, 2025 1:15 AM
ಲಕ್ಷ್ಮೇಶ್ವರ ಸಮೀಪದ ರಾಮಗೇರಿ ಗ್ರಾಪಂ ವ್ಯಾಪ್ತಿಯ ಬಸಾಪುರ ಗ್ರಾಮವನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕಂದಾಯ ಗ್ರಾಮವಾಗಿ ಮಾರ್ಪಡುತ್ತಿರುವುದು ಗ್ರಾಮದ ಜನರಿಗೆ ಹರ್ಷವನ್ನುಂಟು ಮಾಡಿದೆ.
Follow Us

ಲಕ್ಷ್ಮೇಶ್ವರ: ಸಮೀಪದ ರಾಮಗೇರಿ ಗ್ರಾಪಂ ವ್ಯಾಪ್ತಿಯ ಬಸಾಪುರ ಗ್ರಾಮವನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕಂದಾಯ ಗ್ರಾಮವಾಗಿ ಮಾರ್ಪಡುತ್ತಿರುವುದು ಗ್ರಾಮದ ಜನರಿಗೆ ಹರ್ಷವನ್ನುಂಟು ಮಾಡಿದೆ.

ರಾಮಗೇರಿ ಗ್ರಾಪಂ ವ್ಯಾಪ್ತಿಯ ಬಸಾಪುರವು ಸ್ವಾತಂತ್ರ್ಯ ಬಂದಾಗಿಂದಲೂ ಇದುವರೆಗೂ ಮಜರೆ ಗ್ರಾಮವಾಗಿತ್ತು. ಇದು ಲಕ್ಷ್ಮೇಶ್ವರ ಐದು ಬಣಗಳಲ್ಲಿ ಒಂದಾದ ಹಿರೇಬಣ ವ್ಯಾಪ್ತಿಗೆ ಒಳಪಟ್ಟಿತ್ತು. ಅನೇಕ ದಶಕಗಳಿಂದ ಬಸಾಪುರ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಗ್ರಾಮಸ್ಥರ ಬೇಡಿಕೆಯಾಗಿತ್ತು. ಈಗ ರಾಜ್ಯ ಸರ್ಕಾರ ಮಜರೆ, ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವ ಮೂಲಕ ಆ ಗ್ರಾಮದ ಜನರಿಗೆ ಎಲ್ಲ ರೀತಿಯ ಸೌಲಭ್ಯ ನೀಡುವಲ್ಲಿ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಬಸಾಪುರವು ಕಳೆದ 75 ವರ್ಷಗಳ ನಂತರ ಕಂದಾಯ ಗ್ರಾಮ ಎಂದು ಘೋಷಿಸಲಪಟ್ಟಿದೆ.

ಬಸಾಪುರದಲ್ಲಿ ಒಟ್ಟು 78 ಕುಟುಂಬಗಳಿದ್ದು ಈ ಎಲ್ಲಾ ಕುಟುಂಬಗಳಿಗೆ ಇನ್ನು ಮುಂದೆ ಪಹಣಿ ಸೇರಿದಂತೆ ಎಲ್ಲಾ ಸರ್ಕಾರದ ದಾಖಲೆಗಳಲ್ಲಿ ಕಂದಾಯ ಗ್ರಾಮ ಎಂದು ನಮೂದಿಸಲ್ಪಡುತ್ತದೆ. ಕಂದಾಯ ಇಲಾಖೆಯೂ ಈ ಗ್ರಾಮದ ಸಂಪೂರ್ಣ ಸಮೀಕ್ಷೆ ಮಾಡಿದೆಲ್ಲ ದಾಖಲೆಗಳನ್ನು ಗ್ರಾಮದ ಜನರಿಗೆ ನೀಡುವ ಮೂಲಕ ಈ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಿಸಲು ತಹಸೀಲ್ದಾರ್‌ ವಾಸುದೇವ ವಿ. ಸ್ವಾಮಿ‌ ಸೇರಿದಂತೆ ಎಲ್ಲಾ ತಹಸೀಲ್ದಾರ್‌ಗಳು, ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದರು. ಸರ್ಕಾರ ಅನುಮೋದಿಸಿ ಎಲ್ಲಾ 78 ಕುಟುಂಬಗಳಿರುವ ಮಜರೆ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವ ಮೂಲಕ ಈ ಗ್ರಾಮದ ಜನರ ಬಹು ದಿನಗಳ ಕನಸು ನನಸಾಗಲಿದೆ.

ರಾಜ್ಯ ಸರ್ಕಾರ ಮೇ 20‌ರಂದು ಹೊಸಪೇಟೆಯಲ್ಲಿ ಜರಗುಲಿರುವ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಸಮರ್ಪಣೆ ಸಂಕಲ್ಪ ಕಾರ್ಯಕ್ರಮದಲ್ಲಿ ಈ ಗ್ರಾಮದ 78 ಕುಟುಂಬಗಳು ಕಂದಾಯ ಗ್ರಾಮ ಹಕ್ಕುಪತ್ರವನ್ನು ಮುಖ್ಯಮಂತ್ರಿ‌ ಸಿದ್ದರಾಯ್ಯನವರು ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಂದ ಪಡೆಯಲಿದ್ದಾರೆ.

ಈ ಕುರಿತು ಗ್ರಾಮಸ್ಥರು‌ ಹರ್ಷ ವ್ಯಕ್ತಪಡಿಸಿ ತಮ್ಮ ಅನೇಕ ವರ್ಷಗಳ ಕನಸು ನನಸಾಗಿರುವುದು ಸಂತಸ ತಂದಿದೆ. ಮುಂದೆ ಈ-ಸ್ವತ್ತು ಪಹಣಿ‌ ಪತ್ರಿಕೆ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳ ದಾಖಲೆಗಳಲ್ಲಿ ಕಂದಾಯ ಗ್ರಾಮ ಆಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗ್ರಾಮದ ಅಶೋಕ ತುಂಬಣ್ಣವರ ಹೇಳಿದರು.ಕರ್ನಾಟಕ ಭೂ ಕಂದಾಯ ಕಾನೂನು1964ರ ಅಡಿ ಉಪ ಕಲಂ 94ಡಿ ಇದರ ಅಡಿ ಸರಕಾರಕ್ಕೆ ಇದನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವಂತೆ ಮನವಿ ಸಲ್ಲಿಸಲಾಗಿತ್ತು.ಈಗ ಬಸಾಪುರ ಕಂದಾಯ ಗ್ರಾಮವಾಗಿ ಘೋಷಿಸಲಪಟ್ಟಿದೆ ತಹಸೀಲ್ದಾರ್‌ ವಾಸುದೇವ ವಿ. ಸ್ವಾಮಿ ಹೇಳಿದರು.