ಕುಷ್ಟಗಿ: ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತ, ಬಸವ ಸಮಿತಿ, ಜಾಗತಿಕ ಲಿಂಗಾಯತ ಸಮಾಜ,ಅಖಿಲ ಭಾರತ ವೀರಶೈವ ಸಮಾಜ,ವಿವಿಧ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಲಿಂಗಾಯತ ಸಮಾಜದ ಮುಖಂಡ ಶಶಿಧರ ಕವಲಿ ಮಾತನಾಡಿ, ಬಸವ ಜಯಂತಿಯ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಇರುವಿಕೆ ಕಡಿಮೆಯಾಗುತ್ತಿದ್ದು ತಹಸೀಲ್ದಾರ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಮೂಲಕ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅದ್ಧೂರಿ ಆಚರಣೆ ಮುಂದಾಗಬೇಕು ಎಂದರು.
ಪುರಸಭೆ ಮಾಜಿ ಸದಸ್ಯ ವಸಂತಪ್ಪ ಮೇಲಿನಮನಿ ಮಾತನಾಡಿ, ಬಸವ ಜಯಂತಿ ಸೇರಿದಂತೆ ಎಲ್ಲ ಜಯಂತಿ ಕಾರ್ಯಕ್ರಮದಲ್ಲೂ ಇಲಾಖೆಯಿಂದ ಕನಿಷ್ಟ ಐದು ಜನ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಬೇಕು. ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸುವ ನೆಪದಲ್ಲಿ ಪೋಟೊ ತೆಗೆದುಕೊಂಡು ಹೋಗುತ್ತಿರುವದು ಕಂಡು ಬರುತ್ತಿದ್ದು ಹೀಗಾಗದಂತೆ ನೋಡಿಕೊಳ್ಳಬೇಕಿದೆ ಎಂದ ಅವರು, ಜಯಂತಿ ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಆಗಮಿಸುವಂತೆ ಎಚ್ಚರಿಕೆ ನೀಡಬೇಕು ಕಾಟಾಚಾರಕ್ಕಾಗಿ ಕಾರ್ಯಕ್ರಮ ಮಾಡದೆ ಶರಣರ ತತ್ವ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.ಬಸವರಾಜ ಗಾಣಿಗೇರ ಮಾತನಾಡಿ, ಸರ್ಕಾರದಿಂದ ನಡೆಯುವ ಜಯಂತಿ ಕೇವಲ ಒಂದೆ ಸಮಾಜಕ್ಕೆ ಮೀಸಲಿಡದೆ ಎಲ್ಲ ಸಮಾಜದವರು ಇರುವಂತೆ ಒಂದು ವಾಟ್ಸಾಪ್ ಗ್ರುಪ್ ರಚನೆ ಮಾಡುವ ಮೂಲಕ ಜಯಂತಿಯ ಮಾಹಿತಿ ಎಲ್ಲರಿಗೂ ತಿಳಿಸುವ ಕೆಲಸ ಮಾಡಬೇಕು. ಎಲ್ಲ ಸಮುದಾಯ ಹಾಗೂ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕು ಎಂದರು.
ಈ ಸಂದರ್ಭ ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಉಮಾಪತಿ ಅಕ್ಕಿ, ಗ್ರೇಡ್ 2 ತಹಸೀಲ್ದಾರ ರಜನಿಕಾಂತ, ವಿರೇಶ ಬಂಗಾರಶೆಟ್ಟರ, ಬಸನಗೌಡ ಪಾಟೀಲ, ಶಿವಾಜಿ ಹಡಪದ ಸೇರಿದಂತೆ ಅನೇಕರು ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.